ಕೆ.ಆರ್.ಪೇಟೆ: ತಂದೆ ತಾಯಂದಿರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರವನ್ನೂ ಕಲಿಸಬೇಕು. ಸಂಸ್ಕಾರ ರಹಿತ ಶಿಕ್ಷಣ ಸಮಾಜಕ್ಕೆ ಅಪಾಯಕಾರಿ ಎಂದು ಮಾಜಿ ಶಾಸಕ ಬಿ.ಪ್ರಕಾಶ್ ಅಭಿಪ್ರಾಯಪಟ್ಟರು.
ಅವರು ತಾಲೂಕಿನ ಹೇಮಗಿರಿಯಲ್ಲಿರುವ ಬಿ.ಜಿ.ಎಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಸಸಿ ನೆಡುವ ಮತ್ತು ಪೂರ್ವ ಪ್ರಾಥಮಿಕ ಶಾಲೆಗೆ ದಾಖಲಾಗಿರುವ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುವ ಜ್ಞಾನಾಂಕುರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಹಿಂದೆ ನಮ್ಮಲ್ಲಿ ಗುರುಕುಲ ಶಿಕ್ಷಣ ಪದ್ದತಿಯಿತ್ತು. ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ನಮ್ಮ ಶಾಲೆಗಳ ಕಲಿಕಾ ಪರಿಸರದಲ್ಲಿಯೂ ಬದಲಾವಣೆಗಳಾಗಿವೆ. ಶಾಲೆಗಳು ಶಿಕ್ಷಣ ನೀಡುವ ಕೇಂದ್ರಗಳಾಗಿದ್ದಾವೆಯೇ ಹೊರತು ಕಲಿಯುವ ಮಕ್ಕಳಿಗೆ ಸಂಸ್ಕಾರ ಕಲಿಸುವ ಕೆಲಸ ಮಾಡುತ್ತಿಲ್ಲ. ಇದರಿಂದ ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಮೂಲ ಬೇರುಗಳು ಸಡಿಲಗೊಂಡಿವೆ. ವಿದ್ಯಾವಂತರ ಸಂಖ್ಯೆ ಹೆಚ್ಚಾದಂತೆ ನಮ್ಮ ಕೌಟುಂಬಿಕ ಪರಿಸರ ಹಾಳಾಗುತ್ತಿದೆ.

ಬೆಳೆದ ಮಕ್ಕಳು ತಂದೆ ತಾಯಂದಿರಿಗೆ ಆಸರೆಯಾಗುವ ಕೆಲಸ ಮಾಡುತ್ತಿಲ್ಲ. ಹೆತ್ತು ಹೊತ್ತು ಸಾಕಿ ಸಲುಹಿದ ತಂದೆ ತಾಯಂದಿರು ಇಳಿವಯಸ್ಸಿನಲ್ಲಿ ಮಕ್ಕಳ ಆಸರೆಯನ್ನು ಕಳೆದುಕೊಳ್ಳುತ್ತಿದ್ದಾರೆ. ವಿದ್ಯಾವಂತರು ಬ್ರಷ್ಟರಾಗುತ್ತಿದ್ದು ಸಾಮಾಜಿಕ ಭಯ ಇಲ್ಲದಂತಾಗುತ್ತಿದೆ. ಕೌಟುಂಬಿಕ ವಿಚ್ಚೇದನಗಳು ಹೆಚ್ಚುತ್ತಿದ್ದು ಗಂಡ ಹೆಂಡಿತಿಯ ನಡುವಿನ ಸಂಬಂಧಗಳು ಜಟಿಲಗೊಳ್ಳುತ್ತಿವೆ. ಸಂಸ್ಕಾರ ರಹಿತ ಶಿಕ್ಷಣವೇ ಇದಕ್ಕೆ ಮೂಲ ಕಾರಣ ಎಂದ ಮಾಜಿ ಶಾಸಕ ಬಿ.ಪ್ರಕಾಶ್ ತಂದೆ ತಾಯಿಯ ಸೇವೆಯೇ ನಿಜವಾದ ಭಗವಂತನ ಸೇವೆ ಎನ್ನುವುದನ್ನು ನಮ್ಮ ಮಕ್ಕಳಿಗೆ ಬಾಲ್ಯದಿಂದಲೇ ಕಲಿಸಿಕೊಡಬೇಕೆಂದರು.

ಮಕ್ಕಳನ್ನು ಮೊಬೈಲ್ ಗೀಳಿನಿಂದ ದೂರವಿಡಬೇಕು. ಮೊಬೈಲ್ ಗೀಳಿನಿಂದಾಗುವ ಅಪಾಯಗಳ ಅರಿವಿದ್ದರೂ ಪೋಷಕರು ಮಕ್ಕಳಿಗೆ ಮೊಬೈಲ್ ಗೀಳು ಅಂಟಿಸುತ್ತಿದ್ದಾರೆ. ಹಿಂದೆಲ್ಲಾ ಮಕ್ಕಳು ಅತ್ತರೆ ಚಂದಮಾನನನ್ನು ತೋರಿಸಿ ಮಕ್ಕಳ ಅಳು ನಿಲ್ಲಿಸುತ್ತಿದ್ದರೆ. ಈಗ ಮಕ್ಕಳು ಅತ್ತರೆ, ಊಟ ಮಾಡದಿದ್ದರೆ ಪ್ರತಿಯೊಂದಕ್ಕೂ ಪೋಷಕರು ಮಕ್ಕಳ ಕೈಗೆ ಮೊಬೈಲ್ ನೀಡಿ ಸಂತೈಸುತ್ತಿದ್ದಾರೆ. ಇದರಿಂದ ತೊಟ್ಟಿಲ ಮಕ್ಕಳಿಗೂ ಮೊಬೈಲ್ ಗೀಳು ಅಂಟುತ್ತಿದೆ. ಪೋಷಕರು ಮಕ್ಕಳನ್ನು ಮೊಬೈಲ್ ಗೀಳಿನಿಂದ ಹೊರತರಬೇಕೇ ಹೊರತು ತಾವು ಮುಂದೆ ನಿಂತು ಮೊಬೈಲ್ ಗೀಳು ಅಂಟಿಸಬಾರದೆAದು ಮಾಜಿ ಶಾಸಕರು ಎಚ್ಚರಿಸಿದರು.

ನಾವೆಲ್ಲಾ ಪರಿಸರದ ಮಕ್ಕಳು. ನಮ್ಮ ಸುತ್ತಲ ಪರಿಸರ ಚೆನ್ನಾಗಿದ್ದಾಗ ಮಾತ್ರ ನಮ್ಮ ಬದುಕು ಸುಂದರವಾಗಲು ಸಾಧ್ಯ. ವಿಶ್ವ ಪರಿಸರ ದಿನಾಚರಣೆ ಕೇವಲ ಗಿಡ ನೆಡುವುದಕ್ಕೆ ಮಾತ್ರ ಸೀಮಿತವಾಗುತ್ತಿದೆ. ಗಿಡ ನೆಡುವುದು ಎಷ್ಟು ಮುಖ್ಯವೋ ಅದನ್ನು ನೀರೆರದು ಪೋಷಿಸುವುದೂ ಅಷ್ಟೇ ಮುಖ್ಯ. ಹಿಂದೆಲ್ಲಾ ನಮ್ಮ ರೈತರು ತಮ್ಮ ಜಮೀನಿನ ಬದುಗಳ ಮೇಲೆ ಗಿಡಗಳನ್ನು ಬೆಳೆಸುತ್ತಿದ್ದರು. ಇದರಿಂದ ಜಮೀನಿನಲ್ಲಿ ವಿಶ್ರಾಂತಿಗೆ ಅಗತ್ಯವಾದ ನೆರಳು ಸಿಗುತ್ತಿತ್ತಲ್ಲದೆ ಮರಗಿಡಗಳ ಸೊಪ್ಪು ಸೆದೆ ಹಸಿರು ಗೊಬ್ಬರವಾಗಲು ಬಳಕೆಯಾಗುತ್ತಿತ್ತು. ಈಗ ರೈತರ ಜಮೀನುಗಳಲ್ಲಿ ಬದು ಸಂಸ್ಕೃತಿಯೂ ಅಳಿದು ಹೋಗಿದೆ. ರೈತ ಸಮುದಾಯ ನಮ್ಮ ಹಿರಿಯರ ಬದು ಪರಂಪರೆಯನ್ನು ಮರಳಿ ತರಬೇಕು. ಜಮೀನಿನ ಖಾಲಿ ಜಾಗದಲ್ಲಿ ಮತ್ತು ಬದುಗಳ ಮೇಲೆ ಮರಗಿಡಗಳನ್ನು ಬೆಳೆಸುವ ಮೂಲಕ ಕೃಷಿ ಭೂಮಿಗಳನ್ನು ಹಸಿರು ವಲಯಗಳನ್ನಾಗಿ ರೂಪಿಸುವಂತೆ ಮಾಜಿ ಶಾಸಕ ಬಿ.ಪ್ರಕಾಶ್ ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅಕ್ಷರಾಭ್ಯಾಸ ಕಾರ್ಯಕ್ರಮದ ಪೂಜಾ ವಿಧಾನಗಳನ್ನು ನೆರವೇರಿಸಿದ ಬಿಜಿಎಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಜೆ.ಎನ್.ರಾಮಕೃಷ್ಣೇಗೌಡ ಮಾತನಾಡಿ, ಪೋಷಕರು ಮಕ್ಕಳನ್ನು ಪ್ರೀತಿಯಿಂದ ಬೆಳೆಸಬೇಕು. ಆದರೆ ತಪ್ಪುಗಳನ್ನು ತಿದ್ದುವ ಮೂಲಕ ಅವರನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕು. ಮಕ್ಕಳ ಮೇಲೆ ಪೋಷಕರು ಯಾವುದೇ ಕಾರಣಕ್ಕೂ ಕಲಿಕಾ ಒತ್ತಡವನ್ನು ಹಾಕದೆ ಮಕ್ಕಳು ತಮ್ಮ ಆಸಕ್ತಿಗೆ ತಕ್ಕಂತಹ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಕಲಿಯಲು ಅವಕಾಶ ನೀಡಬೇಕು.

ಅಂಕಗಳಿಕೆಯೊಂದೇ ಮಕ್ಕಳ ಸಾಧನೆಯಲ್ಲ. ಅದರಾಚೆಗೂ ಸಾಧನೆಯ ಕ್ಷೇತ್ರಗಳಿವೆ. ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅದನ್ನು ಅರಳಿಸುವ ಕೆಲಸಕ್ಕೆ ಪೋಷಕರು ಗಮನ ನೀಡಬೇಕೆಂದರಲ್ಲದೆ ಬಿಜಿಎಸ್ ಶಿಕ್ಷಣ ಸಂಸ್ಥೆಯ ವತಿಯಿಂದ ಪ್ರತಿವರ್ಷ ಐದು ಸಾವಿರ ಸಸಿಗಳನ್ನು ನೆಟ್ಟು ಪೋಷಿಸಲಾಗುತ್ತಿದೆ ಎಂದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಎಂ.ಕೆ.ಹರಿಚರಣತಿಲಕ್ ಮತ್ತು ಕೆ.ಆರ್.ನೀಲಕಂಠ ಗ್ರಾಮ ಪಂಚಾಯತಿ ಸದಸ್ಯ ಆರ್.ಶ್ರೀನಿವಾಸ್ ಕಾರ್ಯಕ್ರಮ ಕುರಿತು ಮಾತನಾಡಿದರು. ಮುಖಂಡ ಮಡುವಿನಕೋಡಿ ಉಮೇಶ್ ಸೇರಿದಂತೆ ಪೋಷಕರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.

ಜ್ಞಾನಂಕುರ ಕಾರ್ಯಕ್ರಮದ ಅಂಗವಾಗಿ ಮಕ್ಕಳಿಗೆ ಅಕ್ಷರಾಭ್ಯಾಸವನ್ನು ಓಂಕಾರ ಸುಧೆ ಮತ್ತು ವೇದ ಪ್ರವಚನಗಳ ಮೂಲಕ ಮಾಡಿಸಲಾಯಿತಲ್ಲದೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನೂರಾರು ಪೋಷಕರಿಗೆ ಈಳೆ, ನಿಂಬೆ, ಕರಿಬೇವು ಮುಂತಾದ ಸಸಿಗಳನ್ನು ವಿತರಿಸಲಾಯಿತು.
- ಸುರೇಶ್ ಎನ್.