ಕೆ.ಆರ್.ಪೇಟೆ,ಮೇ.28: ಶಾಸಕ ಹೆಚ್.ಟಿ.ಮಂಜು ಅವರು ತಾಲ್ಲೂಕಿನ ಶೀಳನೆರೆ ಹೋಬಳಿಯ ಶಿವಪುರ ಗ್ರಾಮದ ಬಳಿ ನಡೆಸುತ್ತಿರುವ ಟಿ.ಜೆ.ಸ್ಟೋನ್ ಕ್ರಷರ್ ಪರಿಸರ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಅರಣ್ಯ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಗಳ ಅಧಿಕೃತ ಲೈಸೆನ್ಸ್ ಪಡೆದು ನಡೆಸಲಾಗುತ್ತಿದೆ. ಆದರೆ ಮನ್ಮುಲ್ ನಿರ್ದೇಶಕ ಡಾಲು ರವಿ ಅವರು ಕ್ರಸರ್ ಅನ್ನು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ತಮ್ಮವರೇ ಆದ ಉಸ್ತುವಾರಿ ಸಚಿವರಿದ್ದಾರೇ, ತಮ್ಮದೇ ಪಕ್ಷದ ಸರ್ಕಾರವಿದೆ. ತಾವೇ ಮುಂದೆ ನಿಂತು ಸರ್ವೆ ಮಾಡಿಸಿ, ಒಂದು ವೇಳೆ ಕ್ರಷರ್ ಇರುವ ಜಾಗ ವನ್ಯಜೀವಿ ಅರಣ್ಯ ಪ್ರದೇಶಕ್ಕೆ ಸೇರಿದ್ದರೆ ಸದರಿ ಜಾಗವನ್ನು ಸರ್ಕಾರಕ್ಕೆ ವಶಪಡಿಸಿಕೊಳ್ಳಿ ಎಂದು ಶಾಸಕ ಹೆಚ್.ಟಿ.ಮಂಜು ಅವರ ಆಪ್ತ ಸಹಾಯಕ ಮರಡಹಳ್ಳಿ ಡಾಲು ರವಿ ಅವರಿಗೆ ಸಲಹೆ ನೀಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಡಾಲು ರವಿ ಅವರು ಶಿವಪುರ ಗ್ರಾಮದ ಬಳಿ ಶಾಸಕರಾದ ಹೆಚ್.ಟಿ.ಮಂಜು ಅವರು ಅಕ್ರಮವಾಗಿ ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಿಕೊಂಡು ಕ್ರಷರ್ ನಡೆಸುತ್ತಿದ್ದಾರೆ ಎಂದು ಆರೋಪ ಮಾಡಿರುವ ಹಿನ್ನೆಲೆಯಲ್ಲಿ ಸ್ಪಷ್ಟೀಕರಣ ನೀಡಿ ನಮ್ಮ ಶಾಸಕರಾದ ಹೆಚ್.ಟಿ.ಮಂಜಣ್ಣ ಅವರ ಮಾಲೀಕತ್ವದಲ್ಲಿ ನಡೆಸುತ್ತಿರುವ ಕ್ರಷರ್ ಜಾಗವು ಖರೀದಿಸಿದ ಸ್ವಂತ ಜಾಗವಾಗಿರುತ್ತದೆ ಎಂದು ಸ್ಪಷ್ಟನೆ ನೀಡಿದರು.

ಸದರಿ ಕ್ರಷರ್ ಜಾಗವು ಎಲ್ಲಾ ದಾಖಲಾತಿಗಳೊಂದಿಗೆ ಪಾರದರ್ಶಕವಾಗಿದ್ದು ಹೈಕೋರ್ಟ್ ಕೂಡ ರಾಜ್ಯದಲ್ಲಿಯೇ ಪರಿಸರ ಸ್ನೇಹಿ ಕ್ರಷರ್ಗಳಲ್ಲಿ ನಮ್ಮದೂ ಒಂದು ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯು ಮಾನ್ಯತೆ ನೀಡಿರುತ್ತದೆ. ಆದರೂ ಸಹ ಡಾಲು ರವಿ ಅವರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ ಈ ಬಗ್ಗೆ ಡಾಲು ರವಿ ಅವರೇ ಮುಂದೆ ನಿಂತು ತಮ್ಮದೇ ಸರ್ಕಾರ ಇರುವ ಕಾರಣ ಸರ್ವೆ ಮಾಡಿಸಿ ನಮ್ಮ ಶಾಸಕರ ಟಿ.ಜೆ.ಸ್ಟೋನ್ ಕ್ರಷರ್ ಅಕ್ರಮ ಎಂದು ಸಾಬೀತು ಪಡಿಸಿದರೆ ನಾವು ತಲೆ ಭಾಗುತ್ತೇವೆ ಸುಖಾ ಸುಮ್ಮನೆ ಟೀಕೆ ಮಾಡುವುದು ಸರಿಯಾದ ನಡಾವಳಿಕೆಯಲ್ಲ. ಸುಮ್ಮನೆ ಗಾಳಿಯಲ್ಲಿ ಗುಂಡು ಹೊಡೆಯುವುದನ್ನು ನಿಲ್ಲಿಸಿ ದಾಖಲೆ ಸಮೇತ ಟೀಕೆ ಮಾಡಲಿ ಎಂದು ಡಾಲು ರವಿ ಅವರಿಗೆ ಪ್ರದೀಪ್ ತಿಳಿ ಹೇಳಿದರು.

ಜೆಡಿಎಸ್ ಮುಖಂಡ ವಡ್ಡರಹಳ್ಳಿ ಮಹಾದೇವೇಗೌಡ ಮಾತನಾಡಿ ಡೇರಿ ಕಾರ್ಯದರ್ಶಿ ಹುದ್ದೆಗೆ ಹಣವನ್ನು ದುರುಪಯೋಗ ಮಾಡಿಕೊಂಡು ರಾಜೀನಾಮೆ ನೀಡಿದ್ದಾರೆ ಎಂದು ಡಾಲು ರವಿ ಟೀಕೆ ಮಾಡಿದ್ದಾರೆ. ಆದರೆ ನಾನು ಡೇರಿಯ ಯಾವುದೇ ಹಣವನ್ನು ದುರುಪಯೋಗ ಪಡಿಸಿಕೊಂಡಿಲ್ಲ. ಕಾರ್ಖಾನೆಯವರು ನನ್ನ ಖಾತೆಗೆ ಹಣ ಹಾಕಿದ್ದು ನಿಜ ಆದರೆ ಆ ಹಣವನ್ನು ಡೇರಿ ಕಾರ್ಯದರ್ಶಿಯವರಿಗೆ ನೀಡಿರುವ ಬಗ್ಗೆ ಡೇರಿ ಖಾತೆಗೆ ಜಮಾ ಮಾಡಿರುವ ಬಗ್ಗೆ ದಾಖಲೆಗಳಿವೆ. ಈ ಬಗ್ಗೆ ಎಲ್ಲಿ ಯಾವಾಗಬೇಕಾದರೂ ದಾಖಲೆ ನೀಡಲು ಅಥವಾ ಚರ್ಚೆ ನಡೆಸಲು ಸಿದ್ದನಿದ್ದೇನೆ. ನಾನು ರಾಜೀನಾಮೆ ಕೊಟ್ಟಿರುವುದು ಡಾಲು ರವಿ ಮತ್ತು ಎಂ.ಬಿ.ಹರೀಶ್ ಅವರು ಗೆದ್ದ ನಂತರ ಮನೆ ಬಾಗಿಲಿಗೆ ಡೇರಿ ಕೆಲಸಗಳಿಗೆ ಹೋಗಬೇಕಲ್ಲ ಎಂಬ ಕಾರಣಕ್ಕೆ ರಾಜೀನಾಮೆ ನೀಡಿದ್ದೇನೆ ಹೊರತು ಬೇರೆ ಯಾವುದೇ ಕಾರಣದಿಂದಲ್ಲ ಎಂದು ಸ್ಪಷ್ಟನೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ತಾಲ್ಲೂಕು ಟಿಎಪಿಸಿಎಂಎಸ್ ಸಂಸ್ಥೆಯ ನಿರ್ದೇಶಕ ಬಲದೇವ್, ಮಹಾದೇವ್, ಬೇಲದಕೆರೆ ಮರೀಗೌಡ, ಭೈರಾಪುರ ಹರೀಶ್, ಸಿಂಧುಘಟ್ಟ ಎಸ್.ಐ.ಗಿರೀಶ್, ಅಲೋಕ್, ಶೆಟ್ಟಿನಾಯಕನಕೊಪ್ಪಲು ಶೇಖರ್, ಅಗ್ರಹಾರಬಾಚಹಳ್ಳಿ ಲೋಹಿತಾಶ್ವ ಹೆಗ್ಗಡಹಳ್ಳಿ ಪ್ರಶಾಂತ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.