ಕೆ.ಆರ್.ಪೇಟೆ,ಮೇ.30: ತಾಲ್ಲೂಕಿನ ಅಗ್ರಹಾರಬಾಚಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 2025-26ನೇ ಸಾಲಿನ ಶಾಲಾ ಪ್ರಾರಂಭೋತ್ಸವದ ಅಂಗವಾಗಿ ಶಾಲೆಗೆ ತಳಿರು-ತೋರಣ ಕಟ್ಟಿ, ಸಿಹಿ ವಿತರಣೆ ಮಾಡಿ ವಿದ್ಯಾರ್ಥಿಗಳನ್ನು ಸಡಗರ ಸಂಭ್ರಮದಿ0ದ ಸ್ವಾಗತಿಸಲಾಯಿತು.
ಮುಖ್ಯ ಶಿಕ್ಷಕ ಎ.ಹೆಚ್.ಯೋಗೇಶ್, ಸಹ ಶಿಕ್ಷಕರಾದ ಹೆಚ್.ಜಿ.ತಮ್ಮಯ್ಯ, ಎಂ.ಎಸ್.ನ0ಜಪ್ಪ, ಎಸ್.ಶಾಂತಕುಮಾರಿ, ಚೆಲುವರಾಜು, ಗ್ರಾಮ ಪಂಚಾಯಿತಿ ಸದಸ್ಯರಾದ ರಮೇಶ್, ಎಸ್.ಡಿ.ಎಂ.ಸಿ ಅಧ್ಯಕ್ಷ ಸಂತೋಷ್, ಎ.ಡಿ.ರವಿ, ಲೀಲಾವತಿ, ಪೂರ್ಣಿಮಾ ಮತ್ತಿತರರು ಬೇಸಿಗೆ ರಜೆ ಮುಗಿಸಿ ಮುಂದಿನ ತರಗತಿಗಳಿಗೆ ದಾಖಲಾಗಲು ಹರ್ಷಚಿತ್ತರಾಗಿ. ನಗುಮೊಗದಿಂದ ಆಗಮಿಸಿದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಿ, ಹೂ ನೀಡಿ ಶಾಲೆಗೆ ಸ್ವಾಗತಿಸಿದರು.

ಈ ವೇಳೆ ಮಾತನಾಡಿ, ಮುಖ್ಯ ಶಿಕ್ಷಕ ಎ.ಹೆಚ್.ಯೋಗೇಶ್ ಅವರು ಸರ್ಕಾರಿ ಶಾಲೆಗಳು ಉಳಿಯಬೇಕಾದರೆ ಪೋಷಕರು ಕಾನ್ವೆಂಟ್ ವ್ಯಾಮೋಹ ದೂರ ಮಾಡಿ, ತಮ್ಮ ಮಕ್ಕಳನ್ನು ತಮ್ಮ ಗ್ರಾಮದ ಸರ್ಕಾರಿ ಶಾಲೆಗೆ ದಾಖಲು ಮಾಡಬೇಕು. ಸರ್ಕಾರಿ ಶಾಲೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ನುರಿತ ಶಿಕ್ಷಕರ ತಂಡವಿದ್ದು, ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತೇವೆ. ಉಚಿತ ಪಠ್ಯ ಪುಸ್ತಕ, ಉಚಿತ ಮಧ್ಯಾಹ್ನ ಬಿಸಿಯೂಟ, ಶೂ ಸಾಕ್ಸ್ ಸೇರಿ ಹತ್ತು ಹಲವು ಸೌಲಭ್ಯಗಳನ್ನು ಸರ್ಕಾರದ ವತಿಯಿಂದ ನೀಡಲಾಗುತ್ತದೆ ಹಾಗಾಗಿ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲು ಮಾಡುವ ಮೂಲಕ ಸರ್ಕಾರಿ ಶಾಲೆಗಳನ್ನು ಉಳಿಸಲು ಸಹಕಾರ ನೀಡಬೇಕು.

ಸರ್ಕಾರಿ ಶಾಲೆಗಳು ಉಳಿದರೆ ಮಾತ್ರ ಬಡವರು ಮತ್ತು ಮಧ್ಯಮ ವರ್ಗದವರಿಗೆ ಶಿಕ್ಷಣ ದೊರಕಲು ಸಾಧ್ಯ. ಇಲ್ಲಿದ್ದರೆ ಶಿಕ್ಷಣ ಎಂಬುದು ಮಾರಾಟದ ವಸ್ತುವಾಗಲಿದೆ. ಸರ್ಕಾರಿ ಶಾಲೆಗಳು ಮುಚ್ಚಿದರೆ ಶಿಕ್ಷಣ ಎಂಬುದು ಬಡವರಿಗೆ ಕೈಗೆಟುಕದ ಗಗನ ಕುಸುಮವಾಗಲಿದೆ ಹಾಗಾಗಿ ಪೋಷಕರು ಹಾಗೂ ಎಸ್.ಡಿ.ಎಂ.ಸಿ ಸದಸ್ಯರು ಹಾಗೂ ಶಾಲೆಯ ಹಿರಿಯ ವಿದ್ಯಾರ್ಥಿಗಳು ತಮ್ಮ ಗ್ರಾಮದ ಸರ್ಕಾರಿ ಶಾಲೆಯನ್ನು ಉಳಿಸಲು ಕೈಜೋಡಿಸಬೇಕು ಎಂದು ಎ.ಹೆಚ್.ಯೋಗೇಶ್ ಮನವಿ ಮಾಡಿದರು.
– ಶ್ರೀನಿವಾಸ್ ಆರ್.