ಚಿಕ್ಕಮಗಳೂರು- ಪ್ರತಿಯೊಬ್ಬರೂ ಪರಿಸರ ರಕ್ಷಣೆ ಮಾಡಿ- ಶಿಕ್ಷಕಿ ಪ್ರಮೀಳಾ ಗುಣಶೇಖರ್

ಚಿಕ್ಕಮಗಳೂರು,ಜೂ.06:- ಮಾನವ ಜನಾಂಗದ ಅಳಿವು ಉಳಿವು ಪರಿಸರ ಸಂರಕ್ಷಣೆಯಲ್ಲಿ ಅಡಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಪರಿಸರ ರಕ್ಷಣೆ ಮಾಡುವಂತೆ ಸಿಎಂಎಸ್‌ಎಸ್‌ಎಸ್ ಸಂಸ್ಥೆಯ ಸಮುದಾಯ ಶಿಕ್ಷಕಿ ಪ್ರಮೀಳಾ ಗುಣಶೇಖರ್ ಹೇಳಿದರು.

ಅವರು ಗುರುವಾರ ತಾಲ್ಲೂಕಿನ ಮಲ್ಲೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾವಿಕಟ್ಟೆ ಗ್ರಾಮದಲ್ಲಿ ಸಿಎಂಎಸ್‌ಎಸ್‌ಎಸ್ ಹಾಗೂ ಪ್ರಗತಿ ಮಹಾ ಸಂಘದ ವತಿಯಿಂದ ನಡೆದ ವಿಶ್ವ ಪರಿಸರ ದಿನಾಚರಣೆಯಲ್ಲಿ ಗಿಡ ನೆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಳೆದ ಹಲವಾರು ವರ್ಷಗಳಿಂದ ಸಂಸ್ಥೆಯ ವತಿಯಿಂದ ಎಲ್ಲಾ ಮಹಿಳಾ ಸಂಘಗಳನ್ನು ಒಂದುಗೂಡಿಸಿ ಪ್ರತಿವರ್ಷ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಗ್ರಾಮಗಳಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ಸಂಸ್ಥೆಯ ನಿರ್ದೇಶಕ ಫಾ.ಶಾಂತರಾಜ್ ಆರ್ ಮತ್ತು ನಿಯೋಜಿತ ನಿರ್ದೇಶಕ ಫಾ,ಆಲ್ವಿನ್ ಡಿಸೋಜಾ ಅವರ ಮಾರ್ಗದರ್ಶನದಲ್ಲಿ ಹಮ್ಮಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.

ಆಧುನಿಕ ಯುಗದಲ್ಲಿ ಮಾನವನ ದುರಾಸೆಯಿಂದ ಅರಣ್ಯ ವಿನಾಶದ ಅಂಚಿಗೆ ತಲುಪುತ್ತಿದೆ. ನಾವುಗಳು ಎಚ್ಚೆತ್ತುಕೊಳ್ಳದಿದ್ದಲ್ಲಿ ಮುಂದಿನ ಪೀಳಿಗೆಗೆ ಪರಿಸರ ಉಳಿಯುವುದು ಸಂಶಯವಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಮನೆಗಳ ಸುತ್ತಮುತ್ತ ಗಿಡಗಳನ್ನು ನೆಡುವಂತೆ ಮನವಿ ಮಾಡಿದರು.

ಶ್ರೀ ದೇವಿರಮ್ಮ ವಿದ್ಯಾ ಸಂಸ್ಥೆ ಅಧ್ಯಕ್ಷ ಜೆ.ಎಸ್.ರುದ್ರಮೂರ್ತಿ ಮಾತನಾಡಿ, ಪರಿಸರ ದಿನಾಚರಣೆ ಎಂಬುದು ಒಂದು ದಿನಕ್ಕೆ ಸೀಮಿತವಾಗಿರಬಾರದು. ಆರೋಗ್ಯಕರ ಜೀವನಕ್ಕಾಗಿ ಪರಿಸರ ಪ್ರಮುಖ ಪಾತ್ರ ವಹಿಸುತ್ತದೆ. ಈ ನಿಟ್ಟಿನಲ್ಲಿ ಸಮಾಜದ ನಾಗರೀಕರು ಹೆಚ್ಚು ಪರಿಸರದ ಕಾಳಜಿ ವಹಿಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶ್ರೀ ದೇವಿರಮ್ಮ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಎಂ.ಆರ್.ಹೇಮಲತಾ, ಶಾಲಾ ಮುಖ್ಯ ಶಿಕ್ಷಕಿ ಚಂದ್ರಕಲಾ, ಪ್ರಗತಿ ಮಹಾ ಸಂಘದ ಪದಾಧಿಕಾರಿಗಳು, ಚೈತನ್ಯ ಸಂಘದ ಅಧ್ಯಕ್ಷೆ ಸಮಿತ, ರೋಹಿಣಿ ಸಂಘದ ಅಧ್ಯಕ್ಷೆ ಶಶಿಕಲಾ, ಶ್ರೀದೇವಿ ಸಂಘದ ಅಧ್ಯಕ್ಷೆ ಭಾಗ್ಯ ಸೇರಿದಂತೆ ವಿವಿಧ ಮಹಿಳಾ ಸಂಘದ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

– ಸುರೇಶ್‌ ಎನ್.

Leave a Reply

Your email address will not be published. Required fields are marked *