ಕೆ.ಆರ್.ಪೇಟೆ-ಕ್ರಿಕೆಟ್ ವಿಜಯದ ಕ್ರೆಡಿಟ್ ಪಡೆಯಲು ಹೋಗಿ 11ಮಂದಿ ಪ್ರಾಣ ತೆಗೆದ ರಾಜ್ಯ ಸರ್ಕಾರ- ನಾರಾಯಣಗೌಡ ಆರೋಪ

ಕೆ.ಆರ್.ಪೇಟೆ,ಜೂ.10: ಆರ್.ಸಿ.ಬಿ. ವಿಜಯೋತ್ಸವ ಸಮಯದಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಏಕಕಾಲಕ್ಕೆ ಲಕ್ಷಾಂತರ ಮಂದಿ ಜಮಾಯಿಸಿದ ಕಾರಣ ಕಾಲ್ತುಳಿತಕ್ಕೆ ಸಿಕ್ಕಿ ಮೃತರಾದ ರಾಯಸಮುದ್ರ ಗ್ರಾಮದ ಯುವಕ ಪೂರ್ಣಚಂದ್ರ ನಿವಾಸಕ್ಕೆ ರಾಜ್ಯದ ಮಾಜಿ ಸಚಿವ ಡಾ. ನಾರಾಯಣ ಗೌಡ ಭೇಟಿ ನೀಡಿ ಮೃತರ ಪೋಷಕರಿಗೆ ಸಾಂತ್ವನ ಹೇಳಿದರು.

ರಾಜ್ಯ ಸರ್ಕಾರದ ಬೇಜವಾಬ್ದಾರಿ ಯಿಂದ, ತರಾತುರಿಯಲ್ಲಿ ವಿಜಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡು ಐಪಿಎಲ್ ಗೆಲುವಿನ ಕ್ರೆಡಿಟ್ ತೆಗೆದುಕೊಳ್ಳಲು ಹೊರಟ ಪರಿಣಾಮವಾಗಿ ಕಾಲ್ತುಳಿತದಂತಹ ದುರ್ಘಟನೆ ಸಂಭವಿಸಿದೆ. ರಾಜ್ಯ ಸರ್ಕಾರ ನೀಡುತ್ತಿರುವ ಪರಿಹಾರದಿಂದ ನಾವು ಕಳೆದುಕೊಂಡಿರುವ ಬಂಧುಗಳು ಹಾಗೂ ನಮ್ಮ ಮಕ್ಕಳ ಪ್ರಾಣವನ್ನು ಮರಳಿ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ಧೈರ್ಯ ತಂದುಕೊಳ್ಳಿ ನಿಮ್ಮೊಂದಿಗೆ ಬಿಜೆಪಿ ಪಕ್ಷವಿದೆ.

ಅನಾಹುತದಲ್ಲಿ ನಮ್ಮ ಮಕ್ಕಳನ್ನು ಕಳೆದುಕೊಂಡಿರುವುದಕ್ಕೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಸೂಕ್ತ ಪರಿಹಾರ ಪಡೆದುಕೊಳ್ಳೋಣ. ಬಿಜೆಪಿ ಪಕ್ಷದ ಮುಖಂಡರಾದ ಮಾಜಿ ಉಪ ಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ್ ಅವರೇ ನ್ಯಾಯಾಲಯದ ಖರ್ಚು ವೆಚ್ಚಗಳನ್ನು ನೋಡಿಕೊಂಡು ಸೂಕ್ತವಾದ ಪರಿಹಾರವನ್ನು ಕೊಡಿಸಲು ಶ್ರಮಿಸುತ್ತಾರೆ ಎಂದು ನಾರಾಯಣಗೌಡ ಮೃತ ಯುವಕ ಪೂರ್ಣಚಂದ್ರ ಅವರ ತಂದೆ ಆರ್.ಬಿ.ಚಂದ್ರು ಹಾಗೂ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

ಈ ಸಂದರ್ಭದಲ್ಲಿ ಹಲವು ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

– ಶ್ರೀನಿವಾಸ್‌ ಆರ್.

Leave a Reply

Your email address will not be published. Required fields are marked *