ಚಿಕ್ಕಮಗಳೂರು: “ಜಾನಪದ ಸಾಹಿತ್ಯ ಹಾಗೂ ಕಲೆಗಳು ಭಾರತೀಯ ಸಂಸ್ಕೃತಿಯನ್ನು ಶ್ರೀಮಂತಗೊಳಿಸುತ್ತಿವೆ” ಎಂದು ಸಾಹಿತಿ ಚಟ್ನಳ್ಳಿ ಮಹೇಶ್ ಹೇಳಿದರು.
ಜಿಲ್ಲಾ ಜಾನಪದ ಪರಿಷತ್ತು ವತಿಯಿಂದ ತರೀಕೆರೆ ತಾಲ್ಲೂಕು ತ್ಯಾಗದ ಬಾಗಿಯ ಶ್ರೀ ಸಿದ್ದೇಶ್ವರ ಸ್ವಾಮಿ ದೇವಸ್ಥಾನ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಜಾನಪದ ಸಾಹಿತಿಗಳ ಬದುಕು–ಬರಹ’ ವಿಚಾರ ಸಂಕಿರಣ ಮತ್ತು ಜಾನಪದ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಅವರು ಮುಂದುವರಿಸಿ, “ಹಲವಾರು ಜಾನಪದ ವಿದ್ವಾಂಸರು, ಸಾಹಿತಿಗಳು, ನಾಡಿನ ಜಾನಪದ ಕಲೆ, ಸಾಹಿತ್ಯ ಮತ್ತು ಸಂಗೀತವನ್ನು ಶ್ರೀಮಂತಗೊಳಿಸಿದ್ದಾರೆ. ಕನ್ನಡ ನಾಡಿನ ಮೂಲ ಜಾನಪದ ಸಂಸ್ಕೃತಿ, ಸಾಹಿತ್ಯ, ಸಂಗೀತ ಮತ್ತು ಕಲೆಗಳಿಂದ ಶಿಷ್ಟ ಸಾಹಿತ್ಯದ ಎಲ್ಲಾ ಸಂಗೀತ ಹಾಗೂ ಕಲಾ ಪ್ರಕಾರಗಳು ಹೆಮ್ಮರವಾಗಿ ಬೆಳೆಯಲು ಸಾಧ್ಯವಾಗಿದೆ,” ಎಂದರು.

ಜಾನಪದ ಸಾಹಿತ್ಯ ಹಾಗೂ ಸಂಸ್ಕೃತಿಯಿಂದ ಸಮಾಜದ ಅಂಕುಡೊಂಕುಗಳನ್ನು ತಿದ್ದು, ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯವಿದೆ. ಕುಟುಂಬ ಮತ್ತು ಸಮಾಜದ ಒಗ್ಗಟ್ಟು, ಆಹಾರ ಪದ್ಧತಿ, ಉಡುಗೆ–ತೊಡುಗೆ, ಧಾರ್ಮಿಕ ಆಚರಣೆಗಳು, ಸಹಕಾರ, ಹೊಂದಾಣಿಕೆ, ಜಾತ್ಯತೀತ ಮನೋಭಾವನೆ, ಬೆವರಿನ ಶ್ರಮ ಹಾಗೂ ದುಡಿಮೆ ಮುಂತಾದ ಮೌಲ್ಯಾಧಾರಿತ ಗುಣಗಳಿಂದ ನಮ್ಮ ಸಂಸ್ಕೃತಿಯನ್ನು ಜಾನಪದ ಶ್ರೀಮಂತಗೊಳಿಸಿದೆ. ಆದ್ದರಿಂದ ಇಂದಿನ ಯುವಕರು ಜಾನಪದ ಕಲೆ, ಸಾಹಿತ್ಯ ಮತ್ತು ಸಂಗೀತಕ್ಕೆ ಹೆಚ್ಚು ಒತ್ತು ನೀಡಬೇಕೆಂದು ಹೇಳಿದರು.
ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ. ಸುರೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, “ಜಾನಪದ ಸಂಸ್ಕೃತಿಯಿಂದ ಶಾಂತಿ ಮತ್ತು ಸೌಹಾರ್ದಯುತ ಸಮಾಜ ನಿರ್ಮಾಣ ಸಾಧ್ಯ. ನಮ್ಮ ಜಾನಪದರು ನಿಜ ಜೀವನದ ಅನುಭವ, ಕೃಷಿ ಹಾಗೂ ಬೆವರಿನ ಶ್ರಮ, ದುಡಿಮೆಯ ಮಹತ್ವ, ಗುರು ಹಿರಿಯರನ್ನು ಗೌರವಿಸುವಿಕೆ, ದಾನ ಧರ್ಮ, ತ್ಯಾಗ ಮನೋಭಾವನೆ, ಕುಟುಂಬ ಹಾಗೂ ಸಮಾಜದಲ್ಲಿ ಮಹಿಳೆಯ ಪ್ರಮುಖ ಪಾತ್ರ ಮುಂತಾದ ಮೌಲ್ಯಾಧಾರಿತ ಗುಣಗಳನ್ನು ಮೌಖಿಕ ಸಾಹಿತ್ಯದ ಮೂಲಕ ಜನರಲ್ಲಿ ಅರಿವು ಮೂಡಿಸಿದ್ದಾರೆ,” ಎಂದು ಹೇಳಿದರು.

ಜನಪದ ವಾದ್ಯಗಳನ್ನು ಉದ್ಘಾಟಿಸಿದ ಚಿಕ್ಕನಲ್ಲೂರು ಜಯಣ್ಣ ಮಾತನಾಡಿ, “ಜಾನಪದ ಕಲೆಗಳಾದ ವೀರಗಾಸೆ, ಡೊಳ್ಳುಕುಣಿತ, ಕೋಲಾಟ, ಭಜನೆ, ಜಾನಪದ ನೃತ್ಯ ಮುಂತಾದ ನೂರಾರು ಕಲೆಗಳನ್ನು ನಾವು ಕಲಾವಿದರು ಎಂದೆಂದೂ ಮರೆಯಬಾರದು. ಈ ಕಲೆಗಳನ್ನು ಮುಂದುವರಿಸುತ್ತಲೇ ಹೋಗಬೇಕು,” ಎಂದರು.
ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಬಿ.ಪಿ. ಪರಮೇಶ್ವರಪ್ಪರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ತರೀಕೆರೆ ತಾಲೂಕು ಅಧ್ಯಕ್ಷ ರಾಜಶೇಖರ್ ಅಧ್ಯಕ್ಷತೆ ವಹಿಸಿದ್ದರು. ಡಾ. ಮಾಳೇನಹಳ್ಳಿ ಬಸಪ್ಪ, ಸಂಗೀತ ವಿದ್ವಾನ್ ಜಗದೀಶ ಆಚಾರ್ ಮಾತನಾಡಿದರು.
ವೇದಿಕೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಜಿ.ಎಸ್. ತಿಪ್ಪೇಶ್, ಡಿಸಿಸಿ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ಮಹದೇವಪ್ಪ, ಗೌರವಾಧ್ಯಕ್ಷ ದೇವರಾಜು, ಜಿಲ್ಲಾ ಸಂಚಾಲಕಿ ಗಾಯತ್ರಿ, ಅಜ್ಜಂಪುರ ತಾಲೂಕು ಅಧ್ಯಕ್ಷ ಮರಳು ಸಿದ್ದಪ್ಪ ಮತ್ತಿತರರು ಉಪಸ್ಥಿತರಿದ್ದರು.