ಕೆ.ಆರ್.ಪೇಟೆ-ಕತ್ತರಘಟ್ಟ ದಲಿತ ಯುವಕನ ಜೀವಂತ ದಹನ ಖಂಡಿಸಿ ಕೆ.ಆರ್.ಪೇಟೆಯಲ್ಲಿ ಬೃಹತ್ ಪ್ರತಿಭಟನೆ – ಎಸ್‌ಐಟಿ ತನಿಖೆ, 50 ಲಕ್ಷ ಪರಿಹಾರಕ್ಕೆ ಆಗ್ರಹ

ಕೆ.ಆರ್.ಪೇಟೆ,ಮೇ.27: ತಾಲೂಕಿನ ಕತ್ತರಘಟ್ಟ ಗ್ರಾಮದಲ್ಲಿ ದಲಿತ ಯುವ ರೈತ ಜಯಕುಮಾರ್ ಎಂಬಾತನ ಮೇಲೆ ಸವರ್ಣೀಯ ವ್ಯಕ್ತಿ ಅನಿಲ್‌ಕುಮಾರ್ ಎಂಬಾತ ದಬ್ಬಾಳಿಕೆ ದೌರ್ಜನ್ಯ ನಡೆಸಿ ಉರಿಯುತ್ತಿದ್ದ ಹುಲ್ಲಿನ ಮೆದೆಗೆ ಯುವ ರೈತ ಜಯಕುಮಾರನನ್ನು ತಳ್ಳಿ ಜೀವಂತ ದಹನ ಮಾಡಿ ಹತ್ಯೆ ಮಾಡಿರುವ ಪ್ರಕರಣವನ್ನು ರಾಜ್ಯ ಸರ್ಕಾರವು ಗಂಭೀರವಾಗಿ ಪರಿಗಣಿಸಬೇಕು. ಸ್ಥಳಕ್ಕೆ ಗೃಹ ಸಚಿವರು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಚಿವರು ಬೇಟಿ ನೀಡಿ ಪರಿಶೀಲನೆ ನಡೆಸಬೇಕು. ಎಸ್.ಟಿ.ಐ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ಪೊಲೀಸರನ್ನು ಅಮಾನತ್ತು ಮಾಡಬೇಕು ಎಂದು ಕೆ.ಆರ್.ಪೇಟೆ ಪಟ್ಟಣದಲ್ಲಿ ತಾಲ್ಲೂಕು ದಲಿತ ಪರ ಸಂಘಟನೆಗಳ ಒಕ್ಕೂಟ ಹಾಗೂ ಪ್ರಗತಿಪರ ಸಂಘಟನೆಗಳ ವೇದಿಕೆಯ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಪಟ್ಟಣದ ಪ್ರವಾಸಿ ಮಂದಿರದಿ0ದ ಆರಂಭವಾದ ಪ್ರತಿಭಟನೆಯು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಾಗಿ ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿ ನಂತರ ಮಿನಿವಿಧಾನಸೌಧದ ಆವರಣದಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಸಿ ಕತ್ತರಘಟ್ಟ ಗ್ರಾಮದಲ್ಲಿ ದಲಿತ ಯುವಕ ಜೀವಂತ ದಹನವಾದ ಘಟನೆಯ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ಗಮನ ಹರಿಸಿ ತನಿಖೆಗೆ ಆದೇಶ ಹೊರಡಿಸಿ ನೊಂದ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರೆಗೋಡು, ಡಿ.ಎಸ್.ಎಸ್(ಅಂಬೇಡ್ಕರ್‌ವಾದ) ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್, ಮೈಸೂರು ಉರಿಲಿಂಗಿಪೆದ್ದಿಮಠ ಶ್ರೀ ಜ್ಞಾನಪ್ರಕಾಶಸ್ವಾಮೀಜಿ, ಚಿತ್ರದುರ್ಗದ ಛಲವಾದಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಬಸವನಾಗದೇವ ಸ್ವಾಮೀಜಿ, ಬಿ.ಎಸ್.ಪಿ. ರಾಜ್ಯಾಧ್ಯಕ್ಷ ಡಾ.ಕೃಷ್ಣಮೂರ್ತಿ, ರಾಜ್ಯ ಎಸ್.ಸಿ.ಎಸ್.ಟಿ ನೌಕರರ ಸಂಘದ ಅಧ್ಯಕ್ಷ ಚಂದ್ರಹಾಸ, ಛಲವಾದಿ ಮಹಾಸಭಾ ಮಂಡ್ಯ ಜಿಲ್ಲಾಧ್ಯಕ್ಷ ಸುರೇಶ್, ಪುರಸಭಾ ಸದಸ್ಯ ಡಿ.ಪ್ರೇಮಕುಮಾರ್, ಛಲವಾದಿ ಮಹಾಸಭಾದ ಹಾಸನ-ಮಂಡ್ಯ ಉಸ್ತುವಾರಿ ಮಾಂಬಳ್ಳಿ ಜಯರಾಮ್, ಛಲವಾದಿ ಮಹಾಸಭಾ ತಾಲ್ಲೂಕು ಅಧ್ಯಕ್ಷ ಊಚನಹಳ್ಳಿ ನಟರಾಜ್, ಗೌರವಾಧ್ಯಕ್ಷ ಸೋಮಸುಂದರ್, ತಾಲ್ಲೂಕು ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ರಾಜಯ್ಯ, ಸಂಚಾಲಕ ಬಸ್ತಿ ರಂಗಪ್ಪ, ಸಿಪಿಐಎಂ ಜಿಲ್ಲಾ ಮುಖಂಡರಾದ ಸಿ.ಕುಮಾರಿ, ದಲಿತ ಸೇನೆ ಮಂಡ್ಯ ಜಿಲ್ಲಾಧ್ಯಕ್ಷ ಎನ್.ಜೆ.ಮಂಜು, ದಲಿತ ಸೇನೆ ಮಹಿಳಾ ಘಟಕದ ಮಂಡ್ಯ ಜಿಲ್ಲಾಧ್ಯಕ್ಷೆ ಕಮಲಾಕ್ಷಿನಾಗರಾಜು, ಜಿಲ್ಲಾ ಕಾರ್ಯದರ್ಶಿ ಲಕ್ಷ್ಮೀ ರಾಜು, ದಲಿತಪರ ಸಂಘಟನೆಗಳ ಮುಖಂಡರಾದ ಅಭಿಗೌಡ, ಎಂ.ವಿ.ರಾಜೇಗೌಡ, ಮಂದಗೆರೆ ಜಯರಾಂ, ಡಾ.ಎಸ್.ಕೃಷ್ಣಮೂರ್ತಿ, ನ್ಯಾಯವಾದಿ ಮೈತ್ರಿ, ಜಯರಾಜ್, ರಮಾನಂದ್, ಲಕ್ಷ್ಮೀ ನರಸಿಂಹ, ಎಂ.ವಿ.ಕೃಷ್ಣ, ಡಿ.ಎಸ್.ಎಸ್. ಸಂಚಾಲಕ ಅಂದಾನಿ, ಅಂಕಪ್ಪ, ಜಿಲ್ಲಾ ಸಂಘಟನಾ ಸಂಚಾಲಕ ಲಕ್ಷ್ಮೀಪುರ ರಂಗಸ್ವಾಮಿ, ರಾಜೇಶ್, ಬಂಡಿಹೊಳೆ ರಮೇಶ್, ಕೃಷ್ಣಮೂರ್ತಿ ಎಸ್.ಡಿ.ಪಿ.ಐ ಪಕ್ಷದ ತಾಲ್ಲೂಕು ಅಧ್ಯಕ್ಷ ಮುಜೀಬ್, ತಾಲ್ಲೂಕು ಡಿ.ಎಸ್.ಎಸ್. ಸಂಘಟನಾ ವೆಂಕಟಗಿರಿ, ಸಂಘಟನಾ ಸಂಚಾಲಕ ಕತ್ತರಘಟ್ಟ ರಾಜೇಶ್, ತೆಂಡೇಕೆರೆ ನಿಂಗಯ್ಯ, ಸಂತೋಷ್‌ಕುಮಾರ್, ಜೈನ್ನಹಳ್ಳಿ ಹರೀಶ್, ಹರಿಹರಪುರ ನರಸಿಂಹ, ಗಂಗಾಧರ್ ಸೇರಿದಂತೆ ವಿವಿಧ ಸಂಘಟನೆಗಳ ನೂರಾರು ಮುಖಂಡರು ಹಾಗೂ ಸಾವಿರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಮೈಸೂರು ಉರಿಲಿಂಗಿಪೆದ್ದಿಮಠ ಶ್ರೀ ಜ್ಞಾನಪ್ರಕಾಶಸ್ವಾಮೀಜಿ ಮಾತನಾಡಿ ದಲಿತ ಬಂಧುಗಳು ಸಂಘಟಿತರಾಗಿ ಚಳುವಳಿಗಳನ್ನು ಜೀವಂತವಾಗಿಟ್ಟುಕೊಂಡು ಹೋರಾಟ ನಡೆಸಿದರೆ ಕತ್ತರಘಟ್ಟದಲ್ಲಿ ನಡೆದಿರುವಂತಹ ಘಟನೆಗಳು ನಡೆಯುವುದಿಲ್ಲ. ಮುಂದಾದರೂ ಎಲ್ಲರೂ ಚಳುವಳಿಗಳನ್ನು ಜೀವಂತವಾಗಿಟ್ಟುಕೊಂಡು ಮುನ್ನಡೆಯಿರಿ ಎಂದು ಸಲಹೆ ನೀಡಿದರು. ಕತ್ತರಘಟ್ಟ ಗ್ರಾಮದಲ್ಲಿ ದಲಿತ ಯುವಕ ಜಯಕುಮಾರ್ ಜೀವಂತ ದಹನ ಪ್ರಕರಣದಲ್ಲಿ ತಪ್ಪಿತಸ್ಥ ಪೊಲೀಸರನ್ನು ಅಮಾನತ್ತು ಮಾಡಬೇಕು.

ಘಟನೆಯನ್ನು ಎಸ್.ಐ.ಟಿ ತನಿಖೆಗೆ ಒಳಪಡಿಸಿ ನಿಖರವಾದ ಕಾರಣ ಕಂಡು ಹಿಡಿದು ನ್ಯಾಯಯುತವಾಗಿ ಜಾರ್ಜ್ ಶೀಟ್ ಸಲ್ಲಿಸಬೇಕು ಎಂದು ಆಗ್ರಹಿಸಿದರು. ಪೊಲೀಸರು ಜನರ ರಕ್ಷಣೆಗೆ ಇದ್ದಾರೋ ಅಥವಾ ಅನಿಲ್‌ಕುಮಾರನಂತಹ ರೌಡಿಶೀಟರ್‌ಗಳಿಗೆ ರಕ್ಷಣೆಗೆ ಇದ್ದಾರೋ ಎಂಬುದು ತಿಳಿಯುತ್ತಿಲ್ಲ. ಘಟನೆಯಲ್ಲಿ ಲಕ್ಷ್ಮಿಯ ಸಿಂಧೂರ ಅಳಿಸಲು ಪೊಲೀಸರು ಕಾರಣರಾಗಿದ್ದೀರಿ, ಇದು ನಿಮ್ಮ ಪತ್ನಿಯ ಸಿಂಧೂರ ಅಳಿಸುವ ಶಾಪವಾಗಲಿದೆ ಎಂದು ಪೊಲೀಸರ ವಿರುದ್ದ ಕಿಡಿಕಾರಿದರು.

ಘಟನೆಯಲ್ಲಿ ಕರ್ತವ್ಯವೆಸಗಿರುವ ಡಿ.ವೈಎಸ್.ಪಿ ಸೇರಿದಂತೆ ಎಲ್ಲಾ ಹಂತದ ಅಧಿಕಾರಿಗಳನ್ನು ಕೂಡಲೇ ಅಮಾನತ್ತು ಮಾಡಿ ಪ್ರಾಮಾಣಿಕವಾದ ತನಿಖೆಯನ್ನು ಸರ್ಕಾರದ ಮಾಡಬೇಕು ಇಲ್ಲದಿದ್ದರೆ ಇಂದು ನಡೆದ ಚಳುವಳಿಯನ್ನು ರಾಜ್ಯ ಮಟ್ಟದಲ್ಲಿ ನಡೆಸಬೇಕಾಗುತ್ತದೆ ಎಂದು ಸ್ವಾಮೀಜಿ ಎಚ್ಚರಿಸಿದರು. ಕತ್ತರಘಟ್ಟದಲ್ಲಿ ಜೀವಂತ ದಹಿಸಿ, ಹತ್ಯೆಯಾಗಿರುವ ಜಯಕುಮಾರ್ ಕುಟುಂಬಕ್ಕೆ ಸರ್ಕಾರ 50ಲಕ್ಷ ಪರಿಹಾರ ನೀಡಬೇಕು. ಮೃತನ ಪತ್ನಿ ಲಕ್ಷ್ಮೀ ಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಶ್ರೀಗಳು ಒತ್ತಾಯ ಮಾಡಿದರು.

ಚಿತ್ರದುರ್ಗದ ಛಲವಾದಿ ಮಹಾಸಂಸ್ಥಾನ ಮಠದ ಶ್ರೀ ಬಸವನಾಗದೇವ ಸ್ವಾಮೀಜಿ ಮಾತನಾಡಿ ದಲಿತರು ಎಲ್ಲಾ ಸಮುದಾಯವನ್ನು ಪ್ರೀತಿಸುತ್ತೇವೆ. ಆದರೆ ನಮ್ಮ ತಂಟೆಗೆ ಬಂದರೆ ಯಾರೇ ಆಗಲಿ ತಕ್ಕ ಪಾಠ ಕಲಿಸದೇ ಬಿಡುವುದಿಲ್ಲ. ಕತ್ತರಘಟ್ಟ ಘಟನೆಯಲ್ಲಿ ನಮ್ಮ ದಲಿತ ಯುವಕ ಜಯಕುಮಾರ್, ಹತ್ಯೆಗೆ ಸೂಕ್ತ ನ್ಯಾಯ ಕೊಡೀಸಲು ಸರ್ಕಾರ ತಕ್ಷಣವೇ ಮುಂದಾಗಬೇಕು. ಇಲ್ಲದಿದ್ದರೆ ನಮ್ಮ ಛಲವಾದಿ ಮಹಾಸಂಸ್ಥಾನ ಮಠದ ನೇತೃತ್ವದಲ್ಲಿ ರಾಜ್ಯ ಮಟ್ಟದಲ್ಲಿ ಬೃಹತ್‌ ಹೋರಾಟ ರೂಪಿಸಬೇಕಾಗುತ್ತದೆ. ಛಲವಾದಿಗಳ ಮೈಯಲ್ಲಿ ಹಠ- ಛಲದ ರಕ್ತ ಹರಿಯುತ್ತಿದೆ. ನ್ಯಾಯಕ್ಕಾಗಿ ಛಲದಿಂದ ಹೋರಾಡುತ್ತೇವೆ ಎಂದು ಶ್ರೀಗಳು ಗುಡುಗಿದರು.

ಪ್ರತಿಭಟನೆಯ ನಂತರ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ ಅವರಿಗೆ ಹಾಗೂ ತಹಸೀಲ್ದಾರ್ ಡಾ.ಎಸ್.ಯು ಅಶೋಕ್ ಅವರಿಗೆ ಮನವಿ ಸಲ್ಲಿಸಿದರು.

ಜನಪದ ಗಾಯಕ ಉರುಗಲವಾಡಿ ರಾಮಯ್ಯ ಮತ್ತು ಪರಮೇಶ್ ಕ್ರಾಂತಿ ಗೀತೆಗಳನ್ನು ಹಾಡಿ ಚಳುವಳಿಗೆ ಚಾಲನೆ ನೀಡಿದರು.

– ಶ್ರೀನಿವಾಸ್‌ ಆರ್.

Leave a Reply

Your email address will not be published. Required fields are marked *

×How can I help you?