ಚಿಕ್ಕಮಗಳೂರು-ವಿಶ್ವ ಎದುರಿಸುತ್ತಿರುವ ಸಮಸ್ಯೆಗಳಿಗೆ ಬಸವ ತತ್ವಗಳೇ ಪರಿಹಾರ-ವಿಧಾನ ಪರಿಷತ್ ಶಾಸಕ ಸಿ ಟಿ ರವಿ

ಚಿಕ್ಕಮಗಳೂರು :ಸಮಾಜದಲ್ಲಿ ಎಲ್ಲಾ ಮನುಜರು ಸಮಾನರಾಗಿದ್ದು, ವಿಶ್ವವೇ ಒಂದು ಕುಟುಂಬ ಎಂದು ಸಾರಿದ ಬಸವಣ್ಣನವರು ವಿಶ್ವ ಪ್ರೇಮದ ಅನುಸಂಧಾನಕ್ಕೆ ಕಾರಣರಾದವರು. ಅವರ ಮಾನವ ತತ್ವಗಳನ್ನು ಅಧ್ಯಯನ ಮಾಡಿದರೆ ವಿಶ್ವ ಇಂದು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ದೊರಕುತ್ತದೆ ಎಂದು ವಿಧಾನ ಪರಿಷತ್ ಶಾಸಕ ಸಿ.ಟಿ ರವಿ ಹೇಳಿದರು.

ಜಿಲ್ಲಾಡಳಿತ ವತಿಯಿಂದ ಇಂದು ನಗರದ ಕುವೆಂಪು ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ಬಸವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

‘ನಮ್ಮಲ್ಲಿ ಅನೇಕ ಮಹಾಪುರುಷರು, ಸಾಮಾಜಿಕ ಕ್ರಾಂತಿ ಮಾಡಿ ಹೋಗಿದ್ದಾರೆ. ಅಂಥವರನ್ನು ನಾವು ಒಂದು ಸಮುದಾಯ ಅಥವಾ ಒಂದು ಜನಾಂಗಕ್ಕೆ ಸೀಮಿತಗೊಳಿಸುತ್ತಿರುವುದು ದುರಂತದ ವಿಚಾರ. ಬಸವಣ್ಣನವರನ್ನೂ ನಾವೆಲ್ಲೋ ಹಿಡಿದಿಟ್ಟಂತೆ ಕಾಣಿಸುತ್ತಿದೆ. ಇಂಥ ಮಹಾಪುರು?ರು ಸಾರ್ವಕಾಲಿಕ ಮತ್ತು ಇವರ ಸಿದ್ಧಾಂತವನ್ನು ಎಲ್ಲ ವರ್ಗದವರೂ ಅನುಸರಿಸಬೇಕಾಗಿದೆ’ ಎಂದರು.

ಅರ್ಥರಹಿತ ಆಚರಣೆಗಳನ್ನು ವಿರೋಧಿಸಿ, ಆಚಾರವೇ ಸ್ವರ್ಗ ಅನಾಚಾರವೇ ನರಕ ಎಂಬ ತತ್ವವನ್ನು ಸಾರಿ ತಮ್ಮ ವಿಚಾರಧಾರೆಯಿಂದ ಧರ್ಮಕ್ಕೆ ವೈಚಾರಿಕ ಸ್ಪರ್ಶವನ್ನು ನೀಡಿದ ಮಹಾನ್ ಸಾಮಾಜಿಕ ವಿಜ್ಞಾನಿ ಬಸವಣ್ಣನವರು. ಅವರ ಸಮಾನತೆ, ಸಹಬಾಳ್ವೆ, ಭಾತೃತ್ವ, ಏಕತೆ ಚಿಂತನೆಗಳನ್ನು ಅಳವಡಿಸಿಕೊಂಡರೆ ಪ್ರತಿಯೊಬ್ಬರು ಉತ್ತಮ ಜೀವನವನ್ನು ನಡೆಸಬಹುದು ಎಂದರು.

ವಚನ ಚಳುವಳಿಯಲ್ಲಿ ಭಾಗವಹಿಸಿದ ಪ್ರತಿ ಶರಣರು ಆತ್ಮ ಸಾಕ್ಷಿಯನ್ನು ಆಧಾರವಾಗಿಟ್ಟುಕೊಂಡು, ಜೀವನದ ಮೌಲ್ಯವನ್ನು ಪಾಲಿಸಿಕೊಂಡು ಬಂದವರು. ಅದೇ ರೀತಿ ಜೀವನದ ನೀತಿ ಸಂಹಿತೆಯನ್ನು ರೂಪಿಸಿಕೊಟ್ಟ ಬಸವಣ್ಣನವರು, ಶುದ್ಧ ನಡೆಯಿಲ್ಲದೇ ಯಾವುದೇ ವ್ಯಕ್ತಿಗೆ ವಚನ ಭೋಧಿಸುವ ಹಕ್ಕಿಲ್ಲ ಎಂಬ ತತ್ವವನ್ನು ಪ್ರತಿಪಾದಿಸಿದರು ಎಂದರು.



ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನೈಸರ್ಗಿಕ ಕೃಷಿಕರು, ಕೃಷಿ ನಿವಾಸಿ ಶ್ರೀ ಚಂದ್ರಶೇಖರ್ ನಾರಾಯಣಪುರ ಉಪನಾಸ್ಯ ನೀಡಿ ಸಮಾಜದಲ್ಲಿ ಅರಾಜಕತೆ ಸೃಷ್ಟಿಯಾಗಿದ್ದ ಸಂದರ್ಭದಲ್ಲಿ ಸಂಕಷ್ಟಗಳನ್ನು ಎದುರಿಸಿ ಬೃಹತ್ ಸಮೂಹಕ್ಕೆ ಸಾಮಾಜಿಕ ನ್ಯಾಯಕ್ಕಾಗಿ ಬದುಕಿ ತಮ್ಮ ಜೀವವನ್ನು ತೆತ್ತವರು ಸಾಂಸ್ಕೃತಿಕ ಚಳುವಳಿಯ ಸರ್ವ ಸಮರ್ಪಣ ಮಹಾನಾಯಕ ಬಸವಣ್ಣ.

ವಚನಗಳು ಎಂದೂ ಆಚರಣೆಯ ವೈಶಿಷ್ಟ್ಯಗಳನ್ನು ಬಿಂಬಿಸಲಿಲ್ಲ ಬದಲಾಗಿ ಸಾಮಾಜಿಕ ಸಂಕಷ್ಟಗಳನ್ನು ಪ್ರತಿಪಾದಿಸಿದವು. ಪ್ರತಿ ಹಂತದಲ್ಲಿಯು ನಿರ್ಣಾಯಕ ಸಂಗತಿಯಾಗಿರುವ ಜಾತಿಯ ವಿನಾಶಕ್ಕೆ ತುಡಿದ ಬಸವಣ್ಣನ ಆಶಯಗಳನ್ನು ಸಮಾಜದಲ್ಲಿ ವ್ಯಾಪಿಸಲು ಮನುವಾದಿಗಳು ಬಿಡುತ್ತಿಲ್ಲ. ಜಾತಿ ವ್ಯವಸ್ಥೆಯು ಇಂದಿಗೂ ಅಳಿಯದೇ ಉಳಿದಿರುವುದು ದುರಂತ.

ವಚನ ಸಾಹಿತ್ಯವು ಕನ್ನಡದ ಶ್ರೇಷ್ಠ ಸಾಹಿತ್ಯವಾಗಿ ಹೊರಹೊಮ್ಮಿದೆ. ವಚನವೆಂದರೆ ಸಾಂಸ್ಕೃತಿಕ ಸಂವಿಧಾನವಾಗಿದ್ದು, ಜೀವನ ನಡೆಸುವ ವಿಧಾನವಾಗಿದೆ. ಸಾಮಾಜಿಕ ಬಿಕ್ಕಟ್ಟನ್ನು ನಿವಾರಿಸಲು ಇರುವ ಪರಿಹಾರ ಬಸವಣ್ಣನ ತತ್ವಗಳು .

ವಚನಗಳನ್ನು ಆಚರಣಾ ವಿಧಾನದಿಂದ ದಕ್ಕಿಸಿಕೊಳ್ಳಬಹುದೇ ಹೊರತು ಕೇವಲ ಓದಿನಿಂದಲ್ಲ. ವಚನಗಳು ನಮ್ಮ ನಿಲುವು ಹಾಗೂ ವ್ಯಕ್ತಿತ್ವವನ್ನು ಅಮೂಲಾಗ್ರವಾಗಿ ಬದಲಾಯಿಸಬಲ್ಲವು. ಕೇವಲ ವೇದ ಉಪನಿಷತ್ತುಗಳನ್ನು ಜ್ಞಾನವೆಂದು ಪರಿಗಣಿಸಿದ್ದ ಸಮಯದಲ್ಲಿ ಶ್ರಮ ಮತ್ತು ಕಾಯಕವನ್ನು ಜ್ಞಾನದ ಮಾರ್ಗವನ್ನಾಗಿ ವಚನಗಳು ನಿರೂಪಿಸಿತು.

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಹೆಚ್.ಡಿ ತಮ್ಮಯ್ಯ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಾತನಾಡಿ, ಪ್ರಭುತ್ವವನ್ನು ವಿರೋಧಿಸಿ, ತುಳಿತಗೊಳಗಾದವರ ನೇತೃತ್ವವನ್ನು ವಹಿಸಿಕೊಂಡು ಸಮಾಜದಲ್ಲಿ ಬದಲಾವಣೆಯನ್ನು ತರುವ ಉದ್ದೇಶದಿಂದ ಎಲ್ಲವನ್ನು ದಿಕ್ಕರಿಸಿ ತಮ್ಮ ಜೀವನವನ್ನು ಮುಡಿಪಾಗಿಟ್ಟು, ೧೨ನೇ ಶತಮಾನದಲ್ಲಿ ನುಡಿದಂತೆ ನಡೆಯುತ್ತಾ ವಿಶ್ವಗುರುವಾಗಿ ರೂಪುಗೊಂಡವರು ಬಸವಣ್ಣ ಎಂದರು.

 ಬಸವಣ್ಣನ ಕ್ರಾಂತಿ ಜಾಗತಿಕ ಮಟ್ಟದ ದೊಡ್ಡ ಸಾಧನೆ. ಆದರೆ ಅಂದಿನ ಕಾಲದ ಕೆಲವು ಸಮಸ್ಯೆಗಳಿಂದಾಗಿ ಆ ಕ್ರಾಂತಿ ಜಗತ್ತಿನ ಗಮನ ಸೆಳೆದಿಲ್ಲ. ಇಂದು ಕೆಲವು ಮಠಮಾನ್ಯಗಳು, ಹಿರಿಯ ವಿದ್ವಾಂಸರು ವಚನ ಸಾಹಿತ್ಯ ಹಾಗೂ ಅಂದಿನ ಕ್ರಾಂತಿಯನ್ನು ಜಗತ್ತಿಗೆ ಪರಿಚಯಿಸುವ ಕೆಲಸ ಮಾಡುತ್ತಿದ್ದಾರೆ.. ಕೇವಲ ಕಾಯಿದೆ-ಕಾನೂನಿನಿಂದ ಸಾಮಾಜಿಕ ಪರಿವರ್ತನೆ ಸಾಧ್ಯವಿಲ್ಲ. ಮನಸ್ಸುಗಳು ಬದಲಾಗಬೇಕು. ಹೀಗಾಗಿ ಸದಾ ಕಾಲಕ್ಕೂ ಪ್ರಸ್ತುತವಾಗಿರುವ ಬಸವಣ್ಣನವರ ಚಿಂತನೆಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕೆಂದರು.

ನಗರಸಭೆ ಅಧ್ಯಕ್ಷ ಸುಜಾತ ಶಿವಕುಮಾರ್ ಮಾತನಾಡಿ, ಕರ್ನಾಟಕದಲ್ಲಿ ಸಾಮಾಜಿಕ ಕ್ರಾಂತಿಯನ್ನು ಮಾಡಿ, ಸಮಾನತೆಯನ್ನು ಪ್ರತಿಪಾದಿಸಿದ ಬಸವಣ್ಣನವರ ತತ್ವಗಳು ಕೇವಲ ಸರ್ಕಾರಿ ಕಾರ್ಯಕ್ರಮದ ವಸ್ತುವಾಗದೇ, ಪ್ರತಿಯೊಬ್ಬರು ಬಸವಣ್ಣನವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ರಮೇಶ.ಸಿ ಎಲ್ಲಾರನ್ನು ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ , ಜಿ.ಪಂ ಮುಖ್ಯ ಕಾರ್ಯನಿರ್ವಾಹಣಾದಿಕಾರಿ ಕೀರ್ತನಾ ಹೆಚ್.ಎಸ್, ಬೆಂಗಳೂರು ಕ.ರಾ.ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮದ ಅಧ್ಯಕ್ಷ ಬಿ.ಹೆಚ್ ಹರೀಶ್, ಉಪವಿಭಾಗಾಧಿಕಾರಿ  ದೇವರಾಜ್, ತಹಶಿಲ್ದಾರ್ ರೇಷ್ಮಾ ಕೆ.ಎಸ್, ಜಿಲ್ಲಾ ಗ್ಯಾರಂಟಿ ಯೋಜನೆ ಅಧ್ಯಕ್ಷ ಶಿವನಾಂದ ಸ್ವಾಮಿ, ಸಮಾಜ ಮುಖಂಡ ಕೆ.ಟಿ ರಾಧಕೃಷ್ಣ , ಹಾಗೂ  ದೌರ್ಜನ್ಯ ಸಮಿತಿ ಸದಸ್ಯ ಲಕ್ಷ್ಮಣ್,  ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

× How can I help you?