
ಹೆಚ್. ಡಿ.ಕೋಟೆ-ಹಾರ್ಟ್ ಸಂಸ್ಥೆ ಮೈಸೂರು,ರೋಟರಿ ಕ್ಲಬ್ ಆಫ್ ಮೈಸೂರು ವೆಸ್ಟ್,ತಾಲ್ಲೂಕು ಆರೋಗ್ಯ ಇಲಾಖೆ, ಮಾದಾಪುರ ಗ್ರಾಮ ಪಂಚಾಯಿತಿ,ಪ್ರಾಥಮಿಕ ಆರೋಗ್ಯ ಕೇಂದ್ರ ಮಾದಾಪುರ ಇವರ ಜಂಟಿ ಸಹಯೋಗದಲ್ಲಿ ಮಾದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರವಿಕುಮಾರ್.ಟಿ.ಅಧ್ಯಕ್ಷತೆಯನ್ನು ವಹಿಸಿ ದೀಪ ಬೆಳಗುವುದರ ಮೂಲಕ ಕಾರ್ಯ ಕ್ರಮವನ್ನು ಉದ್ಘಾಟಿಸಿದರು.
ಹಾರ್ಟ್ ಸಂಸ್ಥೆಯ ಶಿವಲಿಂಗ ರವರು ಕಾರ್ಯಕ್ರಮದ ಬಗ್ಗೆ ಪ್ರಸ್ತಾವಿಕ ನುಡಿಗಳನ್ನಾಡಿದ ನಂತರ ಮಾತನಾಡಿದ
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರವಿಕುಮಾರ್,ಈ ದಿನ ಹಾರ್ಟ್ ಸಂಸ್ಥೆ ಮಾದಾಪುರ ಗ್ರಾಮದಲ್ಲಿ ಆರೋಗ್ಯ ತಪಾಸಣೆ ಶಿಬಿರವನ್ನು ಏರ್ಪಡಿಸಿದ್ದು ಸಂಸ್ಥೆಯ ಕಾರ್ಯ ಪ್ರಶಂಶನೀಯ ಎಂದರು.
ಈ ಶಿಬಿರದಲ್ಲಿ ಕಣ್ಣಿನ ಪರೀಕ್ಷೆ,ಮಧುಮೇಹ ಮತ್ತು ರಕ್ತದೊತ್ತಡ,ಹೃದಯ ಸಂಬಂಧಿತ ತೊಂದರೆಗಳಿಗೆ ಚಿಕಿತ್ಸೆ ಹಾಗು ಸೂಕ್ತ ಸಲಹೆ ನೀಡಲಾಗುತ್ತಿದೆ.ಮುಖ್ಯವಾಗಿ 40 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಮುಟ್ಟಿನ ಕಾಯಿಲೆ ಬಗ್ಗೆ ತಪಾಸಣೆ ನಡೆಸಿ ,ಪಾಪ್ ಸ್ಮಿಯರ್ ಮಾಡಲಾಗುತ್ತದೆ ಎಂದರು.

ಗ್ರಾಮೀಣ ಪ್ರದೇಶದಲ್ಲಿ ಇಂತಹ ಆರೋಗ್ಯ ಶಿಭಿರಗಳು ಹೆಚ್ಚಿನ ಮಟ್ಟದಲ್ಲಿ ನಡೆಯಬೇಕು.ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಕ್ಯಾನ್ಸರ್ ಆರೋಗ್ಯ ಶಿಬಿರಗಳನ್ನು ಆಯೋಜಿಸುವಂತೆ ಹಾರ್ಟ್ ಸಂಸ್ಥೆ ಯವರಿಗೆ ಮನವಿ ಮಾಡಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಉಮಾ ಶಂಕರ್ ಮಾತನಾಡಿ, ನಮ್ಮ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಆಯೋಜಿಸಿರುವುದು ತುಂಬಾ ಸಂತೋಷಕರ ವಿಷಯ.ಮುಂದಿನ ದಿನಗಳಲ್ಲಿ ಶಿಬಿರವನ್ನು ಆಯೋಜನೆ ಮಾಡಿದಾಗ ಶಿಬಿರದ ಬಗ್ಗೆ ಹೆಚ್ಚು ಹೆಚ್ಚು ಪ್ರಚಾರವನ್ನು ಮಾಡಿ ಜನರಿಗೆ ಅನುಕೂಲವನ್ನು ಮಾಡಿಕೊಡಿ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಧಾ ಚಿಕ್ಕನಾಯ್ಕ, ವೈದ್ಯಾಧಿಕಾರಿಗಳಾದ ಡಾ. ಚಂದ್ರಕಲಾ,ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗದವರಾದ ,ವೀಣಾ,ಮಾದಮ್ಮ, ದೊರೆ, ಶಶಿರೇಖಾ, ಜಯಂತಿ,ಡಾ. ಹರ್ಷಿತಾ, ಪ್ರಶಾಂತ್ ಮತ್ತು ತಂಡದವರು, ಎ.ಎಸ್. ಜಿ ಕಣ್ಣಿನ ಆಸ್ಪತ್ರೆಯ ಮಹೇಶ್ ಮತ್ತು ತಂಡದವರು, ಆಶಾ ಕಾರ್ಯಕರ್ತೆಯರು ಗ್ರಾಮದ ಮುಖಂಡರು, ಗ್ರಾಮಸ್ಥರು ಹಾಜರಿದ್ದರು.
-ವರದಿ-ಶಿವು ಕೋಟೆ