ಚಿಕ್ಕಮಗಳೂರು, ಮೇ.28:- ಪೌರ ನೌಕರರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಎರಡನೇ ದಿನಕ್ಕೆ ಕಾಲಿಟ್ಟ ಮುಷ್ಕರಕ್ಕೆ ಪಕ್ಷಾತೀತವಾಗಿ ನಗರಸಭಾ ಸದಸ್ಯರುಗಳು ಬುಧವಾರ ಬೆಂಬಲ ಸೂಚಿಸಿ ಸರ್ಕಾರಕ್ಕೆ ನೌಕರರ ಬೇಡಿಕೆಗಳನ್ನು ಶೀಘ್ರವೇ ಪೂರೈಸಬೇಕು ಎಂದು ಒತ್ತಾಯಿಸಿದರು.
ಈ ಕುರಿತು ಮಾತನಾಡಿದ ನಗರಸಭಾ ಸದಸ್ಯ ಮುನೀರ್ ಅಹ್ಮದ್ ಪೌರ ನೌಕರರು ಮೂಲಬೇಡಿಕೆ ಗಳನ್ನು ಈಡೇರಿಸುವುದು ಸರ್ಕಾರದ ಆದ್ಯ ಕರ್ತವ್ಯ. ಹೀಗಾಗಿ ಶಾಸಕರು, ಸಚಿವರುಗಳು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವ ಮೂಲಕ ಬೇಡಿಕೆ ಪೂರೈಸಲು ಶ್ರಮಿಸಬೇಕು ಎಂದರು.
ಇತ್ತೀಚಿನ ದಿನಗಳಲ್ಲಿ ವಿಪರೀತ ಮಳೆಯಿಂದ ಡೆಂಗ್ಯೂ ಸೇರಿದಂತೆ ಜ್ವರಬಾಧೆ ಹೆಚ್ಚಾಗುವ ಸಂಭವ ವಿದೆ. ಅಲ್ಲದೇ ರಾಜ್ಯದಲ್ಲಿ ಮತ್ತೊಮ್ಮೆ ಕೋವಿಡ್ ಆತಂಕ ಎದುರಾಗುತ್ತಿರುವ ಕಾರಣ ಈ ಸಮಯದಲ್ಲಿ ಪೌರ ನೌಕರರು ಕೆಲಸಕ್ಕೆ ರಜೆಗೊಳಿಸಿ ಪ್ರತಿಭಟನೆಗೆ ಮುಂದಾದರೆ ಆರೋಗ್ಯಪೂರ್ಣ ಸಮಾಜ ಹದಗೆಡ ಲಿದೆ ಎಂದು ಎಚ್ಚರಿಸಿದರು.

ಪ್ರತಿದಿನದ ಪೌರ ನೌಕರರ ಕೆಲಸ-ಕಾರ್ಯಗಳಿಂದ ನಗರ, ಪಟ್ಟಣಗಳು ಆರೋಗ್ಯಪೂರ್ಣವಾಗಿದೆ. ಈ ಸಂದರ್ಭದಲ್ಲಿ ನೌಕರರ ಸಣ್ಣಮಟ್ಟಿನ ಬೇಡಿಕೆಗಳು ಶೀಘ್ರವೇ ಈಡೇರಿಸುವುದು ಸರ್ಕಾರ ಕಾಯಕವಾಗಿದೆ. ಆ ನಿಟ್ಟಿನಲ್ಲಿ ಇಂದು ಪಕ್ಷಾತೀತವಾಗಿ ನಗರಸಭಾ ಸದಸ್ಯರುಗಳು ಒಕ್ಕೊರಲಿನಿಂದ ನೌಕರರ ಮುಷ್ಕರಕ್ಕೆ ಬೆಂಬಲ ಸೂಚಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಪೌರ ನೌಕರರ ಸಂಘದ ಅಧ್ಯಕ್ಷ ಅಣ್ಣಯ್ಯ, ನಗರಸಭಾ ಉಪಾಧ್ಯಕ್ಷೆ ಅನು ಮಧು ಕರ್, ಸದಸ್ಯರಾದ ಕಾಯಿರವಿ, ಮಂಜುಳಾ, ಇಂದಿರಾ ಶಂಕರ್, ಲಕ್ಷ್ಮಣ್, ಪ್ರಕಾಶ್ ರೈ ಮತ್ತಿತರರು ಹಾಜರಿದ್ದರು.
- ಸುರೇಶ್ ಎನ್.