ಕೆ.ಆರ್.ಪೇಟೆ-ಡಾಲು ರವಿ ವಿರುದ್ದ ಶಾಸಕ ಹೆಚ್.ಟಿ.ಮಂಜು ವಾಗ್ದಾಳಿ”


ಕೆ.ಆರ್.ಪೇಟೆ,ಮೇ.26: ಇತ್ತೀಚೆಗೆ ಪಟ್ಟಣದ ಮನ್‌ಮುಲ್ ಶೀಥಲೀಕರಣ ಕೇಂದ್ರದ ಆವರಣದಲ್ಲಿ ಆಯೋಜಿಸಲಾಗಿದ್ದ ತಾಲ್ಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿಗಳ ಸಭೆಯಲ್ಲಿ ಮನ್‌ಮುಲ್ ನಿರ್ದೇಶಕ ಡಾಲು ರವಿ, ಶಾಸಕರ ಅಧ್ಯಕ್ಷತೆಯಲ್ಲಿ ನಡೆಯುವ ಸ್ಥಳೀಯ ಗ್ರಾಮ ಪಂಚಾಯತಿಗಳ ಪ್ರಗತಿ ಪರಿಶೀಲನಾ ಸಭೆಗಳಿಗೆ(ಕೆ.ಡಿ.ಪಿ) ಡೇರಿ ಕಾರ್ಯದರ್ಶಿಗಳು ಭಾಗವಹಿಸದಂತೆ ಸೂಚಿಸಿದ್ದಾರೆ.

ಅಲ್ಲದೆ ಕ್ಷೇತ್ರದ ಶಾಸಕನಾದ ತಮ್ಮನ್ನು ಏಕವಚನಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾತನಾಡಿದ್ದಾರೆ. ಇದು ಖಂಡನೀಯವಾದುದು ನಮಗೂ ಏಕವಚನ ಬಳಕೆ ಮಾಡಲು ಬರುತ್ತದೆ. ನಮಗೂ ಧಮಕಿ ಹಾಕಲು ಬರುತ್ತದೆ ಆದರೆ ಸಾರ್ವಜನಿಕ ಜೀವನದಲ್ಲಿ ಮತದಾರರು ನೀಡಿರುವ ಜವಾಬ್ದಾರಿಯ ಇತಿಮಿತಿಯಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದೇನೆ ಆದರೂ ಡಾಲು ರವಿ ಏಕವಚನದಲ್ಲಿ ಮಾತನಾಡುವುದು ಯಾವ ಕಾರಣಕ್ಕಾಗಿ ಎಂಬುದನ್ನು ಬಹಿರಂಗವಾಗಿ ಸಾರ್ವಜನಿಕರಿಗೆ ತಿಳಿಸಬೇಕು ಇದಕ್ಕಾಗಿ ಒಂದು ದಿನಾಂಕ ನಿಗಧಿಪಡಿಸಿದರೆ ಯಾವುದೇ ಬಹಿರಂಗ ಸಭೆಯಲ್ಲಿ ಚರ್ಚಿಗೂ ಸಿದ್ದವಿರುವುದಾಗಿ ಶಾಸಕ ಹೆಚ್.ಟಿ.ಮಂಜು ತಿಳಿಸಿದರು.‌

ಪಟ್ಟಣದ ಬಸವೇಶ್ವರನಗರದಲ್ಲಿರುವ ಶಾಸಕರ ಗೃಹ ಕಚೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಹೆಚ್.ಟಿ.ಮಂಜು ಅವರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುವ ಕೆಡಿಪಿ ಸಭೆಗೆ ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿಗಳಿಂದ ಹಿಡಿದು ಸ್ಥಳೀಯ ನ್ಯಾಯಬೆಲೆ ಅಂಗಡಿಗಳು, ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳು ಸೇರಿದಂತೆ ಎಲ್ಲಾ ಇಲಾಖೆಗಳು ಗ್ರಾಮ ಪಂಚಾಯತಿಗಳ ಕೆಡಿಪಿ ಸಭೆಗಳಲ್ಲಿ ಭಾಗವಹಿಸುವುದು ಕಡ್ಡಾಯವಾಗಿದೆ.

ಇದಕ್ಕಾಗಿ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದ್ದು ಅದರಂತೆ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳೂ ಕೆಡಿಪಿ ಸಭೆಯಲ್ಲಿ ಭಾಗವಹಿಸಲೇಬೇಕು. ಹಾಲು ಉತ್ಪಾದಕರ ಸಹಕಾರ ಸಂಘಗಳು ಯಾವುದೇ ವ್ಯಕ್ತಿ ನಿರ್ಮಿತವಲ್ಲ. ಬದಲಾಗಿ ಅವು ಸಹಕಾರ ಇಲಾಖೆಯ ಸಹಕಾರಿ ತತ್ವದ ನಿಯಮದಡಿ ರಚನೆಯಾಗಿದ್ದು ರಾಜ್ಯ ಸರ್ಕಾರದ ಸಹಕಾರ ಇಲಾಖೆಯ ಕಾರ್ಯ ವ್ಯಾಪ್ತಿಗೆ ಸೇರಿವೆ. ಕ್ಷೇತ್ರದ ಶಾಸಕರಾದವರು ಸರ್ಕಾರದ ಒಂದು ಭಾಗವಾಗಿದ್ದಾರೆ ಎನ್ನುವ ಅರಿವು ಡಾಲು ರವಿ ಇದ್ದಂತೆ ಕಾಣುತ್ತಿಲ್ಲ. ಸಹಕಾರಿ ನಿಯಮಗಳ ಅರಿವಿಲ್ಲದ ವ್ಯಕ್ತಿಯೊಬ್ಬ ತಾಲೂಕು ವ್ಯಾಪ್ತಿಯಲ್ಲಿ ಪಾಳೇಗಾರಿಕೆಯ ನಡವಳಿಕೆ ಪ್ರದರ್ಶಿಸುತ್ತಿದ್ದು ಡಾಲು ರವಿಯ ಗೊಡ್ಡು ಬೆದರಿಕೆಗಳಿಗೆ ನಾನು ಬೆದರುವವನಲ್ಲ ಎಂದು ಡಾಲು ರವಿ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದರು.

ಹಾಲು ಉತ್ಪಾದಕರ ಸಹಕಾರ ಸಂಘಗಳ ಸಭೆಗೆ ಕ್ಷೇತ್ರದ ಶಾಸಕರನ್ನು ಆಹ್ವಾನಿಸುವುದು ಸಹಜ. ಶಾಸಕರನ್ನು ಆಹ್ವಾನಿಸಿದರೆ ಅಂತಹ ಸಹಕಾರ ಸಂಘಗಳಿಗೆ ಮನ್‌ಮುಲ್ ವತಿಯಿಂದ ಯಾವುದೇ ಅನುದಾನ ನೀಡುವುದಿಲ್ಲ ಎಂದು ಡಾಲು ರವಿ ಕಾರ್ಯದರ್ಶಿಗಳಿಗೆ ಬೆದರಿಕೆ ಹಾಕುತ್ತಿದ್ದಾರೆ. ಶಾಸಕರನ್ನು ಆಹ್ವಾನಿಸದೇ ಹಕ್ಕು ಚ್ಯುತಿ ಮಾಡಿದ ತಾಲೂಕಿನ ಹರಿರಾಯನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನಡೆಗೆ ಜಿಲ್ಲಾಧಿಕಾರಿಗಳು ಈಗಾಗಲೇ ಸಹಕಾರ ಇಲಾಖೆಗೆ ನೋಟೀಸ್ ನೀಡಿದ್ದಾರೆ. ಡಾಲು ರವಿಯಂತೆಯೇ ಪಾಳೇಗಾರಿಕೆ ಭಾಷೆಯಲ್ಲಿ ಮಾತನಾಡುವುದು ನನಗೂ ಬರುತ್ತದೆ. ಆದರೆ ಕ್ಷೇತ್ರದ ಶಾಸಕನಾಗಿ ನಾನು ಜನರ ಗೌರವಕ್ಕೆ ಧಕ್ಕೆಯಾಗದಂತೆ ನಡೆಯಬೇಕಾಗಿದೆ. ನಾನು ಸಮಾಜಕ್ಕೆ ಅಂಜಿ ನಡೆಯುವವನು. ಶಿಸ್ತು ಮತ್ತು ಕಾರ್ಯ ಬದ್ದತೆ ಹೊಂದಿದ್ದೇನೆ.

ಡಾಲು ರವಿ ಕಾರ್ಯದರ್ಶಿಗಳ ಸಭೆಯಲ್ಲಿ ಡೈರಿಗಳ ಹಾಲು ಉತ್ಪಾದನೆಯನ್ನು ಹೆಚ್ಚಿಸುವುದು ಹೇಗೆ? ರೈತರಿಗೆ ಸಕಾಲದಲ್ಲಿ ಹಣ ಪಾವತಿಯಾಗುತ್ತಿದೆಯೇ? ಗುಣಮಟ್ಟದ ಪರೀಕ್ಷೆಯಲ್ಲಿ ಕೆಲವು ಸಂಘಗಳು ಪೂರೈಕೆ ಮಾಡುತ್ತಿರುವ ಹಾಲು ಪದೇ ಪದೇ ಫೇಲ್ ಆಗುತ್ತಿರುವುದೇಕೆ? ಮುಂತಾದ ಅಭಿವೃದ್ದಿ ಪರ ಚಿಂತನೆ ಮಾಡಲಿ. ಸರ್ಕಾರದ ನಿಯಮಾನುಸಾರ ನಾನು ತಾಲೂಕಿನ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕೆಡಿಪಿ ಸಭೆ ಆಯೋಜಿಸಿ ಗ್ರಾಮ ಪಂಚಾಯತಿ ಆಡಳಿತವನ್ನು ಬಲಗೊಳಿಸಿ ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಪ್ರಯತ್ನ ಮಾಡುತ್ತಿದ್ದೇನೆ.

ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಸದಸ್ಯರು ತಮಗೆ ಇರುವ ಅಧಿಕಾರ ಬಳಕೆ ಮಾಡಿ ಅಧಿಕಾರಿಗಳಿಂದ ಕೆಲಸ ಮಾಡಿಸುವಂತೆ ಸಜ್ಜುಗೊಳಿಸುವ ಕೆಲಸ ಮಾಡುತ್ತಿದ್ದೇನೆ. ಡಾಲು ರವಿ ತನ್ನ ನಾಲಿಗೆಯನ್ನು ಹಿಡಿತದಲ್ಲಿಟ್ಟುಕೊಂಡು ಡೈರಿಗಳ ಪ್ರಗತಿಗೆ ಚಿಂತಿಸಲಿ. ಶಾಸಕರನ್ನು ಬಹಿರಂಗವಾಗಿ ನಿಂದಿಸಿದರೆ ನಾನು ದೊಡ್ಡವನಾಗುತ್ತೇನೆ ಎನ್ನುವ ಭ್ರಮೆಯಿಂದ ಹೊರಗೆ ಬರಲಿ. ಇಲ್ಲದಿದ್ದರೆ ಅವರಂತೆಯೇ ನನ್ನ ಭಾಷೆಯನ್ನು ಬದಲಿಸಿಕೊಂಡು ಏಕವಚನ ಪದ ಪ್ರಯೋಗ ಮಾಡಿ ಉತ್ತರಿಸಬೇಕಾಗುತ್ತದೆ ಎಂದು ಶಾಸಕ ಹೆಚ್.ಟಿ.ಮಂಜು ಡಾಲು ರವಿಗೆ ಎಚ್ಚರಿಸಿದರು.

ಗೋಷ್ಠಿಯಲ್ಲಿ ಜಿಲ್ಲಾ ದಿಶಾ ಸಮಿತಿ ಸದಸ್ಯ ನರಸನಾಯಕ್, ರಾಜ್ಯ ಯುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಕುರುಬರಹಳ್ಳಿ ನಾಗೇಶ್, ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯರಾದ ಬೂಕನಕೆರೆ ಹೆಳವೇಗೌಡ(ಹುಲ್ಲೇಗೌಡ), ಮಲ್ಲೇನಹಳ್ಳಿ ಮೋಹನ್, ಚಿಕ್ಕಗಾಡಿಗನಹಳ್ಳಿ ಸೋಮಶೇಖರ್, ಹೊಸಹೊಳಲು ರಾಜು, ಟಿ.ಎ.ಪಿ.ಸಿ.ಎಂ.ಎಸ್ ನಿರ್ದೇಶಕ ಟಿ.ಬಲದೇವ್, ಬೋರ್‌ವೆಲ್ ಮಹೇಶ್, ವಡ್ಡರಹಳ್ಳಿ ಮಹಾದೇವೇಗೌಡ, ಜೆಡಿಎಸ್ ವಿವಿಧ ಹೋಬಳಿ ಘಟಕದ ಅಧ್ಯಕ್ಷರುಗಳಾದ ಮಾಕವಳ್ಳಿ ವಸಂತಕುಮಾರ್, ಸಂತೇಬಾಚಹಳ್ಳಿ ರವಿಕುಮಾರ್, ಅಘಲಯ ಅಜಯ್ ರಾಮೇಗೌಡ, ಬೋರ್‌ವೆಲ್ ಮಹೇಶ್, ಹರೀನಹಳ್ಳಿ ರಘು, ಚಿಕ್ಕೋಸಹಳ್ಳಿ ನಾಗೇಶ್, ಅಗ್ರಹಾರಬಾಚಹಳ್ಳಿ ಬಿ.ಆರ್.ರಮೇಶ್, ಚನ್ನೇಗೌಡ, ಗ್ರಾ.ಪಂ.ಅಧ್ಯಕ್ಷ ಮುದುಗೆರೆ ಪರಮೇಶ್, ಸಿಂಧಘಟ್ಟ ಎಸ್.ಐ.ಗಿರೀಶ್, ಗಂಜಿಗೆರೆ ರಾಮಕೃಷ್ಣೇಗೌಡ, ಭೈರಾಪುರ ಹರೀಶ್, ಬೇಲದಕೆರೆ ಮರೀಗೌಡ, ಕೃಷ್ಣೇಗೌಡ, ಹಿರೀಕಳಲೆ ಗಣೇಶ್ ಸೇರಿದಂತೆ ಹಲವಾರು ಜೆಡಿಎಸ್ ಮುಖಂಡರು ಉಪಸ್ಥಿತರಿದ್ದರು.

– ಶ್ರೀನಿವಾಸ್‌ ಆರ್.

Leave a Reply

Your email address will not be published. Required fields are marked *