ಎಚ್.ಡಿ.ಕೋಟೆ-ಕಮಲ್ ಹಾಸನ್ ಕನ್ನಡಿಗರ ಕ್ಷಮೆಯಾಚಿಸಬೇಕು- ಕರವೇ ಪ್ರವೀಣ್ ಶೆಟ್ಟಿ ಬಣದ ಆಕ್ರೋಶ

ಎಚ್.ಡಿ.ಕೋಟೆ: ಕನ್ನಡ ಹುಟ್ಟಿದ್ದು ತಮಿಳಿನಿಂದ ಎಂದು ವ್ಯಾಖಾನಿಸಿರುವ ಕಮಲ್ ಹಾಸನ್ ಕೂಡಲೇ ತಮ್ಮ ಹೇಳಿಕೆಯನ್ನು ಹಿಂಪಡೆದು ಕನ್ನಡಿಗರ ಕ್ಷಮೆಯಾಚಿಸಬೇಕು ಎಂದು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ)ದ ಕಾಯಕರ್ತರು ಹಾಗೂ ಪ್ರಗತಿಪರ ಸಂಘಟನೆಗಳ ಸಹಭಾಗಿತ್ವದಲ್ಲಿ ಪ್ರತಿಭಟನೆ ನಡೆಸಿ ತಾಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಕರವೇ (ಪ್ರವೀಣ್ ಶೆಟ್ಟಿ ಬಣ) ತಾಲೂಕು ಅಧ್ಯಕ್ಷ ಕ್ರಾಂತಿ ಕುಮಾರ್ ಮಾತನಾಡಿ, ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಉದ್ದೇಶದಿಂದ ಹಾಗೂ ತಮಿಳು ಜನರ ಮತಗಳ ಮೇಲೆ ಕಣ್ಣಿಟ್ಟಿರುವ ಇವರು ತಮ್ಮ ಹೊಸ ಚಲನಚಿತ್ರ ಥಗ್‌ಲೈಫ್ ಧ್ವನಿಸುರುಳಿ ಬಿಡುಗಡೆಯ ಸಂದರ್ಭದಲ್ಲಿ ಅಸಂಬದ್ದ ಹೇಳಿಕೆಯು ನೀಡಿ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಭಾರತದಲ್ಲಿ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಏಕೈಕ ಭಾಷೆ ಎಂದರೆ ಅದು ಕನ್ನಡ ಭಾಷೆ. ಈ ಭಾಷೆಗೆ ತನ್ನದೇ ಆದ ಸುಮಾರು 4000 ವರ್ಷಗಳ ಇತಿಹಾಸವನ್ನು ಹೊಂದಿರುವ ನಮ್ಮ ಕನ್ನಡ ಭಾಷೆಗೆ ಅವಮಾನ ಮಾಡಿರುವ ನಟ ಕಮಲ್ ಹಾಸನ್ ಕೂಡಲೇ ತಮ್ಮ ಹೇಳಿಕೆಯನ್ನು ಹಿಂಪಡೆದು ಕನ್ನಡಿಗರಿಗೆ ಕ್ಷಮೆ ಕೇಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕ್ಷಮೆಯಾಚಿಸದಿದ್ದರೆ ಜೂ.6 ರಂದು ಅವರ ಥಗ್‌ಲೈಪ್ ಚಿತ್ರವನ್ನು ಕರ್ನಾಟಕದ ಯಾವುದೇ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳಿಸಲು ಕರ್ನಾಟಕ ರಕ್ಷಣಾ ವೇದಿಕೆ ( ಪ್ರವೀಣ್ ಶೆಟ್ಟಿ ಬಣ) ಅವಕಾಶ ನೀಡುವುದಿಲ್ಲ ಎಂದು ಆಕ್ರೋಶ ಕಿಡಿಕಾರಿದರು.

ಆನಗಟ್ಟಿ ದೇವರಾಜ್ ಮಾತನಾಡಿ, ಕಮಲ್ ಹಾಸನ್ ರಾಜ್ಯದ ಜನತೆಗೆ ಕ್ಷಮೆ ಕೇಳಿಲ್ಲ ಎಂದರೆ ಮುಂದಿನ ದಿನದಲ್ಲಿ ಎಲ್ಲ ಪ್ರಗತಿಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಬೃಹತ್ ಪ್ರತಿಭಟನೆಯನ್ನು ಕ್ಷಮೆ ಕೇಳುವವರೆಗೂ ನಿರಂತರವಾಗಿ ಹೋರಾಟವನ್ನು ಮುಂದುವರಿಸಲಾಗುತ್ತದೆ ಎಂದು ಎಚ್ಚರಿಸಿದರು.

ತಾಲೂಕು ಉಪಾಧ್ಯಕ್ಷ ಚಿಕ್ಕರಾಜು ಜೀವಿಕ ಬಸವರಾಜು ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಮಾರ್, ಶಿವಕುಮಾರ್, ಜೀವಿಕ ಬಸವರಾಜ್, ಚಿಕ್ಕರಾಜು, ಸ್ವಾಮಿ ಕುಮಾರ್, ಉಮೇಶ್, ಚೆಲುವರಾಜು, ಟೈಲರ್ ನಾಗರಾಜ್, ಸಿದ್ದರಾಜು, ರಾಮ್ ಕುಮಾರ್, ಗೋಪಿ, ತಮ್ಮ ನಾಯಕ, ಕೃಷ್ಣಮೂರ್ತಿ, ವೆಂಕಟಸ್ವಾಮಿ, ಚೆಲುವ, ಚೆನ್ನ, ಮಹೇಶ್ ಇದ್ದರು.

– ಶಿವಕುಮಾರ್‌, ಕೋಟೆ.

Leave a Reply

Your email address will not be published. Required fields are marked *