ಎಚ್.ಡಿ.ಕೋಟೆ, ಜೂನ್ 12: ವರ್ಷಗಳಿಂದ ಮೂಲ ಸೌಲಭ್ಯಗಳಿಲ್ಲದೆ ಬಡವರ ಬದುಕು ನರಕಯಾತನೆಯಾಗುತ್ತಿರುವ ಬೆಳತೂರು ಬಿ.ಕಾಲೋನಿಯ ಗ್ರಾಮಸ್ಥರು ಶಾಸಕರಿಗೂ ಅಧಿಕಾರಿಗಳಿಗೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕುಡಿಯುವ ನೀರು, ಶಿಕ್ಷಣ, ರಸ್ತೆ ಹಾಗೂ ಸಾರಿಗೆ ಸೌಲಭ್ಯವಿಲ್ಲದೆ ಗ್ರಾಮಸ್ಥರು ಕಲುಷಿತ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆ.
ತಾಲೂಕು ಕೇಂದ್ರದಿಂದ ಕೇವಲ ಕೆಲ ಕಿಲೋಮೀಟರ್ ದೂರದಲ್ಲಿದ್ದರೂ ಸರ್ಕಾರದ ಸೌಲಭ್ಯಗಳು ಈ ಊರಿಗೆ ತಲುಪಿಲ್ಲ. ಒಂದು ಬೋರ್ವೆಲ್ ಮೂಲಕ ಬರುವ ನೀರಿಗೂ ಮಣ್ಣು ಸೇರಿ ಜನರು ಜ್ವರ, ಅನಿಮಿಯಾ, ಫ್ಯುರೋಸಿಸ್ ಮುಂತಾದ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ವಾರಕ್ಕೊಮ್ಮೆ ಮಾತ್ರ ನೀರು ಬರುವ ಸ್ಥಿತಿ ಉಳಿದಿದ್ದು, ಆರೋಗ್ಯದ ಮೇಲೆ ಭಾರೀ ಪರಿಣಾಮ ಬೀರುತ್ತಿದೆ.

ಶಾಲಾ ಕೊಠಡಿ ಶಿಥಿಲ ಸ್ಥಿತಿಯಲ್ಲಿ:
ಮಕ್ಕಳ ಶಿಕ್ಷಣಕ್ಕಾಗಿ ಸುಮಾರು 65 ವರ್ಷಗಳ ಹಿಂದೆ ನಿರ್ಮಿಸಿರುವ ಏಕೈಕ ಕೊಠಡಿಯಲ್ಲಿಯೇ ಒಂದರಿಂದ ಐದನೇ ತರಗತಿಯ ವರೆಗೆ ವಿದ್ಯಾರ್ಜನೆ ಮಾಡಬೇಕಾದ ಪರಿಸ್ಥಿತಿ ಒಂದೆಡೆಯಾದರೆ. ಏಕೋಪಾಧ್ಯಾಯ ಶಿಕ್ಷಕರೊಬ್ಬರೇ ತರಗತಿವಾರು ಪಠ್ಯ ಕ್ರಮ ಬೋಧಿಸುತ್ತಿದ್ದಾರೆ. ಶಾಲಾ ಮಕ್ಕಳು ಕೂರಲು ಒಂದು ಬೆಂಚ್ ಸಹ ಇಲ್ಲದಿರುವುದರಿಂದ ನೆಲದಲ್ಲಿಯೇ ಕೂರುವಂತ ಪರಿಸ್ಥಿತಿ ಮಕ್ಕಳದ್ದು. ಒಂದೊಂದು ತರಗತಿಗೂ ಒಂದೊಂದು ರೀತಿಯ ಪಠ್ಯಕ್ರಮವಿದ್ದು, ಎಲ್ಲ ವಿದ್ಯಾರ್ಥಿಗಳನ್ನು ಒಂದೆಡೆ ಕೂರಿಸಿ ಬೋಧಿಸುವುದರಿಂದ ಮಕ್ಕಳು ಶೈಕ್ಷಣಿಕ ಪ್ರಗತಿ ಸಾಧಿಸುವುದು ಹೇಗೆ ಎಂಬಂತಾಗಿದೆ. ಮಳೆಗಾಲದಲ್ಲಿ ಕಟ್ಟಡ ಕುಸಿಯುವ ಭೀತಿಯಿರುವುದರಿಂದ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಭಯ ಪಡುತ್ತಿದ್ದಾರೆ. ಇರುವ ಕೊಠಡಿಯೂ ಶಿಥಿಲಗೊಂಡು ಯಾವ ಕ್ಷಣದಲ್ಲಾದರೂ ಕುಸಿಯುವ ಸಾಧ್ಯತೆಯಿರುವುದರಿಂದ ಜೀವ ಭಯದಲ್ಲಿಯೆ ಮಕ್ಕಳು ಕಲಿಯುವ ಸಂದಿಗ್ಧತೆಯಿದೆ. ಗ್ರಾಮದಲ್ಲಿ ತುರ್ತಾಗಿ ತರಗತಿವಾರು ಶಾಲಾ ಕೊಠಡಿ ನಿರ್ಮಿಸಲು ಶಿಕ್ಷಣ ಇಲಾಖೆ ಮುಂದಾಗಬೇಕಿದೆ.

ಸಾರಿಗೆ ಇಲ್ಲ, ಉನ್ನತ ಶಿಕ್ಷಣ ಮೊಟಕು:
ವೈದ್ಯಕೀಯ, ಉದ್ಯೋಗ, ಶಿಕ್ಷಣ ಇತರೆ ಉದ್ದೇಶಗಳಿಗಾಗಿ ಜನರು ಸಾರಿಗೆ ಸೌಲಭ್ಯ ಪಡೆಯಬೇಕೆಂದರೆ ಬೆಳತೂರು ಬಿ.ಕಾಲೋನಿಯಿಂದ ಸುಮಾರು 4 ಕಿ.ಮೀ ದೂರದ ಗದ್ದಿಗೆ-ಎಚ್.ಡಿ.ಕೋಟೆ ಮುಖ್ಯ ರಸ್ತೆಗೆ ಕಾಲ್ನಡಿಗೆಯಲ್ಲಿ ಬಂದು ಬಸ್ ಹತ್ತಬೇಕಿದೆ. ಈ ವೇಳೆ ಗರ್ಭಿಣಿ, ಬಾಣಂತಿಯರು, ವಯೋವೃದ್ಧರು ತೀವ್ರ ನರಳಾಟ ಅನುಭವಿಸುತ್ತಿದ್ದಾರೆ. ಪ್ರಾಥಮಿಕ ಶಿಕ್ಷಣದ ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಪಟ್ಟಣಕ್ಕೆ ಹೋಗುವ ವಿದ್ಯಾರ್ಥಿಗಳು, ವಿಶೇಷ ತರಗತಿಯಿದ್ದ ಸಂದರ್ಭದಲ್ಲಿ ಮಕ್ಕಳು ನಡೆದು ಬಂದು ಮನೆ ಸೇರುವುದು ರಾತ್ರಿ 8, 9 ವೇಳೆಯಾಗುತ್ತಿರುವುದರಿಂದ ಪೋಷಕರು ಮಕ್ಕಳನ್ನು 10ನೇ ತರಗತಿಯ ಹಂತಕ್ಕೂ ಕಳುಹಿಸದೆ ಭಯದಿಂದ ಪ್ರಾಥಮಿಕ ಶಿಕ್ಷಣಕ್ಕೆ ವಿದ್ಯಾಭ್ಯಾಸ ಮೊಟಕುಗೊಳಿಸುತ್ತಿದ್ದಾರೆ. ಸಾರಿಗೆ ಸಂಪರ್ಕ ಕಲ್ಪಿಸಿದರೆ ಈ ಗ್ರಾಮದ ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸ ಪಡೆಯಲು ಸಹಕಾರಿಯಾಗಲಿದೆ ಎನ್ನುತ್ತಾರೆ ಗ್ರಾಮಸ್ಥರು.

ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ:
ನಮ್ಮೂರಿಗೆ ಶಾಸಕ ಅನಿಲ್ ಚಿಕ್ಕಮಾದು 3 ಬಾರಿ ಭೇಟಿ ನೀಡಿದ್ದಾರೆ. ಈ ಎಲ್ಲ ಸಮಸ್ಯೆಗಳ ಬಗ್ಗೆ ಅವರಿಗೂ ಮಾಹಿತಿಯಿದೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ನಮ್ಮನ್ನು ಚುನಾವಣೆ ವೇಳೆಯಲ್ಲಿ ಮತಕ್ಕಾಗಿ ಬಳಸಿಕೊಂಡು ನಂತರದಲ್ಲಿ ಕಡೆಗಣಿಸಿದ್ದಾರೆ. ಈ ಎಲ್ಲ ಸಮಸ್ಯೆಗಳ ಬಗ್ಗೆ ಪ್ರತ್ಯೇಕವಾಗಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಲಿಖಿತ ಮನವಿ ನೀಡಿದ್ದೇವೆ. ಗ್ರಾಮಸ್ಥರೆಲ್ಲರೂ ಮನವರಿಕೆ ಮಾಡಿದ್ದೇವೆ ಇಷ್ಟಿದ್ದರೂ ಯಾವೊಬ್ಬ ಅಧಿಕಾರಿ ಹಾಗೂ ಜನಪ್ರತಿನಿಧಿಗಳು ನಮಗೆ ಮೂಲ ಸೌಲಭ್ಯ ಕಲ್ಪಿಸಿಲ್ಲ ಎಂದು ಗ್ರಾಮಸ್ಥ ಸಿದ್ದು ತಮ್ಮ ಬೇಸರ ವ್ಯಕ್ತಪಡಿಸಿದರು.
ಮೂಲ ಸೌಲಭ್ಯ ಒದಗಿಸಲು ತ್ವರಿತ ಕ್ರಮಕ್ಕೆ ಕರೆಯುಳಿಸಿ, ಶಿಕ್ಷಣ, ಗ್ರಾಮೀಣಾಭಿವೃದ್ಧಿ ಮತ್ತು ಸಾರಿಗೆ ಸಚಿವರು ಇದತ್ತ ಗಮನ ಹರಿಸಬೇಕಾಗಿದೆ.
- ಶಿವಕುಮಾರ, ಕೋಟೆ.