ಎಚ್.ಡಿ.ಕೋಟೆ: ಶೈಕ್ಷಣಿಕ ಸುಧಾರಣೆಗಾಗಿ ತಾಲೂಕಿಗೆ ಸಾಕಷ್ಟು ಅನುದಾನ ಬಂದಿರುವುದು ಒಂದೆಡೆಯಾದರೆ, ಹಲವು ಶಾಲೆಗಳು ಸವಲತ್ತುಗಳಿಂದ ವಂಚಿತವಾಗಿರುವುದು ಮತ್ತೊಂದೆಡೆ ಕಾಣಬಹುದು, ಇದಕ್ಕೆ ಉತ್ತಮ ಉದಾಹರಣೆಯೆಂದರೆ, ತಾಲೂಕಿನ ಶಿರಮಹಳ್ಳಿ ಮೊರಾರ್ಜಿ ವಸತಿ ಶಾಲೆ.
ಶಿರಮಹಳ್ಳಿ ಗ್ರಾಮದ ಮೊರಾರ್ಜಿ ವಸತಿ ಶಾಲೆ ಮೂಲಭೂತ ಸವಲತ್ತುಗಳಿಲ್ಲದೆ ಹಿಂದುಳಿದಿರುವುದು ಆತಂಕಕಾರಿ. 2019ರಲ್ಲಿ ಸ್ಥಾಪಿತವಾದ ಈ ಶಾಲೆಯಲ್ಲಿ 6 ರಿಂದ 10ನೆ ತರಗತಿಯ ಒಟ್ಟು 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ಶಾಲೆಗೆ ಸಾಂಸ್ಕೃತಿಕ, ವೇದಿಕೆ ಕಾರ್ಯಕ್ರಮಕ್ಕೆ ಸಭಾಂಗಣ, ಕ್ರೀಡಾ ಚಟುವಟೆಕೆಗೆ ಸುಜ್ಜಿತ ಮೈದಾನ ಬೇಕಿದೆ. ಬಹು ಮುಖ್ಯವಾಗಿ ಶಾಲೆಗೆ ಸಂಪರ್ಕ ಕಲ್ಪಿಸುವ ರಸ್ತೆಯು ಹದಗೆಟ್ಟಿದ್ದು, ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ.
ಶಾಲೆಗೆ ಸಂಪರ್ಕ ಕಲ್ಪಿಸುವ ಏಕೈಕ ರಸ್ತೆಯು ಅತ್ಯಂತ ಹದಗೆಟ್ಟಿದ್ದು, ಮಳೆಗಾಲದಲ್ಲಿ ಕೆಸರು ಗದ್ದೆಯಾಗಿ ಪೋಷಕರಿಗೆ ಹಾಗೂ ಮಕ್ಕಳಿಗೆ ದಿನನಿತ್ಯ ತೊಂದರೆ ಉಂಟಾಗುತ್ತಿದೆ.

ರಸ್ತೆ ಸರಿಪಡಿಸಿಕೊಡುವಂತೆ ಸಂಬಂಧಪಟ್ಟ ಇಲಾಖೆಯವರು ಹಾಗೂ ಶಾಸಕರಿಗೆ ಪೋಷಕರು ಮನವಿ ಮಾಡಿದ್ದರಾದರೂ ರಸ್ತೆ ಸರಿಪಡಿಸುವಲ್ಲಿ ಯಾರೋಬ್ಬರು ಮುಂದಾಗಿಲ್ಲದಿರುವುದು ತಾಲೂಕಿನ ಆಡಳಿತವನ್ನು ಅಣಕಿಸುವಂತಿದೆ.

ಪೋಷಕರ ಒತ್ತಡಕ್ಕೆ ಮಣಿದು ತಾಲೂಕಿನ ಇಲಾಖೆಯೊಂದರಿಂದ 2020ರಲ್ಲಿ ಸ್ಥಳೀಯ ಪ್ರಥಮ ದರ್ಜೆ ಗುತ್ತಿಗೆದಾರ ಪರಶಿವಮೂರ್ತಿ, ರಸ್ತೆ ಕಾಮಗಾರಿ ನಡೆಸದೆ ಅರೆ-ಬರೆ ಕೆಲಸ ಮಾಡಿ ವಂಚಿಸಿದ್ದಾನೆ ಎಂದು ತಾಲೂಕಿನ ದಲಿತ ಸಂಘರ್ಷ ಸಮಿತಿಯ ಸಣ್ಣಸ್ವಾಮಿ ಆರೋಪಿಸುತ್ತಿದ್ದಾರೆ.
ಪೋಷಕರು ಹಾಗೂ ಶಾಲಾ ಆಡಳಿತ ಮಂಡಳಿ ಗುಣಮಟ್ಟದ ರಸ್ತೆ ಮಾಡಿಕೊಡುವಂತೆ 2021ರಲ್ಲಿ ಸಂಬಂಧಪಟ್ಟ ಇಲಾಖೆಗೆ ಮನವಿ ನೀಡಿದ ನಂತರ, ಪಂಚಾಯತ್ ರಾಜ್ ಇಲಾಖೆ ಶಾಲೆಗೆ ಸಂಪರ್ಕ ಕಲ್ಪಿಸುವ 1 ಕಿ.ಮೀ ಉದ್ದದ ರಸ್ತೆ ಕಾಮಗಾರಿ ನಡೆಸಲು 1 ಕೋ, ರೂ. ಅಂದಾಜು ತಯಾರಿಸಿ ಅನುದಾನ ನೀಡುವಂತೆ ಸಮಾಜ ಕಲ್ಯಾಣ ಇಲಾಖೆಗೆ ಮಾಹಿತಿ ನೀಡಿ ನಾಲ್ಕು ವರ್ಷ ಕಳೆದಿದ್ದರೂ ಈ ಬಗ್ಗೆ ಯಾವುದೇ ಪ್ರಕ್ರಿಯೆಗಳು ನಡೆದಿಲ್ಲ.

ಶಾಲೆಯ ಭದ್ರತಾ ಸಿಬ್ಬಂದಿಗಳಿಗೂ ಪ್ರತ್ಯೇಕ ಕೊಠಡಿಗಳಿಲ್ಲದೆ ಶಾಲೆಯ ಆವರಣದಲ್ಲಿಯೇ ಮಲಗುತ್ತಿದ್ದಾರೆ. ಪ್ರಸಕ್ತ ಸಾಲಿನಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ರಸ್ತೆ ತೀರಾ ಹದಗೆಟ್ಟಿರುವುದರಿಂದ ಸಾಕಷ್ಟು ತೊಂದರೆಯಾಗುತ್ತಿದೆ.
ಶಾಲೆಗೆ ಬರುವ ರಸ್ತೆ ಸರಿಪಡಿಸಿಕೊಡುವಂತೆ ಶಾಸಕ ಅನಿಲ್ ಚಿಕ್ಕಮಾದುಗೆ ಸಾಕಷ್ಟು ಬಾರಿ ತಿಳಿಸಿದ್ದೇವೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಸದ್ಯದಲ್ಲಿಯೇ ರಸ್ತೆ ಸರಿಪಡಿಸದಿದ್ದರೆ ವಿವಿಧ ಸಂಘಟನೆಗಳ ಜೊತೆಗೂಡಿ ತಾಲೂಕು ಆಡಳಿತದಲ್ಲಿರುವ ಶಾಸಕರ ಕಚೇರಿಗೆ ಮುತ್ತಿಗೆ ಹಾಕಿ ಉಗ್ರ ಪ್ರತಿಭಟನೆ ನಡೆಸಲಾಗುವುದು.

-ಸಣ್ಣಸ್ವಾಮಿ, ದಲಿತ ಸಂಘರ್ಷ ಸಮಿತಿ, ಎಚ್.ಡಿ.ಕೋಟೆ ತಾಲೂಕು.
ರಜೆ ಕಳಿದು ಶಾಲೆಗೆ ನಮ್ಮನ್ನು ಕರೆತರುವ ವೇಳೆ ಪೋಷಕರು ರಸ್ತೆಯಲ್ಲಿ ಬಿದ್ದು ಗಾಯಗೊಂಡಿ ದ್ದಾರೆ. ಉಷಾರಿಲ್ಲದ ವೇಳೆ ತ್ವರಿತವಾಗಿ ಆಸ್ಪತ್ರೆಗೆ ತೆರಳಲು ನಿಧಾನವಾಗುತ್ತಿದೆ. ಕಾಡು ಪ್ರಾಣಿಗಳು ಶಾಲೆಯ ಬಳಿ ಹಲವು ಬಾರಿ ಕಾಣಿಸಿಕೊಂಡಿವೆ. ಶಾಲೆ ಸುತ್ತಲೂ ಕಾಂಪೌಡ್ ಇಲ್ಲದಿರುವುದರಿಂದ ಕಾಡು ಪ್ರಾಣಿಗಳು ಶಾಲೆ ಮೈದಾನದೊಳಗೆ ಬಂದಿರುವುದರಿಂದ ಭಯವಾಗಿದ್ದೇವೆ. ಸಭಾಂಗಣ, ಆಟದ ಮೈದಾನ, ಧ್ವಜಸ್ಥಂಭವನ್ನು ಆದಷ್ಟು ಬೇಗ ನಿರ್ಮಿಸಿಕೊಡಬೇಕು.

-ಜ್ಞಾನವೇಣಿ, ಹತ್ತನೆ ತರಗತಿ ವಿದ್ಯಾರ್ಥಿ.
– ಶಿವಕುಮಾರ ಕೋಟೆ