ಕೆ.ಆರ್.ಪೇಟೆ : 2024-25ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625ಕ್ಕೆ 625ಅಂಕಗಳನ್ನು ರಾಜ್ಯಕ್ಕೆ ಮೊದಲ ರಾಂಕ್ ಪಡೆದು ಇತಿಹಾಸ ನಿರ್ಮಿಸಿರುವ ಕೆ.ಆರ್.ಪೇಟೆ ಪಟ್ಟಣದ ಜ್ಞಾನೇಶ್, ರಶ್ಮಿ ಶಿಕ್ಷಕ ದಂಪತಿಗಳ ಪುತ್ರಿ ಜೆ.ಧೃತಿ ಅವರನ್ನು ರಾಜ್ಯದ ಮಾಜಿ ಸಚಿವರಾದ ಅಡಗೂರು ಹೆಚ್.ವಿಶ್ವನಾಥ್ ಸನ್ಮಾನಿಸಿ ಗೌರವಿಸಿದರು
ಕೆ.ಆರ್.ಪೇಟೆ ಪಟ್ಟಣದಲ್ಲಿ ಮಾಜಿ ಸಚಿವ ನಾರಾಯಣಗೌಡ ಅವರ ನಿವಾಸದಲ್ಲಿ ನಡೆದ ಸರಳ ಸಮಾರಂಭದಲ್ಲಿ ಮಾಜಿ ಶಿಕ್ಷಣ ಸಚಿವ ವಿಶ್ವನಾಥ್ ಮಾತನಾಡಿದರು.
ಅಕ್ಷರದ ಜ್ಞಾನದ ಬೆಳಕಿನ ಶಕ್ತಿಯು ನಮ್ಮಿಂದ ಯಾರೂ ಕಡಿಯಲಾಗದ ಆಸ್ತಿಯಾಗಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಸಾಧನೆಯನ್ನು ಕಂಡು ಸಂತೋಷವಾಗಿದೆ. ಧೃತಿ ಅವರು ಕೆ. ಆರ್. ಪೇಟೆ ಪಟ್ಟಣದಲ್ಲಿರುವ ಹಿರಿಯ ರಾಜಕೀಯ ಮುತ್ಸದ್ಧಿಗಳು ಹಾಗೂ ಮಾಜಿ ಶಾಸಕರಾದ ಎಸ್.ಎಂ.ಲಿಂಗಪ್ಪನವರ ಗ್ರಾಮಭಾರತಿ ಪ್ರೌಢ ಶಾಲೆಯಲ್ಲಿ ವ್ಯಾಸಂಗ ಮಾಡಿ ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ತೀವ್ರ ಸ್ಪರ್ಧೆ ನೀಡಿ 625ಕ್ಕೆ 625 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಇತಿಹಾಸ ನಿರ್ಮಿಸಿದ್ದಾರೆ. ಮುಂದೆ ಉನ್ನತ ವ್ಯಾಸಂಗ ಮಾಡಿ ಐ ಐ ಟಿ ಯಲ್ಲಿ ಇಂಜಿನಿಯರ್ ಆಗುವ ಹಂಬಲ ಹೊಂದಿದ್ದಾರೆ ಅವರ ಕನಸು ನನಸಾಗಲಿ, ಅವರ ಆಕಾಂಕ್ಷೆಗಳು ಈಡೇರಲಿ ಎಂದು ವಿಶ್ವನಾಥ್ ಶುಭ ಹಾರೈಸಿದರು.

ರಾಜ್ಯದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಒಬ್ಬ ನಾಲಾಯಕ್ ಮಂತ್ರಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾಗಿರುವ ಮಧು ಬಂಗಾರಪ್ಪ ಒಬ್ಬ ನಾಲಾಯಕ್ ಸಚಿವರಾಗಿದ್ದಾರೆ. ಪ್ರಾಥಮಿಕ ಶಿಕ್ಷಣ ಸೇರಿದಂತೆ ಶಿಕ್ಷಣ ಇಲಾಖೆಯ ಗಾಳಿ ಗಂಧ ಏನೊಂದು ಕೂಡಾ ಮಧುಗೆ ಗೊತ್ತಿಲ್ಲ, ಬಂಗಾರಪ್ಪ ಅವರ ಪುತ್ರ ಎಂದು ಸಿದ್ದರಾಮಯ್ಯ ಪ್ರಮುಖವಾದ ಶಿಕ್ಷಣ ಇಲಾಖೆಯ ಜವಾಬ್ದಾರಿ ನೀಡಿದ್ದಾರೆ.
ಜನರ ಅಭಿಪ್ರಾಯ ಸಂಗ್ರಹಿಸಿ ಜನಾಭಿಪ್ರಾಯಕ್ಕೆ ಪೂರಕವಾಗಿ ಕೆಲಸ ಮಾಡದ ಮಧು ಬಂಗಾರಪ್ಪ ಒಬ್ಬ ನಾಲಾಯಕ್ ಮಂತ್ರಿಯಾಗಿದ್ದಾರೆ ಎಂದು ವ್ಯಂಗ್ಯವಾಡಿದ ಮಾಜಿ ಶಿಕ್ಷಣ ಸಚಿವ ಹೆಚ್.ವಿಶ್ವನಾಥ್ ಇಂತಹ ನಾಲಾಯಕ್ ಸಚಿವರಿಂದ ಇಲಾಖೆಯಲ್ಲಿ ಯಾವ ಪ್ರಮುಖ ಬದಲಾವಣೆ ನಿರೀಕ್ಷಿಸಲು ಸಾಧ್ಯ ಎಂದು ಪತ್ರಕರ್ತರನ್ನು ಪ್ರಶ್ನಿಸಿದರು.

ಮಾಜಿ ಸಚಿವ ನಾರಾಯಣಗೌಡ ಮಾತನಾಡಿ ಧೃತಿ ಅವರ ಸಾಧನೆಯು ಯುವಜನರು ಹಾಗೂ ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ. ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮಿರುವ ಧೃತಿ ನಮ್ಮ ತಾಲೂಕಿನ ಕೀರ್ತಿಯನ್ನು ರಾಜ್ಯ ದಾಧ್ಯoತ ಬೆಳಗಿದ್ದಾರೆ. ಇವರ ಸಾಧನೆಯು ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ ಎಂದು ಅಭಿನಂದಿಸಿದರು.

ನಾರಾಯಣಗೌಡರ ಆಪ್ತಸಹಾಯಕ ದಯಾನಂದ, ಪುರಸಭೆ ಸದಸ್ಯ ಕೆ.ಎಸ್. ಪ್ರಮೋದ್, ಮಾಜಿ ಸದಸ್ಯರಾದ ಹರಪ್ರಸಾದ್, ಕೆ.ಆರ್. ನೀಲಕಂಠ, ಮುಖಂಡರಾದ ಕೈಗೋನಹಳ್ಳಿ ಕುಮಾರ್, ಸುನಿಲ್, ಅನಿಲ್, ಧೃತಿಯ ಪೋಷಕರಾದ ರಶ್ಮಿ, ಜ್ಞಾನೇಶ್, ಸಹೋದರಿ ಕಳೆದ ಸಾಲಿನ ಟಾಪರ್ ಮೋಕ್ಷಾಶ್ರೀ ಮತ್ತಿತರರು ಉಪಸ್ಥಿತರಿದ್ದರು.
- ಕೆ.ಬಿ.ಚಂದ್ರಚೂಡ