
ಚಿಕ್ಕಮಗಳೂರು-ವಿದ್ಯಾರ್ಥಿದೆಸೆಯಿಂದಲೇ ಪಠ್ಯದ ಕಡೆ ಗಮನಹರಿಸಬೇಕು. ಓದಿನ ಸಮಯದಲ್ಲಿ ಕಾಲಹರಣ ಮಾಡದೇ ಶ್ರದ್ದೆಯಿಂದ ವಿದ್ಯಾಭ್ಯಾಸ ಹಾಗೂ ಕ್ರೀಡಾಕೂಟದಲ್ಲಿ ತೊಡಗಿಸಿಕೊಂಡರೆ ಭವಿಷ್ಯದಲ್ಲಿ ಸಾಧನೆಯ ಮೆಟ್ಟಿಲೇರಲು ಸಾಧ್ಯ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಕೆ.ಎನ್. ಪ್ರವೀಣ್ ಹೇಳಿದರು.
ನಗರದ ಹೌಸಿಂಗ್ ಬೋರ್ಡ್ ಸಮೀಪದ ಶ್ರೀ ಆದಿಚುಂಚನಗಿರಿ ಟ್ರಸ್ಟ್ ನ ಶ್ರೀ ಮಂಜುನಾಥ ವಿದ್ಯಾ ಕೇಂದ್ರ, ಶ್ರೀ ಆದಿಚುಂಚನಗಿರಿ ಪ್ರೌಢಶಾಲೆ ಮತ್ತು ಬಿಜಿಎಸ್ ಪದವಿ ಪೂರ್ವ ಕಾಲೇಜಿನ ಚುಂಚೋತ್ಸವ ಕಾರ್ಯಕ್ರಮವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಕಲಿಕೆಯ ಮೊದಲ ಹಂತದ ಮೆಟ್ಟಿಲಾಗಿರುತ್ತದೆ. ವಿದ್ಯಾರ್ಥಿಗಳು ಅವರಿವರ ಮಾತುಗಳನ್ನು ಆಲಿಸದೇ ಕಲಿಕೆ ಹಾಗೂ ಆಸಕ್ತಿ ಹೊಂದಿರುವ ಪಠ್ಯಕ್ಕೆ ಮೊದಲ ಆದ್ಯತೆ ಕೊಟ್ಟು ಅಭ್ಯಾಸಿಸಿದರೆ ಮಾತ್ರ ನಿಗಧಿತ ಗುರಿ ತಲುಪಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ನಗರಸಭಾ ಸದಸ್ಯೆ ಕವಿತಾ ಶೇಖರ್ ಮಾತನಾಡಿ, ಪ್ರಾಥಮಿಕ ಶಾಲಾ ದಾಟಿ ಪ್ರೌಢ ಹಾಗೂ ಕಾಲೇಜು ಮೆಟ್ಟಿಲು ಹತ್ತುವ ವಿದ್ಯಾರ್ಥಿಗಳು ಹೆಚ್ಚು ಕ್ರಿಯಾಶೀಲರಾಗಿರಬೇಕು. ಓದಿನಲ್ಲಿ ಹಿಂದೇಟು ಹಾಕದೇ ವಿನಯದಿಂದ ಶ್ರಮವಹಿಸಿದರೆ ಮಾತ್ರ ಪಾಲಕರು ಹಾಗೂ ಶಾಲೆಯ ಶಿಕ್ಷಕರ ಶ್ರಮಕ್ಕೆ ಪ್ರತಿಫಲ ಸಿಗಲಿದೆ ಎಂದು ಹೇಳಿದರು.

ಇತೀಚೆಗೆ ಆನ್ಲೈನ್ ಆಟಗಳು ಹೆಚ್ಚಾಗಿರುವ ಕಾರಣ ಓದಿನಲ್ಲಿ ವಿದ್ಯಾರ್ಥಿಗಳು ಹಿನ್ನೆಡೆ ಆಗುತ್ತಿರುವುದು ಕಾಣುತ್ತಿದ್ದೇವೆ. ಓದುವ ವಯಸ್ಸಿನಲ್ಲಿ ಹೆಚ್ಚು ಮೊಬೈಲ್ ಅಥವಾ ಇನ್ನಿತರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಜೀವನಪೂರ್ತಿ ಮರೆಯಲಾರದಂಥ ಸಂಕಷ್ಟಗಳು ಎದುರಾಗುವ ಸಂಭವವಿದ್ದು, ಇವುಗಳಿಗೆ ಆಸ್ಪದ ನೀಡದೇ ಓದಿನ ಕಡೆ ಗಮನಹರಿಸಬೇಕು ಎಂದರು.
ಶಿಕ್ಷಣ ಸಂಯೋಜಕ ಕೃಷ್ಣಮೂರ್ತಿ ರಾಜ್ ಅರಸ್ ಮಾತನಾಡಿ, ವ್ಯಾಸಂಗದಲ್ಲಿ ಅತಿಹೆಚ್ಚು ಅಂಕಗಳಿಸಿ ಉತ್ತೀರ್ಣರಾದವರು, ಕೆಲವೊಮ್ಮೆ ಜೀವನವೆಂಬ ಬದುಕಿನಲ್ಲಿ ಸೋಲುಂಡಿದ್ದಾರೆ. ಅದೇ ಕೊನೆ ಬೆಂಚ್ನ ವಿದ್ಯಾರ್ಥಿಗಳು ಓದಿನಲ್ಲಿ ಹಿನ್ನೆಡೆ ಹೊಂದಿದ್ದರೆ, ಜೀವನದಲ್ಲಿ ಮುನ್ನೆಡೆ ಸಾಧಿಸುವುದರಲ್ಲಿ ಮುಂದಿದ್ದು ವಿದ್ಯಾರ್ಥಿಗಳು ದೃತಿಗೆಡದೇ ಕಲಿಕೆಯಲ್ಲಿ ತೊಡಗಬೇಕು ಎಂದು ಹೇಳಿದರು.
ಇದೇ ವೇಳೆ ವಿವಿಧ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ಹಾಗೂ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜಿಎಸ್ ಪಿಯು ಕಾಲೇಜಿ ಪ್ರಾಂಶುಪಾಲ ಜೆ.ಜಿ.ಸುರೇಂದ್ರ ವಹಿಸಿದ್ದರು. ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಜಿ.ಆರ್.ಚಂದ್ರಶೇಖರ್ ಮತ್ತಿತರರಿದ್ದರು.
——–—–ಸುರೇಶ್