ಕೆ.ಆರ್.ಪೇಟೆ,ಮೇ.30: ಪಟ್ಟಣದ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ತಾಲೂಕಿನ ರೈತರ ಪಹಣಿ ತಿದ್ದುಪಡಿ ಹಾಗೂ ರೈತರ ಕುಂದು ಕೊರತೆ ಸಭೆ ಪಾಂಡವಪುರ ಉಪ ವಿಭಾಗಾಧಿಕಾರಿ ಡಾ.ಕೆ.ಆರ್.ಶ್ರೀನಿವಾಸ್ ನೇತೃತ್ವದಲ್ಲಿ ನಡೆಯಿತು.
ಪಹಣಿ ತಿದ್ದುಪಡಿ ಕಾರ್ಯಕ್ಕೂ ಮುನ್ನ ರೈತ ಮುಖಂಡರೊಂದಿಗೆ ಮಾತನಾಡಿದ ಉಪ ವಿಭಾಗಧಿಕಾರಿ ಡಾ.ಶ್ರೀನಿವಾಸ್ ರೈತರ ಹಿತದೃಷ್ಠಿಯಿಂದ ನಾನು ನನ್ನ ವ್ಯಾಪ್ತಿಯ ನಾಲ್ಕು ತಾಲೂಕುಗಳಲ್ಲಿಯೂ ಪಹಣಿ ತಿದ್ದುಪಡಿ ಮತ್ತು ಪೌತಿ ಖಾತೆಗಳನ್ನು ಆಂದೋಲನದ ಮಾದರಿಯಲ್ಲಿ ಶ್ರಮ ವಹಿಸಿ ಮಾಡುತ್ತಿದ್ದೇನೆ. ಇದಕ್ಕಾಗಿ ರೈತರನ್ನು ಅನಗತ್ಯವಾಗಿ ಉಪ ವಿಭಾಗಾಧಿಕಾರಿಗಳ ಕಛೇರಿಗೆ ಅಲೆದಾಡಿಸದೆ ವಾರದ ನಾಲ್ಕು ದಿನಗಳನ್ನು ಒಂದೂಂದು ತಾಲೂಕಿಗೆ ಮೀಸಲಿಟ್ಟು ಆಯಾ ತಾಲೂಕು ಕಛೇರಿಯಲ್ಲಿಯೇ ಕುಳಿತು ರೈತರ ಕೆಲಸ ಮಾಡುತ್ತಿದ್ದೇನೆ.

ಅದರಂತೆ ಪ್ರತಿ ಶುಕ್ರವಾರ ಕೆ.ಆರ್.ಪೇಟೆ ಪಟ್ಟಣಕ್ಕೆ ಆಗಮಿಸಿ ರೈತರ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸುವ ಪ್ರಯತ್ನ ಮಾಡುತ್ತಿರುವುದಲ್ಲದೆ ಇಲ್ಲಿಯೇ ಈ ಭಾಗದ ಎ.ಸಿ ಕೋರ್ಟ್ ನಡೆಸಿ ರೈತರ ಅನಗತ್ಯ ತಿರುಗಾಟಕ್ಕೆ ಅಂತ್ಯ ಹಾಡುವ ಪ್ರಯತ್ನ ಆರಂಭಿಸಿದ್ದೇನೆ. ಕೆ.ಆರ್.ಪೇಟೆ ತಹಸೀಲ್ದಾರ್ ಡಾ.ಎಸ್.ಯು.ಅಶೋಕ್ ಉತ್ತಮವಾಗಿ ಸ್ಪಂದಿಸುತ್ತಿದ್ದು, ರೈತರು ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವಂತೆ ಮನವಿ ಮಾಡಿದರು.

ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಮಾತನಾಡಿ, ಪಹಣಿ ತಿದ್ದುಪಡಿ ಆಂದೋಲನದ ಮಾದರಿಯಲ್ಲಿ ಪೌತಿ ಖಾತೆ ಆಂದೋಲನ ಮಾಡುವಂತೆ ಮನವಿ ಮಾಡಿದರು. ತಾಲೂಕಿನಲ್ಲಿ ಪೌತಿ ಖಾತೆ ಮಾಡಿಸಿಕೊಳ್ಳಲು ರೈತರು ನಿತ್ಯ ಕಛೇರಿಗೆ ಎಡತಾಕುತ್ತಿದ್ದಾರೆ. ಇಲ್ಲಿನ ಬ್ರಷ್ಠ ನೌಕರರ ಕಾಟದಿಂದ ರೈತರು ಸಂಕಷ್ಠಕ್ಕೆ ಸಿಲುಕಿದ್ದಾರೆ. ಈ ಹಿಂದೆ ದರಕಾಸು ಸಮಿತಿಯಲ್ಲಿ ಭೂಮಿ ಮಂಜೂರಾಗಿ ಭೂಮಿಗೆ ಸರ್ಕರ ನಿಗಧಿ ಪಡಿಸಿದ ಕಿಮ್ಮತ್ತು ಹಣ ಪಾವತಿಸಿದ್ದರೂ ನೂರಾರು ರೈತರು ಇದುವರೆಗೂ ಅಗತ್ಯ ಸಾಗುವಳಿ ಚೀಟಿ ಪಡೆಯಲಾಗಿಲ್ಲ. ಪಹಣಿ ತಿದ್ದುಪಡಿ ಮಾದರಿಯಲ್ಲಿಯೇ ಸಾಗುವಳಿ ಚೀಟಿ ನೀಡುವ ಆಂದೋಲನ ಆರಂಭಿಸುವಂತೆ ಮನವಿ ಮಾಡಿದರು.

ಸಾಗುವಳಿ ಚೀಟಿ ಪಡೆಯಬೇಕಾಗಿರುವ ರೈತರು ನೇರವಾಗಿ ತಹಸೀಲ್ದಾರರಿಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಹಾಕಿಕೊಂಡ ರೈತರಿಗೆ ದರಕಾಸು ಸಾಗುವಳಿ ಚೀಟಿ ನೀಡಲು ತುರ್ತು ಕ್ರಮವಹಿಸಬೇಕು ಎಂದ ಪುಟ್ಟೇಗೌಡ ತಾಲೂಕು ಕಛೇರಿಯಲ್ಲಿ ಯಾವುದೇ ಸಿಬ್ಬಂಧಿಗಳು ಅಥವಾ ಮದ್ಯವರ್ತಿಗಳು ಹಣಕ್ಕೆ ಒತ್ತಾಯಿಸಿ ಪೈಲ್ ಪೆಂಡಿಗ್ ಇರಿಸಿದ್ದರೆ ತಕ್ಷಣವೇ ನೇರವಾಗಿ ಉಪ ವಿಭಾಗಾಧಿಕಾರಿಗಳು, ತಹಸೀಲ್ದಾರರು ಅಥವಾ ರಾಜ್ಯ ರೈತಸಂಘಕ್ಕೆ ದೂರು ನೀಡುವಂತೆ ಮನವಿ ಮಾಡಿದರು.

ತಹಸೀಲ್ದಾರ್ ಡಾ.ಎಸ್.ಯು.ಅಶೋಕ್, ಉಪ ತಹಸೀಲ್ದಾರ್ ರವಿ, ಲಕ್ಷ್ಮೀ ಕಾಂತ್ ಸೇರಿದಂತೆ ಕಂದಾಯ ಇಲಾಖೆಯ ಸಿಬ್ಬಂಧಿಗಳು ಪಹಣಿ ತಿದ್ದುಪಡಿ ಕಾರ್ಯದಲ್ಲಿದ್ದರು. ಜಿಲ್ಲಾ ರೈತಸಂಘದ ಉಪಾಧ್ಯಕ್ಷ ಮರುವನಹಳ್ಳಿ ಶಂಕರ್, ರೈತ ಮುಖಂಡರಾದ ಸಿಂಧುಘಟ್ಟ ಮುದ್ದುಕುಮಾರ್, ಬೂಕನಕೆರೆ ಅಂಗಡಿ ನಾಗರಾಜು, ಕೃಷ್ಣಾಪುರ ಮಿಲ್ ರಾಜಣ್ಣ, ನಗರೂರು ಕುಮಾರ್, ಮಂಚನಹಳ್ಳಿ ನಾಗೇಗೌಡ, ಅಕ್ಕಿಮಂಚನಹಳ್ಳಿ ಹೊನ್ನೇಗೌಡ, ಕರೋಟಿ ತಮ್ಮಯ್ಯ, ಚೌಡೇನಹಳ್ಳಿ ನಾರಾಯಣಸ್ವಾಮಿ, ನೀತಿಮಂಗಳ ಮಹೇಶ್ ಸೇರಿದಂತೆ ಹಲವು ರೈತ ಮುಖಂಡರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.