
ಚಿಕ್ಕಮಗಳೂರು-ಕನ್ನಡ ಭಾಷೆ ನಮ್ಮ ನೆಲ,ಸಂಸ್ಕೃತಿ ಹಾಗೂ ನಾಡಿನ ಪರಂಪರೆಯ ಅಸ್ಮಿತೆ.ದೇಶದಲ್ಲೇ ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಗಳಿಸಿದ ಪುಣ್ಯ ಭೂಮಿಯಲ್ಲಿ ಜನಿಸಿರುವುದಕ್ಕೆ ನಾವುಗಳು ಹೆಮ್ಮೆಪಡಬೇಕು ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ಹೇಳಿದರು.
ನಗರದ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ಧ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವದಲ್ಲಿ ಹಲವಾರು ಭಾಷೆಗಳಲ್ಲಿ ಅತ್ಯಂತ ಸುಂದರ ಭಾಷೆ ಕನ್ನಡ.ಆಯಾ ಪ್ರದೇಶದ ನಿವಾಸಿಗಳು ಭಾಷೆಯ ಸಂಸ್ಕೃತಿ ಉಳಿಸಿದಂತೆ,ಪುರಾತನ ಇತಿಹಾಸವುಳ್ಳ ಕನ್ನಡತನವನ್ನು ಉಳಿಸಿ ಎಲ್ಲೆಡೆ ಹಬ್ಬಿಸುವ ಕಾರ್ಯ ಮಾಡಬೇಕು. ಆಗ ಮಾತ್ರ ಮುಂದಿನ ಪೀಳಿಗೆಗೆ ಕನ್ನಡಭಾಷೆಯ ಇತಿಹಾಸ ಕೊಂಡೊಯ್ಯಲು ಸಾಧ್ಯ ಎಂದರು.
ತಾoತ್ರಿಕ ಕಾಲೇಜಿನಲ್ಲಿ ವಿವಿಧ ರಾಜ್ಯದ ವಿದ್ಯಾರ್ಥಿಗಳು ವ್ಯಾಸಂಗದಲ್ಲಿ ತೊಡಗಿದ್ದು ಕನ್ನಡದ ಬಳಕೆ ಸಾಧ್ಯವಿಲ್ಲ ಎಂದೆನಿಸಿತ್ತು.ಆದರೀಗ ಕಾಲೇಜು ಯುವಕ-ಯುವತಿಯರ ನಾಡಿನ ಸಂಸ್ಕೃತಿ ಪ್ರತಿಬಿಂಬಿಸುವ ವಸ್ತ್ರದಲ್ಲಿ ಅತ್ಯಂತ ವಿಜೃಂಭ್ರಣೆಯಿoದ ಪಾಲ್ಗೊಂಡು ಯಶಸ್ವಿಗೊಳಿಸಿ ನಮ್ಮ ಕಲ್ಪನೆಯನ್ನು ಸುಳ್ಳಾಗಿಸಿದ್ದಾರೆ ಎಂದರು.
ಸಾಮಾನ್ಯವಾಗಿ ಭವಿಷ್ಯದಲ್ಲಿ ವಿದ್ಯಾರ್ಥಿಗಳು ವಿವಿಧ ಹುದ್ದೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಆಂಗ್ಲಭಾಷೆ ಅನಿವಾರ್ಯ. ಈ ಜೊತೆಗೆ ಮಾತೃಭಾಷೆಗೂ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ದೇಶ, ವಿದೇಶಗಳಲ್ಲಿ ಉದ್ಯೋಗ ಅರಸಿದರು ಕನ್ನಡತನ, ಭಾಷೆಯನ್ನು ಮರೆಯಕೂಡದು ಎಂದು ಕಿವಿಮಾತು ಹೇಳಿದರು.
ಕಸಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್ ಮಾತನಾಡಿ, ಕದಂಬರು, ಹೊಯ್ಸಳರು , ಚಾಲುಕ್ಯರು ನಾಡಿನ ಸಂಸ್ಕೃತಿ ಎತ್ತಿಹಿಡಿದ್ದರು. ವಿಜಯನಗರ ಹಾಗೂ ಮೈಸೂರು ಪ್ರಾಂತವನ್ನು ಆಳ್ವಿಕೆ ನಡೆಸಿದ ಅರಸರು, ಕವಿಸಂತರ ಗೀತೆಗಳು, ವಚನಗಳ ಮುಖಾಂತರ ಕನ್ನಡ ಭಾಷೆ ನಾಡಿನಾದ್ಯಂತ ತುಂಬಿ ಹರಿಯುತ್ತಿದೆ ಎಂದು ಹೇಳಿದರು.
ಶಿಲ್ಪಕಲೆಗಳ ತವರೂರು ಕರ್ನಾಟಕದಲ್ಲಿ ಹುಟ್ಟಿನಿಂದಲೇ ಶಾಂತಿ, ಸಹಬಾಳ್ವೆ ಹಾಗೂ ಸಹೋದರತ್ವ ಭಾವನೆ ಹೊಂದಿರುವ ಪ್ರಜೆಗಳು. ನೆಲ,ಜಲ,ನುಡಿಗೆ ಧಕ್ಕೆಯುಂಟಾದರೆ ತೊಡೆ ತಟ್ಟಿ ನಾಡದ್ರೋಹಿಗಳ ಹಿಮ್ಮೆಟ್ಟಿಸುವ ಶಕ್ತಿ ಹೊಂದಿರುವ ಕೆಚ್ಚದೆಯೇ ಕನ್ನಡಿಗರು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಐಟಿ ಪ್ರಾಂಶುಪಾಲ ಸಿ.ಟಿ.ಜಯದೇವಾ, ಕನ್ನಡವೆಂದರೆ ಸುಮ್ಮನೆಯಲ್ಲ. ಕನ್ನಡದ ಇತಿಹಾಸ ಪುರಾತನವಾದುದು.ವಿದ್ಯಾರ್ಥಿಗಳು ಭಾಷೆಯ ಇತಿಹಾಸ ತಿಳಿಯಲು ಸಮಗ್ರ ಅಧ್ಯಯನ ನಡೆಸುವುದು ಬಹಳ ಮುಖ್ಯ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಕನ್ನಡ ಭಾಷೆಯ ಬಗ್ಗೆ ಮಡಿವಂತಿಕೆ ಪ್ರಾರಂಭವಾಗಿದೆ. ಭಾಷೆ ನಾಶವಾದರೆ ಕನ್ನಡಿಗರು ನಾಶವಾದಂತೆ. ಆಂಗ್ಲಭಾಷೆ ಜೊತೆಗೆ ಕನ್ನಡವನ್ನು ಸ್ಪಷ್ಟವಾಗಿ ಉಚ್ಚರಿಸುವುದನ್ನು ಕಲಿಯಬೇಕು. ನಾಡಿಗಾಗಿ ಹೋರಾಟ ಕೈಗೊಳ್ಳದವರು, ದಿನಂಪ್ರತಿ ಕನ್ನಡದಲ್ಲೇ ವ್ಯವಹರಿಸಿದರೆ ಸಾಕು. ಅದೇ ಭಾಷೆಯ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಇದೇ ವೇಳೆ ಕಾಲೇಜಿನ ನೂರಾರು ಯುವಕ-ಯುವತಿಯರು ನಾಡಿನ ಸಂಸ್ಕೃತಿ ಪ್ರತಿಬಿಂಬಿಸುವ ವಸ್ತ್ರ ಧರಿಸಿ ಕುಣಿದು ಕುಪ್ಪಳಿಸಿದರು. ಕನ್ನಡಾಂಭೆ ಶ್ರೀ ಭುವನೇಶ್ವರಿಯನ್ನು ಕಾಲೇಜು ದ್ವಾರದಿಂದ ಕಸಾಪ ಮುಖಂಡರುಗಳು, ಕಾಲೇಜು ಸಿಬ್ಬಂದಿ, ವಿದ್ಯಾರ್ಥಿಗಳು ಕನ್ನಡಗೀತೆಗಳ ಮುಖಾಂತರ ಗೌರವದಿಂದ ಕರೆ ತಂದರು.
ಕಾರ್ಯಕ್ರಮದಲ್ಲಿ ಎಐಟಿ ಆಡಳಿತ ಮಂಡಳಿ ಸದಸ್ಯ ಕೆ.ಮೋಹನ್, ಮೆಕ್ಯಾನಿಕ್ ಇಂಜಿನಿಯರಿoಗ್ ವಿಭಾಗದ ಮುಖ್ಯಸ್ಥ ಜಿ.ಎಂ. ಸತ್ಯನಾರಾಯಣ್, ಎಲೆಕ್ಟ್ರಿಕ್ ಇಂಜಿನಿಯರ್ ವಿಭಾಗದ ವೀರೇಂದ್ರ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಮೋನಿಶಾ ಸಂಗಡಿಗರು ಪ್ರಾರ್ಥಿಸಿದರು.ಕು.ಮೌಲ್ಯ ಸ್ವಾಗತಿಸಿದರು.
——ಸುರೇಶ್