ಕೆ.ಆರ್.ಪೇಟೆ : ಸಿಇಟಿ ಪರೀಕ್ಷೆ ಬರೆಯಲು ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ್ದ ವಿದ್ಯಾರ್ಥಿಯ ಜನಿವಾರವನ್ನು ತೆಗೆಸಿ ಅವಮಾನ ಮಾಡಿರುವ ಅಧಿಕಾರಿಗಳ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ವಿಶ್ವಕರ್ಮ ಮಹಾಸಭಾದ ಕೆ. ಆರ್.ಪೇಟೆ ತಾಲೂಕು ಘಟಕವು ಆಗ್ರಹಿಸಿದೆ.
ವಿಶ್ವಕರ್ಮ ಮಹಾಸಭಾದ ಕೆ. ಆರ್.ಪೇಟೆ ತಾಲೂಕು ಘಟಕದ ಅಧ್ಯಕ್ಷ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ವಿಶ್ವಕರ್ಮ ಸಮಾಜದ ಬಂಧುಗಳು, ಜನಿವಾರ ತೆಗೆಸಿ ವಿದ್ಯಾರ್ಥಿಗೆ ಅಪಮಾನ ಮಾಡಿ ಮಾನವ ಹಕ್ಕುಗಳ ಉಲ್ಲಂಘನೆ ಮಾಡಿರುವ ಸಿಇಟಿ ಕೇಂದ್ರದ ಅಧಿಕಾರಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ಕುಮಾರಸ್ವಾಮಿ, ರಾಜ್ಯದಲ್ಲಿ ವಾಸವಾಗಿರುವ ವಿಶ್ವಕರ್ಮ ಸಮಾಜದ ಬಂಧುಗಳ ಜಾತಿಗಣತಿಯ ಸಂಖ್ಯೆಯ ಲೆಕ್ಕವನ್ನು ಕಡಿಮೆ ತೋರಿಸಿ ಅವೈಜ್ಞಾನಿಕವಾಗಿ ಸಮೀಕ್ಷೆ ಮಾಡಿರುವ ವರದಿಯನ್ನು ತಿರಸ್ಕರಿಸಬೇಕು ಎಂದರು.

ವಿಶ್ವಕರ್ಮ ಸಮಾಜದ ಮುಖಂಡರಾದ ರವಿ ಮತ್ತು ವಿಜಯಕುಮಾರ್ ಮಾತನಾಡಿ, ಕನ್ನಡ ವಾಹಿನಿಯ ಲಕ್ಷ್ಮೀನಿವಾಸ ಧಾರವಾಹಿಯಲ್ಲಿ ವಿಶ್ವಕರ್ಮ ಜನಾಂಗದ ಜಾತಿನಿಂಧನೆ ಮಾಡಿರುವ ನಿರ್ಮಾಪಕರು ಹಾಗೂ ನಿರ್ದೇಶಕರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು, ಧಾರವಾಹಿಯ ನಿರ್ಮಾಪಕರು ವಿಶ್ವಕರ್ಮ ಸಮಾಜದ ಬಂಧುಗಳ ಬೇಷರತ್ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಮೋಹನಕುಮಾರ್, ರೇವಣ್ಣ, ಸುರೇಶ್ ಬಾಬು ವಿಶ್ವನಾಥ್, ಪರಮೇಶಚಾರ್, ಅಗ್ರಹಾರಬಾಷಹಳ್ಳಿ ರೂಪೇಶಚಾರ್, ಸಂಗಾಪುರ ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.
- ಶ್ರೀನಿವಾಸ್ ಆರ್.