ಕೊರಟಗೆರೆ : ಹೊಟ್ಟೆ ನೋವಿನಿಂದ ಕಳೆದ ಎರಡು ದಿನಗಳಿಂದ ಕೊರಟಗೆರೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಭಾನುವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಕೊಂಡು ಮನೆಗೆ ಹೋದವನು, ಇದ್ದಕ್ಕಿದ್ದಂತೆ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೊರಟಗೆರೆ ಪಟ್ಟಣದ ಕುಂಬಾರ ಬೀದಿಯ ರಾಮಯ್ಯನವರ ಮಗ ಗಾರೆ ನಾಗರಾಜಪ್ಪ (45 ವರ್ಷ) ಎಂಬುವರೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದಾನೆ.

ಮೃತ ವ್ಯಕ್ತಿ ಗಾರೆ ನಾಗರಾಜಪ್ಪ ಕಳೆದ ಎರಡು ದಿನಗಳಿಂದ ಹೊಟ್ಟೆ ನೋವಿನಿಂದ ಕೊರಟಗೆರೆ ಆಸ್ಪತ್ರೆಯಲ್ಲಿ ದಾಖಲಾಗಿ, ಕೊರಟಗೆರೆಯಲ್ಲಿ ಸ್ಕ್ಯಾನಿಂಗ್ ಇಲ್ಲದಿರುವುದರಿಂದ ತುಮಕೂರಿನಲ್ಲಿ ಪರೀಕ್ಷೆ ಮಾಡಿಸಿಕೊಂಡು ವೈದ್ಯರಿಗೆ ತೋರಿಸಿ ಡಿಸ್ಚಾರ್ಜ್ ಮಾಡಿಸಿಕೊಂಡು ಮನೆಗೆ ಹೋದವನು. ಮನೆಯಲ್ಲಿದ್ದ ಹೆಂಡತಿ ಹಾಗೂ ಮಕ್ಕಳನ್ನು ತಾನೇ ಕುಂಟು ನೆಪ್ಪಹೊಡ್ಡಿ ದಿನಸಿ ಅಂಗಡಿಗೆ ಸೇರಿದಂತೆ ಇನ್ನಿತರ ಕಡೆ ಕಳುಹಿಸಿ ತಾನು ಒಬ್ಬನೇ ಇದ್ದ ಸಂದರ್ಭದಲ್ಲಿ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಗಾರೆ ನಾಗರಾಜಪ್ಪನ ಸಾವಿಗೆ ಅತಿ ಹೊಟ್ಟೆನೋವೇ ಕಾರಣವಾಗಿರಬಹುದು ಎನ್ನಲಾಗಿದ್ದು, ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ಅನಿಲ್ ಹಾಗೂ ಪಿಎಸ್ಐ ಚೇತನ್ ಗೌಡ ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.