ಕೆ.ಆರ್.ಪೇಟೆ,ಜೂ.02: ತಾಲ್ಲೂಕಿನ ಕತ್ತರಘಟ್ಟ ಗ್ರಾಮದಲ್ಲಿ ನಡೆದಿರುವ ಜಯಕುಮಾರ್ ಅವರ ಸಜೀವ ದಹನ ಪ್ರಕರಣ ನಡೆದಿರುವ ಸ್ಥಳಕ್ಕೆ ಕರ್ನಾಟಕ ರಾಜ್ಯ ರೈತಸಂಘ(ರೈತಬಣ) ರಾಜ್ಯಾಧ್ಯಕ್ಷ ಇಂಗಲಗುಪ್ಪೆ ಕೃಷ್ಣೇಗೌಡ ಅವರು ಬೇಟಿ ನೀಡಿ ಘಟನೆಯನ್ನು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ಮೃತ ಜಯಕುಮಾರ್ ಪುತ್ರಿಯ ವಿದ್ಯಾಭ್ಯಾಸದ ವೆಚ್ಚಗಳನ್ನು ರೈತ ಸಂಘವು ಭರಿಸಲಿದೆ. ಜೊತೆಗೆ ಹೆಣ್ಣುಮಗು ಮತ್ತು ತಾಯಿಯ ಹೆಸರಿನ 25ಸಾವಿರ ರೂಪಾಯಿಗಳ ಜಂಟಿ ಪಿಕ್ಸೆಡ್ ಡೆಪಾಸಿಟ್ ಇಡುವುದಾಗಿ ಭರವಸೆ ನೀಡಿದರು.

ಕರ್ನಾಟಕ ರಾಜ್ಯ ದಲಿತ ಸೇನೆ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ಶೆಟ್ಟಿ ಬಣದ ನೂರಾರು ಕಾರ್ಯಕರ್ತರೊಂದಿಗೆ ಕತ್ತರಘಟ್ಟ ಗ್ರಾಮಕ್ಕೆ ಬೇಟಿ ನೀಡಿ, ಮೃತ ಜಯಕುಮಾರ್ ಧರ್ಮಪತ್ನಿ ಲಕ್ಷ್ಮಿ ಅವರನ್ನು ಬೇಟಿ ಮಾಡಿ ದೈರ್ಯ ತುಂಬಿದರು. ತಮ್ಮ ಯಾವುದೇ ಕಷ್ಟ ಸುಖಗಳಿಗೆ ರಾಜ್ಯ ರೈತ ಸಂಘವು ಸದಾ ಸ್ಪಂಧಿಸಲಿದೆ.
ಈ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ರೈತಸಂಘ(ರೈತಬಣ) ರಾಜ್ಯಾಧ್ಯಕ್ಷ ಇಂಗಲಗುಪ್ಪೆ ಕೃಷ್ಣೇಗೌಡ ಅವರು ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕು ಕತ್ತರಘಟ್ಟ ಗ್ರಾಮದಲ್ಲಿ ದಲಿತ ಯುವ ರೈತ ಜಯಕುಮಾರ್ ಅವರ ಸಜೀವ ದಹನ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು. ಪೊಲೀಸರು ಸದರಿ ಪ್ರಕರಣದಲ್ಲಿ ಮೃತನ ಪತ್ನಿ ನೀಡಿದ ದೂರನ್ನು ತಿರುಚಿ ಎಫ್.ಐ.ಆರ್ ದಾಖಲಿಸಿದ್ದಾರೆ ಎಂದು ಮೃತ ಜಯಕುಮಾರ್ ಅವರ ಪತ್ನಿ ಲಕ್ಷ್ಮಿ ಅವರು ಆರೋಪಿಸಿದ್ದು, ಈ ಬಗ್ಗೆಯೂ ಸಮಗ್ರ ತನಿಖೆಯಾಗಬೇಕು. ಒಂದು ವೇಳೆ ಪೊಲೀಸರು ದೂರು ದಾಖಲಿಸುವಲ್ಲಿ ತಪ್ಪು ಎಸಗಿದ್ದರೆ ಅವರ ವಿರುದ್ಧ ಸರ್ಕಾರವು ಕಠಿಣ ಕಾನೂನು ತೆಗೆದುಕೊಳ್ಳಬೇಕು.

ಮೃತ ಜಯಕುಮಾರ್ ಅವರ ಜಮೀನಿನಲ್ಲಿ ಹುಲ್ಲಿನ ಮೆದೆ ಹಾಕಿಕೊಂಡಿದ್ದ ಸದ್ಯ ಆರೋಪಿ ಎಂದು ಗುರುತಿಸಲಾಗಿರುವ ಅನಿಲ್ಕುಮಾರ್ ಎಂಬಾತನ ವಿರುದ್ಧ ಮೇ.15ರಂದು ಜಯಕುಮಾರ್ ಪೊಲೀಸರಿಗೆ ದೂರು ನೀಡಿದ್ದರೂ ಸಹ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದ ಕಾರಣ ಅನಿಲ್ ಕುಮಾರ್ ಅವರು ಜಯಕುಮಾರ್ ಮೇಲೆ ನಿರಂತರ ದೌರ್ಜನ್ಯ ಎಸಗಿರುವ ಬಗ್ಗೆ ವರದಿಯಾಗಿದ್ದು, ಈ ಬಗ್ಗೆಯೂ ಸೂಕ್ತ ತನಿಖೆ ನಡೆಸಿ, ಕರ್ತವ್ಯ ನಿರ್ಲಕ್ಷ್ಯ ಎಸಗಿರುವ ಪೊಲೀಸರ ಮೇಲೆ ಕ್ರಮ ಜರುಗಿಸಬೇಕು. ಮೃತ ಜಯಕುಮಾರ್ ಕುಟುಂಬಕ್ಕೆ ಸರ್ಕಾರ ಒಂದು ಕೋಟಿ ರೂ ಪರಿಹಾರ ಕೊಡಬೇಕು. ಮತ್ತು ಮೃತನ ಪತ್ನಿಗೆ ಸರ್ಕಾರಿ ಉದ್ಯೋಗ ನೀಡಬೇಕು. ಅವರ ಮಕ್ಕಳ ಶಿಕ್ಷಣದ ಖರ್ಚನ್ನು ಸರ್ಕಾರವೇ ನೀಡಬೇಕು.

ಮೃತ ಜಯಕುಮಾರ್ ಪತ್ನಿ ಲಕ್ಷ್ಮಿ ಮತ್ತು ಏನೂ ಅರಿಯದ ಎರಡು ಎಳೆಯ ಪುಟ್ಟ ಮಕ್ಕಳನ್ನು ನೋಡಿದರೆ ಕರಳು ಹಿಂಡಿದAತಾಗುತ್ತದೆ. ತನ್ನ ಗಂಡನನ್ನು ಹೊಡೆದು ಬೆಂಕಿಗೆ ತಳ್ಳಿ ಹತ್ಯೆ ಮಾಡಿದ್ದಾರೆ ಎಂದು ದೂರು ನೀಡಿದ್ದರೂ ಸಹ ಪೊಲೀಸರು ಬೇರೊಂದು ದೂರು ಬರೆದುಕೊಂಡು ನನ್ನ ಮುಂದೆ ಓದಿ ಹೇಳಿರುವುದಿಲ್ಲ. ಪೊಲೀಸರೇ ಬರೆದ ದೂರು ಪತ್ರಕ್ಕೆ ಸಹಿ ಹಾಕಿಸಿಕೊಂಡು ಪ್ರಕರಣವನ್ನು ತಿರುಚಿದ್ದಾರೆ. ನನ್ನ ಗಂಡ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ನಾನು ಹೇಳಿಯೇ ಇಲ್ಲ. ಆದರೂ ದೂರಿನಲ್ಲಿ ತಪ್ಪಾಗಿ ದಾಖಲಿಸಿದ್ದಾರೆ. ಎರಡು ಮಕ್ಕಳನ್ನು ಬಿಟ್ಟು ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿ ನನ್ನ ಗಂಡನದ್ದಲ್ಲ” ಎಂದು ಹೇಳಿದ್ದು, ಈ ಬಗ್ಗೆ ಡಿವೈಎಸ್ಪಿ ಅವರಿಗೆ ಮರು ದೂರು ನೀಡಿದ್ದಾರೆ. ಪೊಲೀಸರು ಈ ದೂರನ್ನೇ ಮೂಲ ದೂರನ್ನಾಗಿ ಪರಿಗಣಿಸಿ ಜಾರ್ಜ್ಶೀಟ್ನಲ್ಲಿ ಕೊಲೆ ಪ್ರಕರಣ ಎಂಬ ಅಂಶವನ್ನು ದಾಖಲಿಸಬೇಕು.

ಕತ್ತರಘಟ್ಟ ಪ್ರಕರಣದಿಂದ ಇಡೀ ರಾಜ್ಯವೇ ತಲೆ ತಗ್ಗಿಸುವಂತಹ ಅಮಾನವೀಯ ಕೃತ್ಯವಾಗಿದೆ. ಇದು ಸ್ವಾತಂತ್ರ ಬಂದು 78ವರ್ಷಗಳ ಕಳೆದರೂ ದಲಿತರ ಮೇಲಿನ ದೌರ್ಜನ್ಯ ನಿಂತಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದ್ದು, ಇಂತಹ ಪ್ರಕರಣಗಳು ನಡೆಯದಂತೆ ರಾಜ್ಯದ ದಲಿತಪರ ಸಂಘಟನೆಗಳು ಮತ್ತು ರೈತಪರ ಸಂಘಟನೆಗಳು ಒಗ್ಗಟ್ಟಾಗಿ ಹೋರಾಟ ಮಾಡುವ ಮೂಲಕ ಮೃತ ಜಯಕುಮಾರ್ ಕುಟುಂಬಕ್ಕೆ ನ್ಯಾಯ ಒದಗಿಸಬೇಕಾದ ತುರ್ತು ಅಗತ್ಯವಿದೆ ಎಂದು ಇಂಗಲಗುಪ್ಪೆ ಕೃಷ್ಣೇಗೌಡ ಹೇಳಿದರು.

ಈ ಸಂದರ್ಭದಲ್ಲಿ ಕರವೇ ಪ್ರವೀಣ್ಶೆಟ್ಟಿ ಬಣದ ಮಂಡ್ಯ ಜಿಲ್ಲಾಧ್ಯಕ್ಷ ಡಿ.ಅಶೋಕ್, ಹರಳಹಳ್ಳಿ ಶಿವರಾಂ, ಕರವೇ ಕಾಂತರಾಜು, ಡಿ.ಎಸ್.ಎಸ್ ಅಧ್ಯಕ್ಷ ದೇವರಾಜು ಅರಳಕುಪ್ಪೆ, ಕರ್ನಾಟಕ ರಾಜ್ಯ ರೈತಸಂಘ(ರೈತಬಣ) ಗೌರವಾಧ್ಯಕ್ಷ ಬಿಡದಿ ಪಿ.ಎಂ.ರವಿಕುಮಾರ್, ಮೈಸೂರು ಜಿಲ್ಲಾಧ್ಯಕ್ಷ ಮಾಲೀಕ್ ಅವರ್ತಿ, ರೈತಬಣ, ರಾಜ್ಯ ಅಲ್ಪಸಂಖ್ಯಾತರ ವಿಭಾಗದ ರಾಜ್ಯಾಧ್ಯಕ್ಷ ತನ್ವಿರ್ ಮುಜಾದ್, ಮಂಡ್ಯ ಜಿಲ್ಲಾಧ್ಯಕ್ಷ ಕೆ.ಹೆಚ್ ಕಂಠೀರವರು ಕಾರಸವಾಡಿ, ವಿಜಯನಗರ ಜಿಲ್ಲಾಧ್ಯಕ್ಷ ಹರಪನಹಳ್ಳಿ ಲೋಕೇಶ್ನಾಯಕ್, ಬಂಜಾರ ಸಮಾಜದ ರಾಜ್ಯಾಧ್ಯಕ್ಷ ಸುರೇಶ ನಾಯಕ್, ಚಾಮುಂಡೇಶ್ವರಿ ಕ್ಷೇತ್ರದ ಅಧ್ಯಕ್ಷ ಕೆಂಪರಾಜು, ಕೆ.ಆರ್. ಪೇಟೆ ತಾಲೂಕು ಅಧ್ಯಕ್ಷ ದೊದ್ದನಕಟ್ಟೆ ಹರೀಶ್ಕುಮಾರ್, ಹಾಸನ ಜಿಲ್ಲಾ ಅಧ್ಯಕ್ಷ ದಯಾನಂದ್ ಬೆಳಗುಂಬ, ಮುಖಂಡರಾದ ಕಾಳಪ್ಪ ಜಯಪುರ, ಮಂಜು ಪಾಳ್ಯ, ಪುಟ್ಟಸ್ವಾಮಿ ನಾಯಕ, ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.