ಮಂಡ್ಯ : ಕರ್ನಾಟಕ ರಾಜ್ಯ ಪೌರ ನೌಕರರು ಹಾಗೂ ಹೊರಗುತ್ತಿಗೆ ಅಡಿಯಲ್ಲಿ ಕೆಲಸ ನಿರ್ವಹಣೆ ಮಾಡುವ ಶ್ರಮಜೀವಿಗಳಿಗೆ ನ್ಯಾಯಯುತ ಬೇಡಿಕೆಯನ್ನು ಈಡೇರಿಸಬೇಕೆಂದು ಕರ್ನಾಟಕ ರಾಜ್ಯ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರನ್ನು ಕರ್ನಾಟಕ ರಾಜ್ಯ ರೈತಸಂಘದ ಮುಖಂಡರಾದ ಮೋಹನ್ಕುಮಾರ್ ಉ|| ಕಿರಂಗೂರು ಪಾಪು ಒತ್ತಾಯಿಸಿದ್ದಾರೆ.
ಶ್ರೀರಂಗಪಟ್ಟಣದಲ್ಲಿ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ನಡೆಸುತ್ತಿರುವ ಪೌರ ನೌಕರರ ಅನಿರ್ದಿಷ್ಟಾವಧಿ ಮುಷ್ಕರಕ್ಕೂ ನಮ್ಮ ಬೆಂಬಲ ಇದೆ ಎಂದು ಹೇಳಿದ್ದಾರೆ.
ಪೌರ ನೌಕರರು ಹಗಲಿರುಳು ಸ್ವಚ್ಛ ಮಾಡುವುದರಿಂದಿಡಿದು ನೀರು ಬಿಡುವ ಕೆಲಸದವರೆಗೂ ಇನ್ನು ಅನೇಕ ಶ್ರಮದ ಕೆಲಸವನ್ನು ರಾತ್ರಿ -ಹಗಲು ಎನ್ನದೆ ನಿರ್ವಹಿಸುವರು. ಅಧಿಕಾರಿಗಳು ಸೂಚನೆ ನೀಡಿದ ಕ್ಷಣದಲ್ಲೂ ತಮ್ಮ ಕರ್ತವ್ಯಕ್ಕೆ ರೆಡಿಯಾಗಿ ಹಾಜರಾಗಿ ಕೆಲಸ ನಿರ್ವಹಿಸುವ ಶ್ರಮಜೀವಿಗೆ ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಸಾರ್ವಜನಿಕರಿಗೆ, ಪಟ್ಟಣದ ನಾಗರಿಕರಿಗೆ, ಜನಸಾಮಾನ್ಯರಿಗೆ ಯಾವುದೇ ತೊಂದರೆಯಾಗದೆ ನೀರು, ಸ್ವಚ್ಛತೆ ಹಾಗೂ ಗಾರ್ಡನ್ ಕೆಲಸಗಳು, ಲೋಡರ್, ಕ್ಲೀನಿಂಗ್ ಕೆಲಸಗಳು, ಸ್ಯಾನಿಟೈಸರಿ, ಯುಜಿಡಿ ಇನ್ನೂ ಕೆಲಸಗಳನ್ನು ಪರಿಪಾಲನೆ ಮಾಡಿ ಪಟ್ಟಣದ ನಾಗರಿಕರಿಗೆ, ಗ್ರಾಮಗಳ ಜನರಿಗೆ ಸ್ವಚ್ಛವಾಗಿರಿಸುತ್ತಾರೆ ಹಾಗೂ ನೀರಿಗೂ ಮತ್ತು ಇನ್ನಿತರೆ ಕೆಲಸಕಾರ್ಯಗಳಿಗೂ ತೊಂದರೆಯಾಗದೆ ಶ್ರಮ ವಹಿಸಿ ಹಗಲಿರುಳು ದುಡಿಯುತ್ತಾರೆ.

ಇಂಥ ಶ್ರಮಜೀವಿಗಳಿಗೆ ಖಾಯಂ ಹಾಗೂ ಹೊರಗುತ್ತಿಗೆ ನೌಕರರಿಗೆ ಗೌರವಯುತವಾಗಿ, ನ್ಯಾಯಯುತವಾಗಿ ಸರ್ಕಾರದಿಂದ ಉತ್ತಮ ಸಂಬಳ ವಿತರಣೆ ಮಾಡಿ, ಹೊರಗುತ್ತಿಗೆ ನೌಕರರನ್ನು ಖಾಯಂ ಮಾಡಿ ಅವರಿಗೆ ಸಿಗಬೇಕಾದ ಹಕ್ಕು, ಮೂಲಭೂತ ಸವಲತ್ತುಗಳನ್ನು ಸೇರಿದಂತೆ ಇಎಸ್ಐ, ಪಿಎಫ್ಐಗಳನ್ನು ನೀಡಿ ಅವರ ಕುಟುಂಬಕ್ಕೆ ಸೂರಿ ಇಲ್ಲದ ಜನರಿಗೆ ಸೂರು ಕಲ್ಪಿಸಬೇಕು. ಅವರ ಕುಟುಂಬದ ಆರೋಗ್ಯ, ಮಕ್ಕಳ ವಿದ್ಯಾಭ್ಯಾಸ, ಮದುವೆ ಮುಂಜಿಗಳು, ಹಬ್ಬ ಹರಿದಿನಗಳು, ಖಾಸಗಿ ಸಾಲಕ್ಕೆ ಕೈಬಡ್ಡಿ ಕಟ್ಟಿ ಇವೆಲ್ಲವನ್ನೂ ಅಲ್ಪಸ್ವಲ್ಪ ಸಂಬಳದಲ್ಲಿ ತೂಗಿಸಿಕೊಂಡು ಸಂಸಾರ ಸಾಗಿಸಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಅವರ ಬದುಕು ದುಃಸ್ತರವಾಗಿದೆ.

ನಗರ, ಪಟ್ಟಣಗಳನ್ನು ಸ್ವಚ್ಛ ಮಾಡಿ ಜನಸಾಮಾನ್ಯರು, ನಾಗರಿಕರಿಗೆ ನೆಮ್ಮದಿಯಾಗಿ ನಿದ್ದೆ ಮಾಡಲು ಹಗಲಿರುಳು ಶ್ರಮ ವಹಿಸುತ್ತಾರೆ. ಆದರೆ ಇವರ ಬದುಕು ಹಸನಾಗಲು ಸರ್ಕಾರ ಮುಂದಾಗಬೇಕು. ಅವರ ನ್ಯಾಯಯುತ ಬೇಡಿಕೆಯನ್ನು ಈಡೇರಿಸಬೇಕೆಂದು ಮಾನ್ಯ ಮುಖ್ಯಮಂತ್ರಿಗಳನ್ನು ಪತ್ರಿಕಾ ಪ್ರಕಟಣೆಯಲ್ಲಿ ಕಳಕಳಿಯಿಂದ ಕಿರಂಗೂರು ಪಾಪು ಒತ್ತಾಯಿಸಿದ್ದಾರೆ. ಒಂದು ವೇಳೆ ಬೇಡಿಕೆ ಈಡೇರಿಸದಿದ್ದರೆ ಶ್ರಮಜೀವಿಗಳ ಜೊತೆಗೂಡಿ ಕಾನೂನು ಹೋರಾಟಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.