ಹೆಚ್.ಡಿ.ಕೋಟೆ: ರೈತರ ನಿತ್ಯದ ಸಮಸ್ಯೆಗಳಿಗೆ ತಕ್ಷಣದ ಪರಿಹಾರ ನೀಡಬೇಕೆಂದು ಹಾಗೂ ರಾಜಕೀಯ ಅಥವಾ ಅಧಿಕಾರಿ ಮಟ್ಟದಲ್ಲಿ ತಾರತಮ್ಯವಿಲ್ಲದೆ ಎಲ್ಲ ರೈತರಿಗೆ ಸಮಾನ ನ್ಯಾಯ ದೊರಕಬೇಕೆಂದು ಕೋರಿದ ಮನವಿಯನ್ನು ರಾಜ್ಯ ಕಬ್ಬು ಬೆಳೆಗಾರರ ಸಂಘದ ತಾಲ್ಲೂಕು ಘಟಕದ ವತಿಯಿಂದ ಶಿರಸ್ತೆದಾರ ಮಹೇಶ್ ಅವರಿಗೆ ಶುಕ್ರವಾರ ಸಲ್ಲಿಸಲಾಯಿತು.

ಸಂಘದ ಉಪಾಧ್ಯಕ್ಷ ಸುನೀಲ್ ಕೋಟೆ ಮಾತನಾಡುತ್ತಾ, “ತಾಲೂಕಿನ ಹಲವಾರು ಗ್ರಾಮಗಳ ರೈತರಿಗೆ ಕಾನೂನು ಅಥವಾ ತಾಂತ್ರಿಕ ಅಡಚಣೆ ಇಲ್ಲದಿದ್ದರೂ ಕಂದಾಯ ಇಲಾಖೆ ವತಿಯಿಂದ ದಾಖಲೆ ನೀಡುವಲ್ಲಿ ವಿಳಂಬವಾಗುತ್ತಿದೆ. ಕೆಲ ಅಧಿಕಾರಿಗಳು ಹಣದ ಬೇಡಿಕೆ ಇಡುತ್ತಿರುವುದು ವಿಷಾದಕರ. ಇದರ ಪರಿಣಾಮವಾಗಿ ರೈತರು ದಿನ ನಿತ್ಯ ತಹಸೀಲ್ದಾರ್ ಕಚೇರಿಗೆ ತೆರಳಿ ಸಮಸ್ಯೆ ಉಲ್ಲೇಖಿಸುತ್ತಿದ್ದಾರೆ” ಎಂದು ದೂರಿದ ಅವರು, ಈ ಹಿನ್ನೆಲೆಯಲ್ಲಿ ತಕ್ಷಣವೇ ರೈತರ ಕುಂದುಕೊರತೆ ಸಭೆ ನಡೆಸಿ, ತಾಲೂಕಿನ ರೈತ ಮುಖಂಡರನ್ನು ಕರೆಯಬೇಕು. ಶಿಫಾರಸುಗಳನ್ನೊಳಗೊಂಡ ಪ್ರತ್ಯಕ್ಷ ಕ್ರಮದಿಂದ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು ಎಂದು ಸಂಘದ ಪದಾಧಿಕಾರಿಗಳು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್, ಜಿಲ್ಲಾ ಕಾರ್ಯದರ್ಶಿ ಹೊಮ್ಮರಗಳ್ಳಿ ಕೆಂಡಗಣ್ಣಸ್ವಾಮಿ, ತಾಲ್ಲೂಕು ಅಧ್ಯಕ್ಷ ಹಂಪಾಪುರ ರಾಜೇಶ್, ಹೊಸವಳಲು ರಮೇಶ್, ಶ್ರೀನಿವಾಸ್, ಮಹದೇವಪ್ಪ, ಚಿಕ್ಕನಾಯಕ, ಗಂಗಾಧರ್, ಗಿರೀಶ್, ನಂಜುಂಡಸ್ವಾಮಿ, ಮುರಳಿ, ನಿಂಗರಾಜ್ ಅರಸ್ ಹಾಗೂ ರಂಗಸ್ವಾಮಿ ಉಪಸ್ಥಿತರಿದ್ದರು.
-ಶಿವಕುಮಾರ, ಕೋಟೆ