ಕೆ.ಆರ್.ಪೇಟೆ,ಮೇ.16: ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಅಣ್ಣೇಚಾಕನಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಜಯಲಕ್ಷ್ಮಮ್ಮ ಮಂಜೇಗೌಡ ಹಾಗೂ ಉಪಾಧ್ಯಕ್ಷರಾಗಿ ಶಿವಮ್ಮರವಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದ ಹಿಂದಿನ ಅಧ್ಯಕ್ಷರಾದ ಸುಧಾಮಣಿಶಿವಪ್ಪ ಹಾಗೂ ಉಪಾಧ್ಯಕ್ಷರಾದ ನಂಜಮ್ಮಗವೀಗೌಡ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಜಯಲಕ್ಷ್ಮಮ್ಮ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಶಿವಮ್ಮ ನಾಮಪತ್ರವನ್ನು ಸಲ್ಲಿಸಿದರು. ಬೇರೆ ಯಾವುದೇ ನಿರ್ದೇಶಕರು ನಾಮಪತ್ರವನ್ನು ಸಲ್ಲಿಸದ ಕಾರಣ ಅವಿರೋಧ ಆಯ್ಕೆ ನಡೆಯಿತು. ಚುನಾವಣಾ ಅಧಿಕಾರಿಯಾಗಿ ಸಹಕಾರ ಇಲಾಖೆಯ ಅಧಿಕಾರಿ ಶೋಭ, ಸಹ ಚುನಾವಣಾಧಿಕಾರಿಯಾಗಿ ಸಂಘದ ಕಾರ್ಯದರ್ಶಿ ಅಂಬುಜಯೋಗೇಶ್ ಕಾರ್ಯ ನಿರ್ವಹಿಸಿದರು.

ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ತಾಲ್ಲೂಕು ಪಿಎಲ್ಡಿ ಬ್ಯಾಂಕ್ ನಿರ್ದೇಶಕರಾದ ನಾಗರಾಜು ಹಾಗೂ ಎಪಿಎಂಸಿ ಮಾಜಿ ಅಧ್ಯಕ್ಷ ಚಂದ್ರಹಾಸ, ಸಂಘದ ನಿರ್ದೇಶಕರಾದ ಜಯಮ್ಮ ಎ.ಬಿ.ಜವರೇಗೌಡ, ರತ್ನಮ್ಮ ಶಿವಪ್ಪ, ನಾಗಮ್ಮಸಿದ್ದರಾಮೇಗೌಡ, ಸುಧಾ ತಿಮ್ಮರಾಯಪ್ಪ, ಸುಲೋಚನ ನಾಗರಾಜು, ರೇಣುಕಾ ನಾಗರಾಜು, ಮಮತಾ ಲೋಕೇಶ್, ಮುಖಂಡರಾದ ರಾಮಕೃಷ್ಣೇಗೌಡ, ಎ.ಬಿ ಜವರೇಗೌಡ, ಸಿದ್ದರಾಮೇಗೌಡ, ಟೈಲರ್ ದೇವರಾಜು, ಮಾರಿಗುಡಿ ನಾಗರಾಜು, ಕೆಂಪಣ್ಣನ ಶಿವಣ್ಣ, ಕಾಯಿ ಕುಮಾರ್, ತಮ್ಮೇಗೌಡ, ಕಾಂತರಾಜು, ಅಶೋಕ್, ಮಾಟಣ್ಣನ ಶಿವಣ್ಣ ಮತ್ತಿತರರು ಅಭಿನಂದಿಸಿದರು.

ತಾಲ್ಲೂಕು ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಅಣ್ಣೇಚಾಕನಹಳ್ಳಿ ನಾಗರಾಜು ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ಅಭಿನಂದಿಸಿದ ಮಾತನಾಡಿ ನಮ್ಮ ರೈತರಿಗೆ ಹಾಲಿನ ಡೇರಿ ಹಾಗೂ ಸೊಸೈಟಿಗಳು ಎರಡೂ ಕಣ್ಣುಗಳಿದ್ದಂತೆ. ಗ್ರಾಮೀಣ ಪ್ರದೇಶಗಳಲ್ಲಿ ರೈತರು ಹೈನುಗಾರಿಕೆಯನ್ನು ಕೃಷಿಯ ಜೊತೆಗೆ ಮುಖ್ಯ ಉಪಕಸುಬನ್ನಾಗಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ನಮ್ಮ ಸಂಘವು ಇದುವರೆವಿಗೂ ಉತ್ತಮ ಗುಣಮಟ್ಟವನ್ನು ಹೊಂದಿರುವ ಸಂಘವಾಗಿದೆ. ಇದಕ್ಕೆ ಕಾರಣ ನಮ್ಮೂರಿನ ಹಾಲು ಉತ್ಪಾದಕರು ಉತ್ತಮ ಗುಣಮಟ್ಟದ ಹಾಲನ್ನು ಸರಬರಾಜು ಮಾಡುತ್ತಿರುವುದು ಕಾರಣವಾಗಿದೆ.

ಇದೇ ರೀತಿ ಸಂಘವನ್ನು ಇನ್ನೂ ಉತ್ತಮ ಸ್ಥಾನಕ್ಕೆ ತರಲು ನೂತನ ಅಧ್ಯಕ್ಷರ-ಉಪಾಧ್ಯಕ್ಷರು, ನಿರ್ದೇಶಕರು, ಹಾಗೂ ನೌಕರರ ವರ್ಗದವರು ಶ್ರಮಿಸುವಂತೆ ಸಲಹೆ ನೀಡಿದರು.
- ಶ್ರೀನಿವಾಸ್ ಆರ್.