ಕೆ.ಆರ್.ಪೇಟೆ,ಮೇ.30: ತಾಲ್ಲೂಕಿನ ಕತ್ತರಘಟ್ಟ ಗ್ರಾಮದಲ್ಲಿ ದಲಿತ ಯುವ ರೈತ ಜಯಕುಮಾರ್ ಸಾವು ಶೇ.100ರಷ್ಟು ಕೊಲೆ ಪ್ರಕರಣವಾಗಿದ್ದು, ಪೊಲೀಸರು ಯಾರನ್ನೋ ರಕ್ಷಿಸುವ ಸಲುವಾಗಿ ಆತ್ಮಹತ್ಯೆ ಎಂದು ಎಫ್.ಐ.ಆರ್. ದಾಖಲಿಸುವ ಮೂಲಕ ದಲಿತ ಕುಟುಂಬಕ್ಕೆ ಅನ್ಯಾಯ ಮಾಡಿದ್ದಾರೆ.
ತನಿಖಾಧಿಕಾರಿಗಳು ಪ್ರಾಮಾಣಿಕ ತನಿಖೆ ನಡೆಸಿ ಚಾರ್ಜ್ಶೀಟ್ನಲ್ಲಿಯಾದರೂ ವಾಸ್ತವಾಂಶವನ್ನು ದಾಖಲಿಸುವ ಮೂಲಕ ನೊಂದ ದಲಿತ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಲು ಮುಂದಾಗಬೇಕು ಎಂದು ಕರ್ನಾಟಕ ವಿಧಾನ ಪರಿಷತ್ತಿನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಸರ್ಕಾರವನ್ನು ಒತ್ತಾಯ ಮಾಡಿದರು.

ಅವರು ಕೆ.ಆರ್.ಪೇಟೆ ತಾಲ್ಲೂಕಿನ ಕತ್ತರಘಟ್ಟ ಗ್ರಾಮದಲ್ಲಿ ದಲಿತ ಯುವಕ ಸಜೀವ ದಹನಗೊಂಡು ಅನುಮಾನ್ಯಾಸ್ಪದವಾಗಿ ಸಾವನ್ನಪ್ಪಿರುವ ಸ್ಥಳಕ್ಕೆ ಬೇಟಿ ಬೇಟಿ ನೀಡಿ ನೊಂದ ಕುಟುಂಬವನ್ನು ಬೇಟಿ ಮಾಡಿ ಸಾಂತ್ವನ ಹೇಳಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಆರೋಪಿ ಅನಿಲ್ಕುಮಾರ್ ಎಂಬಾತ ರೌಡಿಶೀಟರ್ ಆಗಿದ್ದು, ಜೊತೆಗೆ ಪೋಕ್ಸೋ ಕೇಸಿನ ಅಡಿಯಲ್ಲಿ ಜೈಲಿಗೆ ಹೋಗಿ ಬಂದಿರುವ ವ್ಯಕ್ತಿಯಾಗಿದ್ದಾನೆ. ಈಗ ಮೃತ ಜಯಕುಮಾರ್ ಕುಟುಂಬಕ್ಕೆ ಸೇರಿದ ರಸ್ತೆ ಬದಿಯ ಜಮೀನಿನನ್ನು ಕಬಳಿಸಲು ಹಲವು ವರ್ಷಗಳಿಂದ ಕುತಂತ್ರ ನಡೆಸುತ್ತಿದ್ದನು. ಪದೇ ಪದೇ ಹುಲ್ಲಿನ ಮೆದೆಯನ್ನು ಜಯಕುಮಾರ್ ಸ್ವಾಧೀನದಲ್ಲಿದ್ದ ಜಮೀನಿನಲ್ಲಿ ಹಾಕಿ ತೊಂದರೆ ನೀಡುತ್ತಿದ್ದನು.

ಈ ಬಗ್ಗೆ ಮೇ.15ರಂದು ಅನಿಲ್ಕುಮಾರ್ ಜಯಕುಮಾರ್ ಕುಟುಂಬದೊಂದಿಗೆ ಜಗಳ ಮಾಡಿ, ಹುಲ್ಲಿನ ಮೆದೆಯನ್ನು ತೆರವುಗೊಳಿಸುವುದಿಲ್ಲ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೆ ನೀನು ಮತ್ತು ನಿನ್ನ ಹೆಂಡತಿಯನ್ನು ಪೆಟ್ರೋಲ್ ಹಾಕಿ ಸುಟ್ಟು ಹಾಕುತ್ತೇನೆ ಎಂದು ಬೆದರಿಕೆ ಹಾಕಿದ್ದನು. ಆಗ ಜಯಕುಮಾರ್ ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿ ಬೆದರಿಕೆ ಹಾಕಿರುವ ಬಗ್ಗೆ ಉಲ್ಲೇಖ ಮಾಡಿ ರಕ್ಷಣೆ ನೀಡುವಂತೆ ಮನವಿ ಮಾಡಿದ್ದರು. ಆದರೆ ಪೊಲೀಸರು ರೌಡಿಶೀಟರ್ ಅನಿಲ್ಕುಮಾರ್ ವಿರುದ್ದ ಜಾತಿನಿಂದನೆ-ಕೊಲೆ ಬೆದರಿಕೆ ದೂರು ಬಂದರೂ ನಿರ್ಲಕ್ಷ್ಯ ಮಾಡಿದ್ದರ ಪರಿಣಾಮ ಜೀವಂತ ದಹನ ಪ್ರಕರಣ ನಡೆದಿದೆ.

ಒಂದು ಪೊಲೀಸರು ಜಯಕುಮಾರ್ ಮೇ.15ರಂದು ನೀಡಿದ ದೂರಿಗೆ ಕ್ರಮ ಕೈಗೊಂಡಿದ್ದರೆ ಮೇ.17ರಂದು ಜೀವಂತ ದಹನ ಪ್ರಕರಣ ಘಟನೆಯೂ ನಡೆಯುತ್ತಿರಲಿಲ್ಲ. ಜಯಕುಮಾರ್ ಸಾಯುತ್ತಿರಲಿಲ್ಲ ಇದಕ್ಕೆ ಪೊಲೀಸರ ನಿರ್ಲಕ್ಷö್ಯವೇ ಕಾರಣವಾಗಿದೆ ಎಂದು ಗಂಭೀರ ಆರೋಪ ಮಾಡಿದರು. ಅಲ್ಲದೆ ಮೇ.17ರಂದು ನಡೆದ ಘಟನೆಯ ಸಂಬಂಧ ನೊಂದ ಮಹಿಳೆ ವಕೀಲರ ಮೂಲಕ ಬರೆಸಿಕೊಟ್ಟ ದೂರನ್ನು ಯತಾವತ್ ದಾಖಲಿಸದೇ, ಬೇರೆ ದೂರನ್ನು ಬರೆದುಕೊಂಡು ಮೃತನ ಪತ್ನಿ ಲಕ್ಷ್ಮೀ ಸಹಿ ಪಡೆದು ಮನನೊಂದು ಆತ್ಮಹತ್ಯೆ ಎಂದು ಎಫ್.ಐ.ಆರ್ ದಾಖಲಿಸುವ ಮೂಲಕ ದಲಿತ ಕುಟುಂಬಕ್ಕೆ ಅನ್ಯಾಯ ಮಾಡಿದ್ದಾರೆ.

ಒಂದು ವೇಳೆ ಜಯಕುಮಾರ್ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದರೆ ಬೆಂಕಿಯ ಬಾಧೆ ತಾಳಲಾರದೆ ಇಡೀ ಮೈದಾನದಲ್ಲಿ ಓಡಾಡಬೇಕಿತ್ತು. ಆದರೆ ಜಯಕುಮಾರ್ ಓಡಾಡಿರುವ ವಂತಹ ಯಾವುದೇ ಕುರುಹು ಕಂಡು ಬರುತ್ತಿಲ್ಲ. ಜಯಕುಮಾರ್ ಮೇಲೆ ಹಲ್ಲೆ ನಡೆಸಿ, ಪ್ರಜ್ಞೆ ತಪ್ಪಿದ ನಂತರ ಬೆಂಕಿಗೆ ನೂಕಿ ಹತ್ಯೆ ಮಾಡಿರುವುದು ಕಂಡು ಬರುತ್ತಿದೆ. ಹಾಗಾಗಿ ಕೂಡಲೇ ತನಿಖೆಗೆ ನಿಯೋಜನೆಗೊಂಡಿರುವ ಬೆಂಗಳೂರು ಪೊಲೀಸ್ ವರಿಷ್ಠಾಧಿಕಾರಿ ಧರಣಾದೇವಿ ಮಾಲಗತ್ತಿ ಅವರು ಪ್ರಾಮಾಣಿಕ ತನಿಖೆ ನಡೆಸಿ ತಪ್ಪಿತಸ್ಥ ಎಲ್ಲರಿಗೂ ಕಠಿಣ ಶಿಕ್ಷೆಯಾಗುವಂತೆ ಕ್ರಮ ವಹಿಸಬೇಕು ಎಂದು ಛಲವಾದಿ ನಾರಾಯಣಸ್ವಾಮಿ ತನಿಖಾಧಿಕಾರಿಗಳಿಗೆ ಮನವಿ ಮಾಡಿದರು.

ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ: ರಾಜ್ಯದಲ್ಲಿ ಹೆಣ್ಣು ಮಕ್ಕಳ ಮೇಲೆ ರೇಪ್ ಆದರೆ ಅದು ಸರ್ವೆ ಸಾಮಾನ್ಯ ಘಟನೆ ಎಂದು ಗೃಹ ಸಚಿವರು ಹೇಳುತ್ತಿದ್ದಾರೆ. ಕೊಲೆ ನಡೆದರೆ ಅದನ್ನೂ ಕೂಡ ಸಾಮಾನ್ಯ ಸಂಗತಿ ಎನ್ನುತ್ತಾ ಕಾಲ ಕಳೆಯುತಿದ್ದಾರೆ. ಕತ್ತರಘಟ್ಟ ಗ್ರಾಮದ ದಲಿತ ರೈತ ಜಯಕುಮಾರ್ ಕೊಲೆಯನ್ನು ಸಾಮಾನ್ಯ ಸಂಗತಿ ಎನ್ನದೇ ಗಂಭೀರವಾಗಿ ಪರಿಗಣಿಸಬೇಕು. ಕೂಡಲೇ ಕತ್ತರಘಟ್ಟಕ್ಕೆ ಬೇಟಿ ನೀಡಬೇಕು. ಸತ್ಯಾಸತ್ಯತೆಯನ್ನು ಪರಿಶೀಲಿಸಿ ನೊಂದ ಕುಟುಂಬಕ್ಕೆ ಕನಿಷ್ಠ 50ಲಕ್ಷ ರೂ ಪರಿಹಾರ ನೀಡಬೇಕು. ಅಲ್ಲದೆ ಮೃತ ಜಯಕುಮಾರ್ ಪತ್ನಿ ಲಕ್ಷಿö್ಮಗೆ ಸರ್ಕಾರಿ ಉದ್ಯೋಗ ನೀಡಬೇಕು. ಇಲ್ಲದಿದ್ದರೆ ಭಾರತೀಯ ಜನತಾಪಾರ್ಟಿಯು ರಾಜ್ಯಾದ್ಯಂತ ಹೋರಾಟ ರೂಪಿಸಬೇಕಾಗುತ್ತದೆ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಈ ಸಂದಂರ್ಭದಲ್ಲಿ ಮಾಜಿ ಸಚಿವರಾದ ಕೆ.ಸಿ.ನಾರಾಯಣಗೌಡ, ಕೊಳ್ಳೇಗಾಲ ಎನ್.ಮಹೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ಇಂದ್ರೇಶ್, ತಹಸೀಲ್ದಾರ್ ಎಸ್.ಯು.ಅಶೋಕ್, ತಾಲ್ಲೂಕು ಸಮಶಜ ಕಲ್ಯಾಣಾಧಿಕಾರಿ ದಿವಾಕರ್, ತಾಲ್ಲೂಕು ಬಿಜೆಪಿ ಅಧ್ಯಕ್ಷ ಸಾರಂಗಿ ನಾಗಣ್ಣ, ರಾಮನಗರ ಜಿಲ್ಲಾ ಬಿಜೆಪಿ ಉಸ್ತುವಾರಿ ಕೆ.ಜೆ.ವಿಜಯ್ಕುಮಾರ್, ಛಲವಾದಿ ಮಹಾಸಭಾ ಮಂಡ್ಯ ಜಿಲ್ಲಾಧ್ಯಕ್ಷ ಸುರೇಶ್, ಮೂಡಾ ಮಾಜಿ ಅಧ್ಯಕ್ಷ ಕೆ.ಶ್ರೀನಿವಾಸ್, ತಾಲ್ಲೂಕು ಬಿಜೆಪಿ ಉಪಾಧ್ಯಕ್ಷ ಭಾರತೀಪುರ ಪುಟ್ಟಣ್ಣ, ಜಿಲ್ಲಾ ಬಿಜೆಪಿ ನೇಕಾರ ಮೋರ್ಚಾ ಅಧ್ಯಕ್ಷ ಬಿಗ್ಬಾಸ್ ಮೋಹನ್, ಪಿ.ಎಲ್.ಡಿ.ಬ್ಯಾಂಕ್ ನಿರ್ದೇಶಕ ಬೊಪ್ಪನಹಳ್ಳಿ ಸುನಿಲ್, ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಕಮಲಾಕ್ಷಿನಾಗರಾಜು, ಜಿಲ್ಲಾ ಬಿಜೆಪಿ ಕರ್ಯಕಾರಣಿ ಸದಸ್ಯ ಶೀಳನೆರೆ ಭರತ್, ಎಸ್.ಸಿ.ಮೋರ್ಚಾ ಬಿಜೆಪಿ ಅಧ್ಯಕ್ಷ ಪೂಜಾರಿ ಯಾಲಕ್ಕಯ್ಯ, ಮಾಜಿ ಅಧ್ಯಕ್ಷ ರವಿಶಿವಕುಮಾರ್, ನಾರಾಯಣಗೌಡರ ಆಪ್ತ ಸಹಾಯಕ ದಯಾನಂದ್, ಜಿಲ್ಲಾ ಡಿ.ಎಸ್.ಎಸ್ ಸಂಘಟನಾ ಸಂಚಾಲಕ ಕತ್ತರಘಟ್ಟ ರಾಜೇಶ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.