
ಎಚ್.ಡಿ.ಕೋಟೆ-ತಾಲೂಕಿನಲ್ಲಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಜನರು ಜೀತಮುಕ್ತರಾಗಿದ್ದು 2014 ರಿಂದಲೂ ಅವರಿಗೆ ಯಾವುದೇ ಪುನರ್ವಸತಿ ಸೌಲಭ್ಯ ಸಿಕ್ಕಿಲ್ಲ.ಇದರಿಂದ ಅವರ ಬದುಕುಗಳು ಅತಂತ್ರವಾಗಿದೆ.ಜೊತೆಗೆ ರಾಜ್ಯದಲ್ಲಿ ಸುಮಾರು ಏಳುವರೆ ಸಾವಿರ ಜನರು ಜೀತಮುಕ್ತರಾಗಿದ್ದು ಸರ್ಕಾರ ಅವರ ಬಗ್ಗೆ ವಿಶೇಷ ಆಸಕ್ತಿವಹಿಸಿ ಪುನರ್ವಸತಿ ಸೌಲಭ್ಯ ಕಲ್ಪಿಸಬೇಕು.ಈ ವಿಷಯವಾಗಿ ಮುಂದಿನ ಅಧಿವೇಶನದಲ್ಲಿ ಚರ್ಚಿಸಬೇಕೆಂದು ಶಾಸಕ ಅನಿಲ್ ಚಿಕ್ಕಮಾದು ರವರಿಗೆ ಜೀವಿಕ ಸಂಘಟನೆಯ ಸಂಚಾಲಕ ಉಮೇಶ್. ಬಿ.ನೂರಲಕುಪ್ಪೆ ಮನವಿ ಸಲ್ಲಿಸಿದರು.
ಜೀವಿಕ ಸಂಘಟನೆಯ ಪದಾಧಿಕಾರಿಗಳೊಟ್ಟಿಗೆ ಶಾಸಕರನ್ನು ಭೇಟಿ ಮಾಡಿದ ಅವರು, ಶಾಸಕರ ನೇತೃತ್ವದಲ್ಲಿ ಮುಖ್ಯಮಂತ್ರಿಗಳು ಮತ್ತು ಸಂಬಂಧಿಸಿದ ಇಲಾಖಾಧಿಕಾರಿಗಳೊಂದಿಗೆ ರಾಜ್ಯ ಮಟ್ಟದಲ್ಲಿ ಸಭೆಯನ್ನು ಏರ್ಪಡಿಸುವಂತೆ ಕೋರಿದರು.

ಇದಕ್ಕೆ ಸ್ಪಂದಿಸಿ ಮಾತಾನಾಡಿದ ಶಾಸಕ ಅನಿಲ್ ಚಿಕ್ಕಮಾದು, ಜೀತ ಪದ್ಧತಿ ದೇಶದ ಪ್ರಗತಿಗೆ ಅತ್ಯಂತ ಮಾರಕ. ಇದನ್ನ ಸಂಪೂರ್ಣವಾಗಿ ಅಳಿಸಿಹಾಕಬೇಕು. ಈ ವಿಚಾರವಾಗಿ ನಾನು ಮುಖ್ಯಮಂತ್ರಿಗಳ ಗಮನವನ್ನು ಸೆಳೆಯುತ್ತೇನೆ. ಮುಂದಿನ ಅಧಿವೇಶನದಲ್ಲಿ ಚರ್ಚೆ ನಡೆಸುತ್ತೇನೆ.ಸಂಘಟನೆಯ ಎಲ್ಲಾ ಕೆಲಸಗಳಲ್ಲಿಯೂ ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದರು.
ಇದೆ ವೇಳೆಯಲ್ಲಿ ಒಕ್ಕೂಟದ ಅಧ್ಯಕ್ಷ ಮಹದೇವ. ಮಲ್ಲಿಗಮ್ಮ. ಮಂಜುನಾಥ್. ಗೋಪಾಲ್. ಜೀವಿಕ ಸಂಚಾಲಕರಾದ ಚಂದ್ರಶೇಖರ್ ಮೂರ್ತಿ. ಶಿವರಾಜ್. ನಟರಾಜ್. ಮುಖಂಡರಾದ ಲಕ್ಷ್ಮಮ್ಮ. ಸೋಮೇಶ್. ಶಿವಣ್ಣ. ಮುಂತಾದವರು ಹಾಜರಿದ್ದರು.
————ಶಿವು ಕೋಟೆ