ಕೆ.ಆರ್.ಪೇಟೆ,ಮೇ.28: ಕ್ಷೇತ್ರದ ಶಾಸಕ ಹೆಚ್.ಟಿ.ಮಂಜು ಅವರು ಸಹಕಾರ ಸಂಸ್ಥೆಗಳ ಮೇಲೆ ಗದಾಪ್ರಹಾರ ನಡೆಸಲು ಮುಂದಾಗುತ್ತಿದ್ದಾರೆ. ಶಾಸಕರಾಗಿ ಮಾಡಲು ಸಾಕಷ್ಟು ಕೆಲಸಗಳಿವೆ. ಅದನ್ನು ಬಿಟ್ಟು ಸಣ್ಣ-ಪುಟ್ಟ ವಿಚಾರಕ್ಕೆ ಟೀಕೆ ಮಾಡಿಕೊಂಡು ಕಾಲ ಕಳೆಯುತ್ತಿದ್ದಾರೆ. ನಮ್ಮನ್ನು ಹಿರಣ್ಯಕಶ್ಯಪು ಅಂತಾ ಟೀಕೆ ಮಾಡಿದ್ದಾರೆ ಆದರೆ ನೀವು ನೆನ್ನೆ ಪತ್ರಿಕಾಗೋಷ್ಠಿಯಲ್ಲಿ ಸಾರ್ವಜನಿಕವಾಗಿ ರಾವಣ ಪಾತ್ರಧಾರಿಯಾಗಿ ರೋಷಾವೇಷದಿಂದ ಮಾತನಾಡಿದ್ದೀರಿ ಇದು ಸರಿಯೇ? ಟೀಕೆ ಬಿಟ್ಟು, ಅನುಧಾನ ತಂದು, ತಾಲ್ಲೂಕಿನ ಅಭಿವೃದ್ಧಿಗೆ ಕೆಲಸ ಮಾಡಿ, ಶಾಸಕ ಸ್ಥಾನದ ಗೌರವ ಉಳಿಸಿಕೊಳ್ಳಿ ಎಂದು ಮನ್ಮುಲ್ ನಿರ್ದೇಶಕ ಡಾಲು ರವಿ, ಶಾಸಕ ಹೆಚ್.ಟಿ.ಮಂಜು ಅವರಿಗೆ ಸಲಹೆ ನೀಡಿದರು.
ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ನಮ್ಮ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳಿಗೆ ಶಾಸಕರ ನೇತೃತ್ವದಲ್ಲಿ ನಡೆಸುವ ಕೆ.ಡಿ.ಪಿ ಸಭೆಗಳಿಗೆ ಅಗತ್ಯವಿದ್ದರೆ ಹೋಗಿ, ಸುಮ್ಮನೆ ಹೋಗುವುದು ಬೇಡ ಎಂದು ತಿಳಿಸಿದ್ದೇವೆ. ಕೆ.ಡಿ.ಪಿ ಸಭೆಗೆ ಬರಲೇಬೇಕು ಎಂದು ಕೇಳಲು ಶಾಸಕರು ಯಾರು? ಎಂದು ಪ್ರಶ್ನಿಸಿದರು.

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಡೆಯುವ ಕೆ.ಡಿ.ಪಿ ಸಭೆಯನ್ನು ಕರೆಯಲು ಶಾಸಕರಿಗೆ ಹಕ್ಕಿಲ್ಲ. ಕೇವಲ ಗ್ರಾಮ ಪಂಚಾಯಿತಿ ಅಧ್ಯಕ್ಷರು-ಪಿಡಿಓ ಮಾತ್ರ ಕೆ.ಡಿ.ಪಿ ಸಭೆ ನಡೆಸಬೇಕೆಂಬ ಆದೇಶವಿದೆ. ಶಾಸಕರು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಡೆಯುವ ಕೆ.ಡಿ.ಪಿ ಸಭೆಗೆ ಬರಲೇಬೇಕು ಎಂದು ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳಿಗೆ ಆದೇಶ ನೀಡುವುದಾಗಲಿ, ಗೈರು ಹಾಜರಾದರೇ ನೋಟಿಸ್ ನೀಡುವ ಹಕ್ಕು ಶಾಸಕರಿಗೆ ಇಲ್ಲ ಎಂದು ತಿಳಿಸಿದರು.
ಶಾಸಕರಾಗಿರುವ ಹೆಚ್.ಟಿ.ಮಂಜು ಅವರು ಮನ್ಮುಲ್ ನಿರ್ದೇಶಕರಾಗಿ ಐದು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಆದರೂ ಅವರಿಗೆ ಯಾವ ಅನುಧಾನ ಸರ್ಕಾರದ್ದು, ಅಥವಾ ಮನ್ಮುಲ್ ಒಕ್ಕೂಟದ್ದು ಎಂಬುದರ ಬಗ್ಗೆ ಕನಿಷ್ಠ ಜ್ಞಾನ ಇಲ್ಲವಾಗಿದೆ. ಗೊತ್ತಿಲ್ಲದಿದ್ದರೆ ಅಧಿಕಾರಿಗಳಿಂದ ತಿಳಿದುಕೊಂಡು ಮಾತನಾಡಲಿ. ಮನ್ಮುಲ್ ಬಿ.ಎಂ.ಸಿ ಕೇಂದ್ರ ಸ್ಥಾಪನೆಗೆ, 1ಲಕ್ಷ ಒಕ್ಕೂಟದಿಂದ ಕೊಟ್ಟರೆ, ಉಳಿದ 3ಲಕ್ಷ ರೂಗಳನ್ನು ರಾಜ್ಯ ಸರ್ಕಾರದ ಅಧೀನ ಸಂಸ್ಥೆಯಾಗಿರುವ ಕೆ.ಎಂ.ಎಫ್. ಮೂಲಕ ರಾಜ್ಯ ಸರ್ಕಾರವೇ ನೀಡುತ್ತಿದೆ. ಒಕ್ಕೂಟದಿಂದ ನೀಡುವ ಎಲ್ಲಾ ಅನುಧಾನವೂ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಹಬಾಗಿತ್ವದಿಂದಲೇ ಬರುತ್ತದೆ.

ಈ ಬಗ್ಗೆ ಕನಿಷ್ಠ ಜ್ಞಾನವಿಲ್ಲದೇ ಶಾಸಕರು ಮಾತನಾಡುವುದು ಸರಿಯಲ್ಲ. ಶಾಸಕರು ಹೊಸಹೊಳಲು ಶ್ರೀ ಕೋಟೆ ಭೈರವೇಶ್ವರ ದೇವಾಲಯ ಟ್ರಸ್ಟಿಗೆ ಮನ್ಮುಲ್ನಿಂದ ಸುಮಾರು 3ಲಕ್ಷ ರೂಪಾಯಿಗಳನ್ನು ನೀಡಿದ್ದೇವೆ ಆದರೆ ದೇವಾಲಯದ ಉದ್ಘಾಟನಾ ಸಮಾರಂಭಕ್ಕೆ ಸೌಜನ್ಯಕ್ಕಾದರೂ ಮನ್ಮುಲ್ ನಿರ್ದೇಶಕರನ್ನು ಹಾಗೂ ಅಧಿಕಾರಿಗಳನ್ನು ಆಹ್ವಾನಿಸಿ ಗೌರವಿಸಿಲ್ಲ. ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ವತಿಯಿಂದ ನಡೆಸುವ ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರಗಳಿಗೆ ಯಾವುದೇ ಕಾರಣಕ್ಕೂ ಡಾಲು ರವಿ, ಎಂ.ಬಿ.ಹರೀಶ್, ಆರ್.ಟಿ.ಓ ಮಲ್ಲಿಕಾರ್ಜುನ್ ಕರೆಯಬಾರದು. ಅವರು ನೀಡುವ ದೇಣಿಗೆಯನ್ನು ಸ್ವೀಕರಿಸಬಾರದರು ಎಂದು ಪರ್ಮಾನು ಹೊರಡಿಸಿದ್ದೀರಿ ಎನ್.ಎಸ್.ಎಸ್. ವಿಶೇಷ ಶಿಬಿರದಲ್ಲೂ ಪ್ರೋಟೋಕಾಲ್ ಇದೆಯೇ?, ಅದೇ ರೀತಿ ತಾಲ್ಲೂಕಿನಲ್ಲಿ ಶಿಕ್ಷಕರು ನಡೆಸುವ ಕ್ರೀಡಾಕೂಟ, ಶಿಕ್ಷಕರ ದಿನಾಚರಣೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಮನ್ಮುಲ್ ನಿರ್ದೇಶಕರಾದ ಡಾಲು ರವಿ, ಎಂ.ಬಿ.ಹರೀಶ್, ಆರ್.ಟಿ.ಓ. ಮಲ್ಲಿಕಾರ್ಜುನ್ ಅವರನ್ನು ಆಹ್ವಾನಿಸಲೂ ಬಾರದು. ಅವರಿಂದ ಕಾರ್ಯಕ್ರಮಕ್ಕೆ ದೇಣಿಗೆಯನ್ನೂ ಸ್ವೀಕರಿಸಬಾರದು ಎಂದು ಖಡಕ್ ಸೂಚನೆ ನೀಡಿದ್ದೀರಿ. ಇದರಿಂದ ನಮಗೇನು ನಷ್ಟವಿಲ್ಲ. ಶಿಕ್ಷಕರಿಗೂ ನಿಮ್ಮ ಸಣ್ಣತನ ನಿಮ್ಮ ನಡಾವಳಿಕೆಯಿಂದಲೇ ತಿಳಿಯುವಂತಾಗಿದೆ. ಇಂತಹ ಸಣ್ಣತನದ ನಡಾವಳಿಕೆಯು ನಿಮಗೆ ಶೋಭೆ ತರುವುದಿಲ್ಲ ಎಂದು ಶಾಸಕರ ವಿರುದ್ದ ಡಾಲು ರವಿ ಕಿಡಿಕಾರಿದರು.

ಟಿ.ಜೆ.ಕ್ರಷರ್ ಜಾಗ ಅರಣ್ಯದ್ದು: ಶೀಳನೆರೆ ಹೋಬಳಿಯ ಶಿವಪುರ ಗ್ರಾಮದ ಬಳಿ ಇರುವ ಟಿ.ಜೆ.ಸ್ಟೋನ್ ಕ್ರಷರ್ ಅನ್ನು ವನ್ಯಜೀವಿ ಅರಣ್ಯ ಪ್ರದೇಶದಲ್ಲಿದೆ. ಕೂಡಲೇ ಸರ್ವೆ ಮಾಡಿಸಿ ನನ್ನ ಕ್ರಷರ್ ಅಕ್ರಮವಾಗಿಲ್ಲ ಎಲ್ಲಾ ದಾಖಲೆಗಳೊಂದಿಗೆ ಸಕ್ರಮದಿಂದ ನಡೆಯುತ್ತಿದೆ ಎಂದು ಸಾಬೀತು ಪಡಿಸಬೇಕು. ಒಂದು ವೇಳೆ ಅರಣ್ಯ ಪ್ರದೇಶದಲ್ಲಿ ಕ್ರಷರ್ ಇಲ್ಲದಿದ್ದರೆ. ನಾನು ಬಹಿರಂಗ ಕ್ಷಮೆ ಕೋರುತ್ತೇನೆ ಎಂದು ಡಾಲು ರವಿ ಸವಾಲು ಶಾಸಕರಿಗೆ ಹಾಕಿದರು.

ಗುತ್ತಿಗೆಯನ್ನು ಕಾರ್ಯಕರ್ತರಿಗೆ ಯಾಕೆ ನೀಡುತ್ತಿಲ್ಲ: ತಮ್ಮ ಶಾಸಕರ ಪ್ರದೇಶಾಭಿವೃದ್ದಿ ನಿದಿ ಹಾಗೂ ಜಿಲ್ಲಾ ಪಂಚಾಯಿತಿ ಮೂಲಕ ಬಂದಿರುವ ಅನುಧಾನವನ್ನು ಕಾರ್ಯಕರ್ತರಿಗೆ ಗುತ್ತಿಗೆಗೆ ನೀಡದೇ, ಹೆಚ್ಚು ಕಮೀಷನ್ ಪಡೆಯುವ ದೃಷ್ಠಿಯಿಂದ ಭೂಸೇನಾ ನಿಗಮ ಹಾಗೂ ನಿರ್ಮಿತಿ ಕೇಂದ್ರಗಳಿಗೆ ಗುತ್ತಿಗೆಗೆ ನೀಡುತ್ತಿರುವುದು. ಏತಕ್ಕಾಗಿ ಎಂದು ಶಾಸಕ ಹೆಚ್.ಟಿ.ಮಂಜು ಅವರನ್ನು ಡಾಲು ರವಿ ಪ್ರಶ್ನಿಸಿದರು.
ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಎಂ.ಬಿ.ಹರೀಶ್ ಮಾತನಾಡಿ, ಶಾಸಕರಿಗೆ ಅವರಿಗೆ ಆದ ಜವಾಬ್ದಾರಿಗಳಿವೆ. ನಮಗೆ ಹಾಲು ಒಕ್ಕೂಟದ ಸಹಕಾರ ಸಂಘಗಳ ಅಭಿವೃದ್ಧಿಗೆ ಮಾಡಲು ಸಾಕಷ್ಟು ಕೆಲಸಗಳಿವೆ. ಹೆಚ್.ಟಿ.ಮಂಜು ಅವರನ್ನು ನಾವು ಶಾಸಕರನ್ನಾಗಿ ಮಾಡಿದ್ದೇವೆ. ಅವರನ್ನು ಪ್ರಶ್ನಿಸಲು ನಮಗೆ ಹಕ್ಕಿದೆ. ಆದರೆ ಶಾಸಕರು ನಮ್ಮನ್ನೇ ಟೀಕೆ ಮಾಡುತ್ತಿರುವುದು ಶೋಭೆ ತರುವುದಿಲ್ಲ. ಶಾಸಕರು ಅವರ ಕೆಲಸ ಮಾಡಲಿ, ನಾವು ನಮ್ಮ ಮನ್ಮುಲ್ ವ್ಯಾಪ್ತಿಯ ಕೆಲಸಗಳನ್ನು ಮಾಡುತ್ತೇವೆ. ಎಲ್ಲರೂ ಸೇರಿ ತಾಲ್ಲೂಕಿನ ಅಭಿವೃದ್ಧಿಗೆ ಕೆಲಸ ಮಾಡೋಣ. ಪರಸ್ಪರ ಟೀಕೆ-ಪ್ರತಿಟೀಕೆಯಿಂದ ಯಾವುದೇ ಪ್ರಯೋಜನವಿಲ್ಲ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮನ್ಮುಲ್ ನಿರ್ದೇಶಕ ಎಂ.ಬಿ.ಹರೀಶ್ ಮುಖಂಡರಾದ ಹಾದನೂರು ಪರಮೇಶ್, ಕೈಗೋನಹಳ್ಳಿ ಜಯರಾಂ, ಜಾಗಿನಕೆರೆ ಅಂಬರೀಶ್, ಕಾಶಿಮುರುಕನಹಳ್ಳಿ ಅಶೋಕ್, ಜಯಕರ್ನಾಟಕ ಸಂಘಟನೆಯ ಅಧ್ಯಕ್ಷ ಸೋಮಶೇಖರ್, ಹಿರೀಕಳಲೆ ದಿಲೀಪ್, ಬೀರುವಳ್ಳಿ ಡೇರಿ ಅಧ್ಯಕ್ಷ ನವೀನ್, ಉಪಾಧ್ಯಕ್ಷ ಮಹಾದೇವಪ್ಪ ಮತ್ತಿತರರು ಉಪಸ್ಥಿತರಿದ್ದರು.
- ಶ್ರೀನಿವಾಸ್ ಎನ್.