ಕೆ.ಆರ್.ಪೇಟೆ: ತಾಲ್ಲೂಕಿನ ಬೂಕನಕೆರೆ ಹೋಬಳಿಯ ಕಾಶಿ ಮುರುಕನಹಳ್ಳಿ ಗ್ರಾಮದಲ್ಲಿ ಬೋರಲಿಂಗೇಗೌಡ ಎಂಬಾತ ತನ್ನ ಜಮೀನಿನಲ್ಲಿ ಸುಮಾರು ಐವತ್ತು ಸಾವಿರ ಬೆಲೆ ಬಾಳುವ 17 ಕೆ.ಜಿ ಗಾಂಜಾ ಬೆಳೆದಿರುವ ಖಚಿತ ಮಾಹಿತಿ ಆಧರಿಸಿ ಮಂಡ್ಯ ಉಪ ಆಯುಕ್ತರ ಕಚೇರಿ ಉಪ ನಿರೀಕ್ಷಕ ನಾಗಭೂಷಣ್ ಹಾಗೂ ಕೆ.ಆರ್.ಪೇಟೆ ಅಬಕಾರಿ ಇನ್ಸ್ಪೆಕ್ಟರ್ ದೀಪಕ್ ನೇತೃತ್ವದಲ್ಲಿ ಮಾಲು ಸಮೇತ ಆರೋಪಿಯನ್ನು ಬಂಧಿಸಿದ್ದಾರೆ.
ಮಂಡ್ಯ ಅಬಕಾರಿ ಉಪ ಆಯುಕ್ತ ಕಚೇರಿ ಉಪನಿರೀಕ್ಷರಾದ ನಾಗಭೂಷಣ್ ಮಾತನಾಡಿ, ಕಾಶಿಮುರುಕನಹಳ್ಳಿ ಗ್ರಾಮದ ಬೋರಲಿಂಗೇಗೌಡ ಎಂಬ ವ್ಯಕ್ತಿ ತನ್ನ ಜಮೀನಿನಲ್ಲಿ ಗಾಂಜಾ ಗಿಡಗಳನ್ನು ಬೆಳೆದಿರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿತ್ತು.

ಈ ಮೇರೆಗೆ ತಾಲೂಕು ಕಂದಾಯ ಅಧಿಕಾರಿಗಳು ಜೊತೆಗೂಡಿ ನಮ್ಮ ತಂಡ ದಾಳಿಯ ಸಂದರ್ಭದಲ್ಲಿ ಸುಮಾರು ಐವತ್ತು ಸಾವಿರ ಮೌಲ್ಯದ 17ಕೆ.ಜಿ. ಗಾಂಜಾ ಗಿಡಗಳನ್ನು ವಶಪಡಿಸಿಕೊಳ್ಳಲಾಗಿದೆ ಅಲ್ಲದೆ ಆರೋಪಿ ವಿರುದ್ದ ಮಾದಕ ವಸ್ತುಗಳು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆ (ಎನ್ಡಿಪಿಎಸ್) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ಆರೋಪಿ ಬೋರಲಿಂಗೇಗೌಡನನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪತ್ರಕರ್ತರಿಗೆ ಮಾಹಿತಿ ನೀಡಿದರು.
- ಶ್ರೀನಿವಾಸ್ ಆರ್.