ಚಿಕ್ಕಮಗಳೂರು-ಅಕ್ಕಮಹಾದೇವಿ ಸಂಘದಲ್ಲಿ ಕಾರಹುಣ್ಣಿಮೆ- ಆಧ್ಯಾತ್ಮಿಕ ಸ್ಪರ್ಶದಿಂದ ಬದುಕು ಹಸನು- ನಿವೃತ್ತ ಶಿಕ್ಷಕಿ ಶಕುಂತಲಾ ದೊಡ್ಡಮಲ್ಲಪ್ಪ ಅಭಿಮತ

ಚಿಕ್ಕಮಗಳೂರು, ಜೂನ್ 12 -ಆಧ್ಯಾತ್ಮದ ಸ್ಪರ್ಶ ಬದುಕನ್ನು ಹಸನುಗೊಳಿಸುತ್ತದೆ ಎಂದು ನಿವೃತ್ತ ಶಿಕ್ಷಕಿ ಶಕುಂತಲಾ ದೊಡ್ಡಮಲ್ಲಪ್ಪ ಅಭಿಪ್ರಾಯಿಸಿದರು.

ಅಕ್ಕಮಹಾದೇವಿ ಮಹಿಳಾ ಸಂಘ ಜಯನಗರದ ಶರಣೆ ಸತ್ಯಕ್ಕ ಗುಂಪು ಶ್ರೀಜಗದ್ಗುರು ರೇಣುಕಾಚಾರ್ಯ ಸಮುದಾಯ ಭವನದಲ್ಲಿ ‘ಕಾರಹುಣ್ಣಿಮೆ’ ಕರ‍್ಯಕ್ರಮ ಉದ್ಘಾಟಿಸಿ ನಿನ್ನೆ ಅವರು ಮಾತನಾಡಿ ಆಧ್ಯಾತ್ಮಿಕತೆ ನಮ್ಮ ಸಮಾಜದ ವೈಶಿಷ್ಟö್ಯ. ಸುಂದರ ಬದುಕಿಗೆ ಯೋಗ, ಧ್ಯಾನ ಸೇರಿದಂತೆ ಸಂಸ್ಕಾರ ಅತಿ ಮುಖ್ಯ ಎಂದರು.

ಕುಟುಂಬ ವ್ಯವಸ್ಥೆ ಸಮಾಜದ ಭದ್ರಬುನಾದಿ. ತಂದೆ-ತಾಯಿ ಮತ್ತು ಗುರು ಇಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಸದ್ಭಾವನೆ, ಸಾಮರಸ್ಯ, ಶಾಂತಿ-ನೆಮ್ಮದಿಯ ತಾಣವಾಗಬೇಕಾದರೆ ಮನೆಗಳು ಸಂಸ್ಕೃತಿ ಮತ್ತು ಸಂಸ್ಕಾರದ ಕೇಂದ್ರವಾಗಬೇಕು.

ಭಿತ್ತಿದಂತೆ ಬೆಳೆ ಎಂಬಂತೆ ನಾವು ಮಕ್ಕಳನ್ನು ಹೇಗೆ ಬೆಳೆಸುತ್ತೇವೆಯೋ ಹಾಗೆ ನಮ್ಮ ಸಮಾಜ ರೂಪುಗೊಳ್ಳುತ್ತದೆ. ಜನನಿ ತಾನೇ ಮೊದಲ ಗುರು. ಉಪ್ಪಿಗಿಂತ ರುಚಿ ಬೇರೆ ಇಲ್ಲ ತಾಯಿಗಿಂತ ಬಂಧುವಿಲ್ಲ ಎಂಬ ಮಾತಿದೆ. ಯಾವುದೇ ವಿಶ್ವವಿದ್ಯಾನಿಲಯಗಳು ಕಲಿಸಲಾಗದ ಪಾಠವನ್ನು ತಾಯಿಯಿಂದ ಕಲಿಯಬಹುದು. ಮನೆಯೆ ಮೊದಲ ಪಾಠಶಾಲೆ ಎಂಬುದನ್ನು ಮರೆಯಬಾರದು ಎಂದರು.

ಬಾಲ್ಯದಲ್ಲೆ ಮಕ್ಕಳನ್ನು ತಿದ್ದಿತೀಡಿ ಬೆಳೆಸಬೇಕು. ನಾವು ಆಚಾರವಂತರಾಗಿ ಒಳ್ಳೆಯ ಗುಣ ನಡೆತೆಗಳನ್ನು ಪಾಲಿಸಿದರೆ ಸಹಜವಾಗಿಯೆ ಮಕ್ಕಳೂ ಅದನ್ನೆ ಅನುಸರಿಸುತ್ತಾರೆ. ಮೊಬೈಲ್ ಮತ್ತು ಟಿ.ವಿ.ಗೆ ನಾವು ದಾಸರಾಗದಿದ್ದರೆ ಮಕ್ಕಳೂ ಹಿತಮಿತವಾಗಿ ಅವುಗಳನ್ನು ಬಳಸುವಂತಾಗುತ್ತದೆ. ಉನ್ನತ ಸ್ಥಾನಕ್ಕೇರಲು ನಿಸ್ವಾರ್ಥತತೆಯ ಗಣಿಯಾಗಿ ಕರ್ತವ್ಯದ ಮೇರುಪರ್ವತವಾಗಿ ಮಕ್ಕಳನ್ನು ವಿಕಾಸಗೊಳಿಸಬೇಕು ಎಂದರು.

ನಮ್ಮ ದೈನಂದಿನ ಬದುಕಿನಲ್ಲಿ ಸಾಮರಸ್ಯ ಹಾಸುಹೊಕ್ಕಿದೆ. ಅದನ್ನು ಗಮನಿಸುವ, ಅರ್ಥೈಸುವ, ಅನುಕರಿಸುವ ಗುಣಲಕ್ಷಣಗಳು ಅಗತ್ಯ ಎಂದ ಶಕುಂತಲಾ, ಕುಂಬಾರ ಮಾಡಿದ ಮಣ್ಣಿನ ಹಣತೆಯಲ್ಲಿ, ರೈತಬೆಳೆದ ಹತ್ತಿ ಹೊಸೆದು ಬತ್ತಿ ಮಾಡಿ, ಗಾಣಿಗನ ಪರಿಶ್ರಮದಿಂದ ತೆಗೆದ ಎಣ್ಣೆ ಬಳಸಿ ದೇವರಿಗೆ ಬೆಳಗುತ್ತೇವೆ. ಬೆಳಕು ಜ್ಞಾನದ ಸಂಕೇತ. ಶರಣರು ಜ್ಞಾನದಬಲದಿಂದ ಅಜ್ಞಾನದಕೇಡು ನೋಡಯ್ಯ ಎಂದಿದ್ದಾರೆ.

ವ್ಯಾಸರು-ಪುರಂದರ-ಕನಕದಾಸರೂ ಬದುಕಿನ ಸತ್ಯವನ್ನೆ ಹೇಳಿದ್ದಾರೆ. ಸ್ವರ್ಗಕ್ಕೆ ‘ನಾನು’ ಹೋದರೆ ಹೋದೇನು ಎಂಬುದರಲ್ಲಿ ‘ಅಹಂ’ ಬಿಡಬೇಕೆಂಬ ಸಂದೇಶವಿದೆ. ದಾರ್ಶನಿಕರು, ಶರಣರು, ದಾಸರು, ಆಚಾರ್ಯರರು, ಸಾಧು-ಸತ್ಪುರಷರ ಬದುಕೇ ನಮಗೊಂದು ಸಂದೇಶ. ಅವನ್ನು ಅರಿತು ನಡೆದರೆ ಉನ್ನತಸ್ಥಾನಕ್ಕೆ ಹೋಗಬಹುದೆಂದು ಶಕುಂತಲಾ ನುಡಿದರು.

ಅಕ್ಕಮಹಾದೇವಿ ಸಂಘದ ಅಧ್ಯಕ್ಷೆ ಆಶಾಮಲ್ಲೇಶ್ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ ಹಿಂದುಗಳು ಆಚರಿಸುವ ಹಬ್ಬಗಳಲ್ಲಿ ಕಾರಹುಣ್ಣಿಮೆಯೂ ಪ್ರಾಮುಖ್ಯತೆಯನ್ನು ಪಡೆದಿದೆ. ಭೂಮಿ, ಪರಿಸರ ಕಾಳಜಿಯ ಪ್ರತೀಕವಾಗಿದೆ. ಪರಿಸರಪ್ರಜ್ಞೆ ಒಂದು ದಿನಕ್ಕೆ ಸೀಮಿತವಾಗದೇ ಪರಿಸರ ಕಾಳಜಿ ಸದಾ ಜಾಗೃತವಾಗಬೇಕು. ನಮ್ಮ ಸುತ್ತಮುತ್ತಲ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡು, ಮನೆ ಆವರಣದಲ್ಲಿ ರಸ್ತೆಗಳ ಬದಿಯಲ್ಲಿ ಗಿಡನೆಟ್ಟು ಹಸಿರನ್ನು ಹೆಚ್ಚಿಸಲು ಶ್ರಮಿಸಬೇಕೆಂದರು.

ಸಂಘಟನಾ ಕಾರ್ಯದರ್ಶಿ ಮಂಜುಳಾಯೋಗೀಶ್ ಪ್ರಾಸ್ತಾವಿಸಿ ಕಳೆದ 17ವರ್ಷಗಳಿಂದ ಅಕ್ಕಮಹಾದೇವಿ ಮಹಿಳಾ ಸಂಘ ಅನೇಕ ಸೇವಾಕರ‍್ಯಗಳನ್ನು ನಡೆಸಿಕೊಂಡು ಬಂದಿದೆ. ಪ್ರತಿವರ್ಷದಂತೆ ಮುಂದಿನ ಜುಲೈ ತಿಂಗಳು ವಾರ್ಷಿಕೋತ್ಸವದಲ್ಲಿ ಎಸ್‌ಎಸ್‌ಎಲ್ ಹಾಗೂ ಪಿ.ಯು.ಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲಾಗುವುದು. ಎಲ್ಲರೂ ಒಟ್ಟಾಗಿ ಕೆಲಸ ಮಾಡಿದಾಗ ಸಾರ್ಥಕ ಎನಿಸುವುದು. ಇದಕ್ಕೆ ಹೆಚ್ಚಿನ ಸದಸ್ಯರ ಸಹಕಾರ ಅಗತ್ಯ ಎಂದರು.

ಕಾರ್ಯದರ್ಶಿ ಆಶಾಮಲ್ಲೇಶ್, ಉಪಾಧ್ಯಕ್ಷೆ ಕುಸುಮಾರಾಜಶೇಖರ್, ಖಜಾಂಚಿ ಪಾರ್ವತಿಬಸವರಾಜು, ಸಹಕರ‍್ಯದರ್ಶಿ ಮಧುಮತಿಶಿವಕುಮಾರ್ ವೇದಿಕೆಯಲ್ಲಿದ್ದರು. ಗುಂಪಿನ ಹಿರಿಯಉಪಾಧ್ಯಕ್ಷರುಗಳಾದ ಹೇಮಲತಾ ಮತ್ತು ಮಂಜುಳಾ ಅವರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. ವಿದ್ಯಾದೇವಾನಂದ ಖ್ಯಾತ ಕವಿ, ಸಾಹಿತಿ ದಿ.ಎಸ್.ಎಚ್.ವೆಂಕಟೇಶ್‌ಮೂರ್ತಿರವರಿಗೆ ನುಡಿ-ನಮನವನ್ನು ಸಲ್ಲಿಸಿದರು.

ಸದಸ್ಯರಾದ ವೀಣಾಆರಾಧ್ಯ ಸ್ವಾಗತಿಸಿ, ಸ್ವರ್ಣಾ ವಂದಿಸಿ, ಲಾವಣ್ಯಚಂದ್ರಶೇಖರ್ ನಿರೂಪಿಸಿದರು. ಪುಷ್ಪಾಕುಮಾರಸ್ವಾಮಿ ಮತ್ತು ಉಷಾ ವೇದಘೋಷ ಮಾಡಿದ್ದು, ಕಾಂತಾಮಣಿ ಮತ್ತು ರೇಣುಕಾ ಪ್ರಾರ್ಥಿಸಿದರು. ಶರಣೆಸತ್ಯಕ್ಕನ ಪರಿಚಯವನ್ನು ಮಮತಾನೀಲಕಂಠ ಮಾಡಿದ್ದು, ಕವಿತಾ ಅತಿಥಿ ಪರಿಚಯಿಸಿದರು. ಶಶಿಕಲಾಮಲ್ಲಿಕಾರ್ಜುನ ಮತ್ತು ಮೋಹನಕುಮಾರಿ ತಂಡ ನಾಡಗೀತೆ ಹಾಡಿದರು.

ನಳಿನಾನಿರಂಜನ್ ತಂಡ ಜಾನಪದ ನೃತ್ಯ ಹಾಗೂ ಕವಿತಾಪರಮೇಶ್ ತಂಡದ ಸಾಂಸ್ಕೃತಿಕ ಕರ‍್ಯಕ್ರಮ ಗಮನ ಸೆಳೆಯಿತು. ವಿವಿಧ ಆಟೋಟಸ್ಪರ್ಧಾ ವಿಜೇತರಿಗೆ ಮಂಜುಳಾಯೋಗೀಶ್ ಬಹುಮಾನ ವಿತರಿಸಿದರು.

Leave a Reply

Your email address will not be published. Required fields are marked *