ಕೆ.ಆರ್.ಪೇಟೆ: ವ್ಯಕ್ತಿತ್ವ ವಿಕಸನಗೊಳಿಸಲು ಸಂಸ್ಕಾರ ಜ್ಞಾನ ಶಿಬಿರಗಳು ವರದಾನ-ಮನ್ ಮುಲ್ ನಿರ್ದೇಶಕ ಡಾಲು ರವಿ

ಕೆ.ಆರ್.ಪೇಟೆ: ವಿದ್ಯಾರ್ಥಿಗಳಲ್ಲಿ ಜ್ಞಾನವನ್ನು ತುಂಬಿ ಸಮಗ್ರವಾದ ವ್ಯಕ್ತಿತ್ವ ವಿಕಸನಗೊಳಿಸಲು ಸಂಸ್ಕಾರ ಜ್ಞಾನ ಶಿಬಿರಗಳು ವರದಾನವಾಗಿವೆ ಎಂದು ಮನ್ ಮುಲ್ ನಿರ್ದೇಶಕ ಡಾಲು ರವಿ ಅವರು ಹೇಳಿದರು.

ಅವರು ಕೆ.ಆರ್.ಪೇಟೆ ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಬೆಡದಹಳ್ಳಿಯ ಶ್ರೀ ಪಂಚಭೂತೇಶ್ವರ ಶ್ರೀ ಮಠದ ವತಿಯಿಂದ ಹಮ್ಮಿಕೊಳ್ಳಲಾಗಿರುವ 15 ದಿನಗಳ ಸಂಸ್ಕಾರ ಜ್ಞಾನ ಶಿಬಿರವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ಇಂದಿನ ಮಕ್ಕಳೇ ನಾಳಿನ ಭವ್ಯ ಭಾರತದ ನಾಗರಿಕರಾದ್ದರಿಂದ ಮಕ್ಕಳಿಗೆ ಉತ್ತಮವಾದ ಸಂಸ್ಕಾರ, ಸೇವಾ ಮನೋಭಾವನೆ ಹಾಗೂ ಮಾನವೀಯ ಮೌಲ್ಯಗಳನ್ನು ಬಾಲ್ಯದಿಂದಲೇ ನೀಡಿ ಮಕ್ಕಳನ್ನು ಮೊಬೈಲ್ ಫೋನ್ ಪ್ರಪಂಚದಿಂದ ಹೊರಕ್ಕೆ ಕರೆತರುವುದು ಇಂದಿನ ಅಗತ್ಯವಾಗಿರುವುದರಿಂದ ಮಕ್ಕಳಿಗೆ ಯೋಗ, ಧ್ಯಾನ, ಸಂಸ್ಕೃತ ನೀತಿ ಭೋದನೆ, ವಚನಗಳ ಮಹತ್ವ, ರಾಮಾಯಣ ಮಹಾಭಾರತ ಗ್ರಂಥಗಳ ಸಾರವನ್ನು ತಿಳಿಸುವುದು ಸೇರಿದಂತೆ ಶಾಲಾ ಕಲಿಕೆಗಳಿಗಿಂತ ವಿಭಿನ್ನವಾದ ಸಮಾಜಮುಖಿ ಚಟುವಟಿಕೆಗಳಲ್ಲಿ ಮಕ್ಕಳು ಭಾಗವಹಿಸುವಂತೆ ಮಾಡಿ ಮಕ್ಕಳ ಸಮಗ್ರವಾದ ವ್ಯಕ್ತಿತ್ವ ರೂಪಿಸಿ, ಮಕ್ಕಳ ಆಸಕ್ತಿ ಹಾಗೂ ಕಲಿಕೆಗೆ ಪೂರಕವಾಗಿ ಮಾರ್ಗದರ್ಶನ ನೀಡಿ ಮುನ್ನಡೆಸುತ್ತಿರುವ ಸಂಸ್ಕಾರ ಶಿಬಿರಗಳು ಇಂದಿನ ದಿನಮಾನದಲ್ಲಿ ಮಕ್ಕಳಿಗೆ ಅಗತ್ಯವಾಗಿ ಬೇಕಾಗಿದೆ ಎಂದು ತಿಳಿಸಿದ ಡಾಲು ರವಿ, ನಾಗರೀಕ ಸಮಾಜದಲ್ಲಿ ನಮ್ಮನ್ನು ತಿದ್ದಿ, ಮಾರ್ಗದರ್ಶನ ಮಾಡಬೇಕಾದ ಮಠ ಮಾನ್ಯಗಳು ಇಂದು ಹಣ ಆಸ್ಥಿ ಮಾಡಲು ಪೈಪೋಟಿ ನಡೆಸುತ್ತಿರುವುದನ್ನು ನೋಡಿದರೆ ನಮ್ಮ ಸಮಾಜ ಎತ್ತ ಸಾಗಿದೆ ಎಂದು ಆಲೋಚಿಸಬೇಕಾಗಿದೆ.

ನೈತಿಕವಾಗಿ ಅಧಪತನದತ್ತ ಸಾಗುತ್ತಿರುವ ಸಮಾಜವನ್ನು ಸರಿದಾರಿಗೆ ತರಲು ಯುವಜನರು ಹೆಜ್ಜೆ ಹಾಕುವುದು ಅನಿವಾರ್ಯವಾಗಿದೆ ಎಂದು ಡಾಲು ರವಿ ಅಭಿಪ್ರಾಯಪಟ್ಟರು. ಅಲ್ಲದೇ ಶಿಬಿರದಲ್ಲಿ ಭಾಗವಹಿಸಿರುವ ಮಕ್ಕಳಿಗೆ ಶಿಬಿರದ ಕಿಟ್ ಹಾಗೂ ಪುಸ್ತಕವನ್ನು ವಿತರಿಸಿ ಮಕ್ಕಳಿಗೆ ವಿಶೇಷವಾಗಿ ಸಂಸ್ಕಾರ ನೀಡಲು ರೂಪಿಸಿರುವ ಶಿಬಿರವು ಯಶಸ್ವಿಯಾಗಿ ನಡೆಯಲಿ. ಮಕ್ಕಳು ತಂದೆ ತಾಯಿಗಳು ಹಾಗೂ ಗುರುಹಿರಿಯರನ್ನು ಗೌರವಿಸುವ ಆದರ್ಶ ಗುಣಗಳನ್ನು ಮೈಗೂಡಿಸಿಕೊಂಡು ಸೇವೆ ಎಂಬ ಪದಕ್ಕೆ ಸಾರ್ಥಕತೆಯನ್ನು ತಂದುಕೊಡಬೇಕು ಎಂದು ಕಿವಿಮಾತು ಹೇಳಿದರು.

ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ವಿ.ಮಂಜೇಗೌಡ ಮಾತನಾಡಿ, ಬೇಸಿಗೆ ಶಿಬಿರಗಳು ಮಕ್ಕಳ ವ್ಯಕ್ತಿತ್ವ ವಿಕಸನ ಹಾಗೂ ಜ್ಞಾನ ವಿಕಾಸಕ್ಕೆ ಅವಕಾಶ ಮಾಡಿಕೊಡುತ್ತವೆ ಹಾಗಾಗಿ ಬೇಸಿಗೆ ಶಿಬಿರಗಳು ಮಕ್ಕಳಿಗೆ ಹೆಚ್ಚು ಸಹಕಾರಿಯಾಗುತ್ತವೆ ಹಾಗಾಗಿ ಪೋಷಕರು ಬೇಸಿಗೆ ರಜೆಯಲ್ಲಿ ಮಕ್ಕಳನ್ನು ಮೊಬೈಲ್ ಗೀಳಿನಿಂದ ದೂರ ಮಾಡಲು ಬೇಸಿಗೆ ಶಿಬಿರಗಳಿಗೆ ಸೇರಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಬೆಡದಹಳ್ಳಿ ಪಂಚಭೂತೇಶ್ವರ ಮಠದ ಪೀಠಾಧಿಪತಿಗಳಾದ ಶ್ರೀ ರುದ್ರಮುನಿ ಸ್ವಾಮೀಜಿ ಮಾತನಾಡಿ, ಮಕ್ಕಳ ಕಲಿಕೆ ಹಾಗೂ ಆಸಕ್ತಿಗೆ ಪೂರಕವಾಗಿ ಮಕ್ಕಳಿಗೆ ಸಂಪನ್ಮೂಲ ವ್ಯಕ್ತಿಗಳಿಂದ ಜ್ಞಾನ ಭೋದನೆ ಮಾಡಿಸುವ ಕೆಲಸವನ್ನು ಹಮ್ಮಿಕೊಂಡಿದ್ದೇವೆ. ಕಲಿಕೆಗೆ ಕೊನೆಯಿಲ್ಲವಾದ್ದರಿಂದ ಮಕ್ಕಳ ನಿರಂತರ ಕಲಿಕೆಗೆ ಬೇಕಾದ ಸಂಸ್ಕಾರದ ಜ್ಞಾನ ನೀಡಲು ವೇದಿಕೆ ಸಿದ್ದವಾಗಿದೆ. 15 ದಿನಗಳ ಕಾಲ ಮಕ್ಕಳು ನಮ್ಮ ಮಠದಲ್ಲಿಯೇ ವಾಸ್ತವ್ಯ ಹೂಡಿ ಸಂಸ್ಕಾರ ಶಿಭಿರದಲ್ಲಿ ಜ್ಞಾನದ ಸುಧೆಯನ್ನು ಸವಿಯಲಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಬೆಡದಹಳ್ಳಿ ಮಠದ ಟ್ರಸ್ಟ್ ಕಾರ್ಯದರ್ಶಿ ಕಾಂತರಾಜು, ಭಾರತ ಸೇವಾದಳದ ಜಿಲ್ಲಾ ಸಂಘಟಕ ಗಣೇಶ್, ಮಹಿಳಾ ಹೋರಾಟಗಾರ್ತಿ ಗೋವಿಂದನಹಳ್ಳಿಯ ಮಣಿ, ಮೈಸೂರಿನ ವಿಜಯಣ್ಣ, ಪುರಸಭೆ ಮಾಜಿ ಸದಸ್ಯ ಕೆ. ಆರ್.ನೀಲಕಂಠ ಕಾರ್ಯಕ್ರಮದಲ್ಲಿ ಮಾತನಾಡಿದರು.


ಈ ವೇಳೆ ಯೋಗಗುರು ಅಲ್ಲಮಪ್ರಭು, ಸಂಸ್ಕೃತ ವಿದ್ವಾಂಸರಾದ ಕಿರಣ್, ಸ್ಫೂರ್ತಿ, ಮುಖ್ಯ ಶಿಕ್ಷಕ ಅಣ್ಣೀಗೌಡ, ಕೆ.ಆರ್.ಪೇಟೆ ರವಿ ಮತ್ತಿತರರು ಉಪಸ್ಥಿತರಿದ್ದರು.

  • ಶ್ರೀನಿವಾಸ ಆರ್.

Leave a Reply

Your email address will not be published. Required fields are marked *

× How can I help you?