ಎಚ್.ಡಿ.ಕೋಟೆ-ಅಪಘಾತಕ್ಕೆ ಆಹ್ವಾನ‌ ನೀಡುವ ಹೆಗ್ಗಡಾಪುರ ರಸ್ತೆ-ಕೆರೆಯ ಬಳಿ ಬೇಕಿದೆ‌ ತಡೆಗೋಡೆ-ಕಣ್ಮುಚ್ಚಿ ಕುಳಿತಿರುವ ಲೋಕೋಪಯೋಗಿ ಇಲಾಖೆ

ಎಚ್.ಡಿ.ಕೋಟೆ: ತಾಲೂಕಿನ ಕೇಂದ್ರ ಸ್ಥಾನದಿಂದ ತಾರಕ ಜಲಾಶಯಕ್ಕೆ ತೆರಳುವ ಮಾರ್ಗದ ರಸ್ತೆಯು ಹೆಗ್ಗಡಾಪುರ ಗ್ರಾಮದ ಬಳಿ ಮೃತ್ಯು ಕೂಪವಾಗಿ‌ ಮಾರ್ಪಟ್ಟಿದೆ.

ನಾಗನಹಳ್ಳಿ ಮಾರ್ಗದ ಹೆಗ್ಗಡಾಪುರ ಗ್ರಾಮದ ಸಮೀಪ ಆಗ್ಗಿಂದಾಗೆ ಅಪಘಾತಗಳು ನಡೆದು ಹಲವು ಸಾವು, ನೋವುಗಳು ಸಂಭವಿಸಿವೆ. ಈ ಮಾರ್ಗದಲ್ಲಿ ಮಾಚನಾಯಕ ನಹಳ್ಳಿ, ಹಿರೇಹಳ್ಳಿ, ಹಿರೇಹಳ್ಳಿ ಬಿ ಕಾಲೋನಿ, ಜಿಯಾರ, ನಾಗನಹಳ್ಳಿ, ತಾರಕ ಗ್ರಾಮಗಳ ಜನತೆ ಇದೇ ರಸ್ತೆಯನ್ನು ಅವಲಂಭಿಸಿರು ವುದರಿಂದ ವಾಹನ ದಟ್ಟಣೆ ಹೆಚ್ಚಾಗಿದ್ದು, ಹೆಗ್ಗಡಾಪುರ ಗ್ರಾಮದ‌ ಕೆರೆಏರಿ ಕಿರಿದಾದ ರಸ್ತೆಯಿರುವುದೇ ಅಪಘಾತಕ್ಕೆ ಕಾರಣವಾಗಿದೆ. ಇಲ್ಲಿನ‌ ರಸ್ತೆ ಅಪಘಾತದ ಬೆರಳೆಣಿಕೆಯ ಪ್ರಕರಣಗಳು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವುದು ಹೊರತುಪಡಿಸಿ ಬಹುತೇಕ ಅಪಘಾತಗಳ ನೋಂದಣಿಯಾಗಿಲ್ಲ.

ಹೆಗ್ಗಡಾಪುರ ಕೆರೆಗೆ ತೆಡೆಗೋಡೆ ಅನಿವಾರ್ಯ ಈ ಮಾರ್ಗದಲ್ಲಿ ಮೈಸೂರಿನ ಮಹಾರಾಜರು ಜನೋಪ ಯೋಗಕ್ಕಾಗಿ ಪಟ್ಟಣ ಎಲ್ಲೆಯ ಸ.ನಂ164ರಲ್ಲಿ 43.27 ಗುಂಟೆ ವಿಸ್ತೀರ್ಣದ ಕೆರೆ ನಿರ್ಮಿ ಸಿಕೊಟ್ಟಿದ್ದರು. ಕೆರೆಯು ಪ್ರಸ್ತುತ ಒತ್ತುವರಿಯಾಗಿದೆ. ಕೆರೆಏರಿ ಮೇಲೆ ನಾಗನಹಳ್ಳಿ, ತಾರಕ ಗ್ರಾಮಗಳಿಗೆ ಸಂಪರ್ಕ ಕಲ್ಪಿಸಿಕೊಟ್ಟಿದ್ದಾರೆ. ಕೆರೆಯ ಬಳಿ ರಸ್ತೆಯು ತುಂಬ ಹದಗೆಟ್ಟಿದ್ದು, ತಿರುವುಗಳಿಂದ ಕೂಡಿ ಕಿರಿದಾಗಿರುವುದರಿಂದ ವಾಹನ ಸವಾರರ ಸಂಚಾರ ದುಸ್ಥರವಾಗಿದೆ.

ಸೋಮವಾರ ನಾಗನಹಳ್ಳಿ ಗ್ರಾಮದ ಸಂಬಂಧಿಕರ‌ ಮನೆಯ ಹಬ್ಬದ ಸಂಭ್ರಮದಲ್ಲಿ ಭಾಗವಹಿಸಿ ತ್ರಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಮೈಸೂರಿನ ನಿವಾಸಿಗಳ ಆಟೋ ಕೆರೆಯಲ್ಲಿ ಉರುಳಿ ಜಖಂಗೊಂಡು, ಚಾಲಕ, ಓರ್ವ ಮಹಿಳೆ ಸೇರಿದಂತೆ ಮತ್ತಿಬ್ಬರಿಗೆ ತೀವ್ರ ಸ್ವರೂಪದ ಗಾಯಗಳಾಗಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ‌ ಮಾರ್ಗದಲ್ಲಿ ಸರ್ಕಾರಿ ಬಸ್ ಗಳ ಸಂಚಾರ ವಿರಳವಾಗಿರುವುದರಿಂದ ಜನತೆ ಅನಿವಾರ್ಯವಾಗಿ ಖಾಸಗಿ‌ ವಾಹನಗಳ ಮೊರೆ ಹೋಗುತ್ತಾರೆ.

ದ್ವಿಚಕ್ರ, ತ್ರಿಚಕ್ರ ವಾಹನಗಳು ಸೇರಿದಂತೆ ಕೃಷಿ ಚಟುವಟಿಕೆಗಳಿಗೆ ತೆರಳುವ ವಾಹನಗಳು, ಬೆಳೆಗಳನ್ನು‌ ಮಾರುಕಟ್ಟೆಗೆ ಸಾಗಿಸುವ ಹಾಗೂ ಇತರೆ ಸರಕು-ಸಾಗಣೆ ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ. ಕೆರೆಯ ಸಮೀಪ ತಿರುವುಗಳು ಸವಾರರಿಗೆ ಕಾಣದೆ ಹಲವು ವರ್ಷಗಳಿಂದ ವಾಹನಗಳು ಕೆರೆಯೊಳಗೆ‌ ಮುಳುಗಿ ಅವಘಡಗಳು ಸಂಭವಿಸಿವೆ. ಲೋಕೋಪಯೋಗಿ‌ ಇಲಾಖೆಯ ತಾಲೂಕು ಕಚೇರಿಯಿಂದ ಕೇವಲ ಎರಡು ಕಿ.ಮೀ ದೂರದಲ್ಲಿರುವ ಈ ಸ್ಥಳದಲ್ಲಿ ಅಪಘಾತಗಳು ಸಂಭವಿಸುತ್ತಿರುವುದು ಗೊತ್ತಿದ್ದರೂ, ಅಪಘಾತ ತಡೆಗಟ್ಟಲು ಈ ವರೆಗೆ ಲೋಕೋಪಯೋಗಿ ಇಲಾಖೆ ಅಪಘಾತ ವಲಯವೆಂದು ಸೂಚಿಸುವ ಹಾಗೂ ರಸ್ತೆ ತಿರುವುಗಳ ನಿರ್ದೇಶನ ನೀಡುವ ಫಲಕಗಳನ್ನು ಅಳವಡಿಸಿ ಚಾಲಕರಿಗೆ ಮಾಹಿತಿ ನೀಡದಿರುವುದು, ಹಂಪ್ ಗಳ ನಿರ್ಮಾಣ, ತಡೆಗೋಡೆ ನಿರ್ಮಿಸುವುದು ಸೇರಿದಂತೆ ಅಪಘಾತ ತಡೆಗಟ್ಟಲು ಈವರೆಗೆ ಯಾವುದೇ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿಲ್ಲದಿರುವುದು ಅಪಘಾತಗಳು ಹೆಚ್ಚಳವಾಗುವುದಕ್ಕೆ ಕಾರಣವಾಗಿದೆ.

ನಮ್ಮೂರ ಕೆರೆ ಬಳಿ ಬಳಿ ರಸ್ತೆ ಅಪಘಾತಗಳು ಸರ್ವೇ ಸಾಮಾನ್ಯ. 15, 20 ವರ್ಷಗಳಿಂದಲು ಈ‌ ಸ್ಥಳದಲ್ಲಿ ಪ್ರತಿದಿನ ಕನಿಷ್ಠ ಎರಡು, ಮೂರಾದರು ಅವಘಡಗಳು ಸಂಭವಿಸುತ್ತವೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇದೇ ರಸ್ತೆಯಲ್ಲಿ ಸಂಚರಿಸಿದರೂ ಅಪಘಾತ ಸಂಬಂಧ ಪರಿಹಾರ ಮಾರ್ಗಗಳನ್ನು‌ ಕಂಡುಕೊಂಡಿಲ್ಲ.

-ಟೈಲರ್ ನಾಗರಾಜು, ತಾಲೂಕು ಸಂಚಾಲಕ, ಕರವೇ ಪ್ರವೀಣ್ ಶೆಟ್ಟಿ ಬಣ

  • ಶಿವಕುಮಾರ ಕೋಟೆ

Leave a Reply

Your email address will not be published. Required fields are marked *