ಕೆ.ಆರ್.ಪೇಟೆ:: ಧರ್ಮದ ಮಾರ್ಗದಿಂದ ಮಾತ್ರ ಮನಸ್ಸಿಗೆ ಶಾಂತಿ ನೆಮ್ಮದಿ ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ. ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ಅವರು ಕೆ.ಆರ್.ಪೇಟೆ ತಾಲೂಕಿನ ರಾಜೇನಹಳ್ಳಿ ಗ್ರಾಮದಲ್ಲಿ ಗ್ರಾಮಸ್ಥರು ದಾನಿಗಳು ಹಾಗೂ ಸಾರ್ವಜನಿಕರ ಸಹಕಾರದಿಂದ ನಿರ್ಮಿಸಿರುವ ಶ್ರೀ ಕಾಲ ಭೈರವೇಶ್ವರ ದೇವಾಲಯವನ್ನು ಲೋಕಾರ್ಪಣೆಗೊಳಿಸಿ ನೆರೆದಿದ್ದ ಭಕ್ತ ವೃಂದವನ್ನು ಉದ್ದೇಶಿಸಿ ಮಾತನಾಡಿದರು.
ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೂಜ್ಯ ಸ್ವಾಮೀಜಿಗಳಾದ ಜಗದ್ಗುರು ಡಾ.ನಿರ್ಮಲಾನಂದನಾಥ ಸ್ವಾಮೀಜಿಗಳು ದೇವಾಲಯದ ಗೋಪುರದ ಕಳಸಾರೋಹಣ ನೆರವೇರಿಸಿ ಶ್ರೀ ಭೈರವೇಶ್ವರ ಸ್ವಾಮಿಯ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಚನ ನೀಡಿ ಮಾತನಾಡಿ ಇಂದಿನ ಒತ್ತಡದ ಜೀವನದಲ್ಲಿ ದೇವರು ಮತ್ತು ಧರ್ಮದ ಮಾರ್ಗದಲ್ಲಿ ಸಾಗುವುದರಿಂದ ಮಾತ್ರ ಮನಸ್ಸಿಗೆ ಶಾಂತಿ ನೆಮ್ಮದಿಯನ್ನು ಪಡೆಯಬಹುದಲ್ಲದೆ ಕೈಹಿಡಿದ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಕೂಡಾ ಹೊಂದ ಬಹುದಾಗಿದೆ. ಆದ್ದರಿಂದ ಸಾಧನೆ ಮಾಡಲು ಕಷ್ಟವಾದರೂ ನ್ಯಾಯ, ನೀತಿ, ಧರ್ಮ ಹಾಗೂ ಸತ್ಯದ ಮಾರ್ಗದಲ್ಲಿಯೇ ಸಾಗಿ ಜನೋಪಯೋಗಿ ಕೆಲಸ ಕಾರ್ಯಗಳನ್ನು ಮಾಡುವ ಮೂಲಕ ಭಗವಂತನ ಒಲುಮೆಗೆ ಪಾತ್ರರಾಗಬೇಕು ಎಂದು ಕಿವಿ ಮಾತು ಹೇಳಿದ ಶ್ರೀಗಳು ಹಿಂದೂ, ಮುಸ್ಲಿಂ, ಕ್ರೈಸ್ತ ಧರ್ಮ ಸೇರಿದಂತೆ ಯಾವುದೇ ಧರ್ಮವು ನೀನು ಮೋಸ ಮಾಡು ಮತ್ತೊಬ್ಬನಿಗೆ ಕೇಡು ಬಗೆದು, ತೊಂದರೆ ನೀಡಿ ಸಂತೋಷಪಡು ಎಂದು ಹೇಳುವುದಿಲ್ಲ.

ಹಸಿದವರಿಗೆ ಬೇಕಾಗಿರುವುದು ಅನ್ನವೇ ಹೊರತು ಚಿನ್ನವಲ್ಲ, ಮಾನವ ಧರ್ಮಕ್ಕಿಂತ ಮಿಗಿಲಾದ ಧರ್ಮವು ವಿಶ್ವದಲ್ಲಿಯೇ ಯಾವುದೂ ಇಲ್ಲಾ. ಒಳ್ಳೆಯ ಕೆಲಸ ಮಾಡುವ ಜನರನ್ನು ಈ ಸಮಾಜವು ಎಂದಿಗೂ ಬೆಂಬಲಿಸಿ ಉತ್ತೇಜಸಿ ಪ್ರೋತ್ಸಾಹ ನೀಡುವುದಿಲ್ಲ. ಆದ್ದರಿಂದ ನಮ್ಮ ಮನಸ್ಸು ಹಾಗೂ ಆತ್ಮಸಾಕ್ಷಿಯು ಒಪ್ಪುವ ಜನಪರವಾದ ಕೆಲಸಗಳನ್ನು ಮಾಡುತ್ತಾ ಫಲಾಫಲವನ್ನು ಭಗವಂತನಿಗೆ ಬಿಡೋಣ ಎಂದು ತಿಳಿಸಿದ ನಿರ್ಮಲಾನಂದನಾಥ ಶ್ರೀಗಳು ರಾಜೇನಹಳ್ಳಿ ಗ್ರಾಮದಲ್ಲಿ ಕಾಲ ಭೈರವನಿಗೆ ಭವ್ಯವಾದ ದೇವಾಲಯವನ್ನು ನಿರ್ಮಿಸಿ ನಮ್ಮ ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಿ ಬೆಳೆಸುವ ಕೆಲಸವನ್ನು ಗ್ರಾಮಸ್ಥರು ಉಧ್ಯಮಿ ರೇವಣ್ಣ ಅವರ ನೇತೃತ್ವದಲ್ಲಿ ಮಾಡಿದ್ದಾರೆ. ಒಳ್ಳೆಯ ಕೆಲಸ ಮಾಡಲು ಹೊರಟಾಗ ನಿಂಧನೆ, ಅಪಪ್ರಚಾರ ಇದ್ದೇ ಇರುತ್ತದೆ ಅದಕ್ಕೆಲ್ಲಾ ರೇವಣ್ಣ ಅವರು ತಲೆ ಕೆಡಿಸಿಕೊಳ್ಳದೇ ಹೆಜ್ಜೆ ಹಾಕಬೇಕು. ಸರ್ವ ಸಂಘ ಪರಿ ತ್ಯಾಗಿಗಳಾದ ಸ್ವಾಮೀಜಿಗಳಾದ ನಮ್ಮನೇ ಸಮಾಜ ಬಿಟ್ಟಿಲ್ಲ, ನಮ್ಮನ್ನೇ ಬಯ್ತಾರೆ ಇನ್ನು ನಿಮ್ಮದು ಯಾವ ಲೆಕ್ಕ ಎಂದು ಹೇಳಿದ ಸ್ವಾಮೀಜಿ ರಾಜೇನಹಳ್ಳಿ ಗ್ರಾಮದ ಜನತೆಯ ಒಗ್ಗಟ್ಟನ್ನು ಶ್ಲಾಘಿಸಿ ಅಭಿನಂದಿಸಿದರು.

ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಮಾತನಾಡಿ, ಮಾನವನ ಅತಿಯಾದ ಆಸೆ ಹಾಗೂ ಸ್ವಾರ್ಥ ಸಾಧನೆಯಿಂದಾಗಿ ಸಮಾಜವು ನೈತಿಕವಾಗಿ ಅಧ:ಪತನದತ್ತ ಸಾಗುತ್ತಿದೆ. ಇಂದು ಕಾಂಗ್ರೆಸ್, ಬಿಜೆಪಿ ಜೆಡಿಎಸ್ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳು ಸ್ವಾರ್ಥ ಸಾಧನೆ ಮಾಡುತ್ತಾ ಭ್ರಷ್ಟಾಚಾರಿಗಳನ್ನು ಪ್ರೋತ್ಸಾಹಿಸಿ ಆಯಕಟ್ಟಿನ ಜವಾಬ್ದಾರಿ ಸ್ಥಾನಗಳನ್ನು ನೀಡಿ ಮತ್ತಷ್ಟು ಭ್ರಷ್ಟಾಚಾರ ನಡೆಸಲು ಪ್ರೇರೇಪಣೆ ನೀಡುತ್ತಿವೆ. ನಾಗರೀಕ ಸಮಾಜವು ನೈತಿಕವಾಗಿ ಅಧ:ಪತನದತ್ತ ಸಾಗುತ್ತಿದೆ.

ಈ ಹಿಂದೆ ಕಳ್ಳತನ, ಮೋಸ ಹಾಗೂ ವಂಚನೆ ಮಾಡಿ ಜೈಲಿಗೆ ಹೋಗಿ ಬಂದವರನ್ನು ಶ್ರೀ ಸಾಮಾನ್ಯರು ಮಾತನಾಡಿಸಲು ಹೆದರುತ್ತಿದ್ದರು, ಆದರೆ ಇಂದಿನ ಸಮಾಜದಲ್ಲಿ ಎಲ್ಲವೂ ತಳಕು ಪಳಕಾಗಿದೆ. ವಾಮ ಮಾರ್ಗದಲ್ಲಿ ಹಾಗೂ ಭ್ರಷ್ಟಾಚಾರ ಮಾಡಿ ಕೋಟಿಗಟ್ಟಲೆ ಹಣ ಮಾಡಿರುವವರಿಗೆ ಜನರು ಜೈಕಾರ ಹಾಕುತ್ತಿದ್ದಾರೆ. ಸಮಾಜದಲ್ಲಿ ನೈತಿಕ ಪ್ರಜ್ಞೆ ಹಾಗೂ ಪ್ರಾಮಾಣಿಕತೆ ಮಾಯವಾಗಿದೆ. ಹಾದಿ ತಪ್ಪುತ್ತಿರುವ ಯುವ ಜನಾಂಗವನ್ನು ಸರಿಯಾದ ಮಾರ್ಗದಲ್ಲಿ ಕೊಂಡೊಯ್ದು ಸಶಕ್ತ ಸದೃಢ ಸಮಾಜವನ್ನು ಕಟ್ಟುವುದು ಇಂದಿನ ಅಗತ್ಯವಾಗಿದೆ. ಈ ದಿಕ್ಕಿನಲ್ಲಿ ಯುವಜನರಿಗೆ ಮಾರ್ಗದರ್ಶನ ಮಾಡಿ ಮುನ್ನಡೆಸುವ ದಿಕ್ಕಿನಲ್ಲಿ ಜಗದ್ಗುರುಗಳು ಮಾರ್ಗದರ್ಶನ ಮಾಡಬೇಕು ಎಂದರು.
ಶಾಸಕ ಹೆಚ್.ಟಿ.ಮಂಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಗ್ರಾಮಸ್ಥರ ಸಂಸ್ಕೃತಿ ಪ್ರೇಮ ಹಾಗೂ ಗ್ರಾಮಾಭಿವೃದ್ಧಿಯ ಬಗೆಗಿನ ಕಾಳಜಿಯನ್ನು ಕೊಂಡಾಡಿದರು.
ಮೈಸೂರಿನ ಆದಿಚುಂಚನಗಿರಿ ಶಾಖಾ ಮಠದ ಶ್ರೀಸೌಮ್ಯ ನಾಥ ಸ್ವಾಮೀಜಿ, ಮಂಡ್ಯದ ಕೊಮ್ಮೆರಹಳ್ಳಿಯ ವಿಶ್ವ ಮಾನವ ಕ್ಷೇತ್ರದ ಶ್ರೀ ಪುರುಷೋತ್ತಮಾನಂದನಾಥ ಸ್ವಾಮೀಜಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು.

ಮಾಜಿ ಶಾಸಕ ಬಿ.ಪ್ರಕಾಶ್, ರಾಜ್ಯ ಆರ್.ಟಿ.ಓ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್ , ಉಧ್ಯಮಿ ಬೂಕಹಳ್ಳಿ ಮಂಜು, ರಾಜ್ಯ ವಿಶ್ರಾಂತ ಪೊಲೀಸ್ ಅಧಿಕಾರಿ ಎಸಿಪಿ ಕೆ.ಎನ್.ರಮೇಶ್, ಗಂಜಿಗೆರೆ ಗ್ರಾಮ ಪಂಚಾಯತ್ ಅಧ್ಯಕ್ಷ ಮುದುಗೆರೆ ಪರಮೇಶ್, ಪಿಡಿಓ ಗೀತಾ, ರಾಷ್ಟ್ರೀಯ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಡಾ. ಅಂಚಿ ಸಣ್ಣಸ್ವಾಮಿಗೌಡ, ಉಧ್ಯಮಿ ಬಾಬುಲಿಂಗರಾಜ ಅರಸು, ಗ್ರಾಮದ ಮುಖಂಡರಾದ ಕುಮಾರ ಸ್ವಾಮಿ, ಆರ್.ಎಸ್.ಮುಕುಂದ, ಪದ್ಮೇಶ್, ಪೂವನಹಳ್ಳಿ ರೇವಣ್ಣ, ಬಿಜಿಎಸ್ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಡಾ. ನರಸೇಗೌಡ, ತಾಲ್ಲೂಕು ಶಿಕ್ಷಕರ ಪ್ರತಿಭಾ ಪರಿಷತ್ತಿನ ಅಧ್ಯಕ್ಷ ಉದೇಶಗೌಡ, ವಕೀಲರಾದ ಆರ್.ಕೆ.ರಾಜೇಗೌಡ, ಆಶಾ, ಕೆ. ಮಂಜುಳಾ ಚನ್ನಕೇಶವ, ತಾಲೂಕು ಬಿಜೆಪಿ ಅಧ್ಯಕ್ಷ ಸಾರಂಗಿ ನಾಗಣ್ಣ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರಾದ ಎಂ.ಕೆ. ಹರಿಚರಣತಿಲಕ್, ಕೆ.ಆರ್. ನೀಲಕಂಠ, ಪದ್ಮೇಶ್ ಸೇರಿದಂತೆ ರಾಜೇನಹಳ್ಳಿ ಹಾಗೂ ಸುತ್ತ ಮುತ್ತಲಿನ ಸಾವಿರಾರು ಜನರು ಶ್ರೀ.ಭೈರವೇಶ್ವರ ದೇವಾಲಯದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಉಧ್ಯಮಿ ರಾಜೇನಹಳ್ಳಿ ಡಾ.ರೇವಣ್ಣ ಪ್ರಾಸ್ತವಿಕ ಮಾತುಗಳನ್ನಾಡಿದರು. ಆಡಳತಾಧಿಕಾರಿ ನರಸೇಗೌಡ ಸ್ವಾಗತಿಸಿದರು, ಕುಮಾರಸ್ವಾಮಿ ವಂದಿಸಿದರು, ಶಿಕ್ಷಕ ಪದ್ಮೇಶ್ ಕಾರ್ಯಕ್ರಮ ನಿರೂಪಿಸಿದರು.
- ಶ್ರೀನಿವಾಸ್ ಆರ್.