ಕೊರಟಗೆರೆ:- ಮನುಷ್ಯನ ದುರಾಸೆಯು ಈ ಸುಂದರ ಪ್ರಕೃತಿಯನ್ನು ಹಾಳುಗೆಡುವುತ್ತಿದೆ. ಈಗ ಕಾಡುಗಳಿಲ್ಲದ, ಕಾಡು ಪ್ರಾಣಿಗಳಿಲ್ಲದ ಪರಿಸರವು ಸ್ಮಶಾನಕ್ಕಿಂತ ಭೀಕರವಾಗಿ ಕಾಣುತ್ತದೆ ಎಂದು ಪ್ರಾಂಶುಪಾಲ ಈರಪ್ಪನಾಯಕ ಡಿ.ಎನ್ ಅಭಿಪ್ರಾಯಪಟ್ಟರು.
ಕೊರಟಗೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ಸುಸ್ಥಿರ ಪರಿಸರ, ಸ್ವಚ್ಛತೆ ಹಾಗೂ ಹಸಿರನ್ನು ಉಳಿಸುವ ಕ್ರಮ ಕೈಗೊಳ್ಳಲು ಇಂದೊಂದು ಪರಿಪೂರ್ಣ ದಿನವಾಗಿದೆ. ಪ್ಲಾಸ್ಟಿಕ್ ತ್ಯಾಜ್ಯ, ಗಾಳಿ, ಜಲ ಮಾಲಿನ್ಯ ಕಾಡುಗಳನ್ನು ಕಡಿಯುವುದು, ಭೂಮಿಯನ್ನು ಅಗೆಯುವುದು ಇಂತಹ ಚಟುವಟಿಕೆಗಳು ಪರಿಸರ ನಾಶಕ್ಕೆ ಮೂಲವಾಗುತ್ತಿವೆ ಎಂದು ಹೇಳಿದರು.
ಇಕೋ ಕ್ಲಬ್ ಸಂಚಾಲಕ ನಾಗೇಂದ್ರಪ್ಪ.ಜಿ ಮಾತನಾಡಿ, ಪರಿಸರ ಎನ್ನುವುದು ನಮ್ಮ ಆಯ್ಕೆಯಲ್ಲ, ನಮ್ಮ ಜವಬ್ದಾರಿ ಎನ್ನುವುದನ್ನು ವಿಶ್ವ ಪರಿಸರ ದಿನ ನೆನಪಿಸುತ್ತದೆ. ಇವತ್ತು ನಾವು ಗಿಡ ನೆಟ್ಟರೆ ನಾಳೆ ಹಾಗೂ ನಮ್ಮ ಭವಿಷ್ಯ ಹಸಿರಾಗಿರುತ್ತದೆ, ನಮ್ಮ ಭವಿಷ್ಯ ಉಜ್ವಲವಾಗಿರುತ್ತದೆ ಎಂದು ಹೇಳಿದರು.

ಐಕ್ಯೂಎಸಿ ಸಂಚಾಲಕಿ ಡಾ.ದೀಪಾ ಡಿಎಸ್ ಮಾತನಾಡಿ, ಮಾಲಿನ್ಯ ಮತ್ತು ನೈಸರ್ಗಿಕ ಸಂಪನ್ಮೂಲಗಳ ಕೊರತೆಯಿಲ್ಲದ ಸುಂದರ ಜಗತ್ತನ್ನು ಸೃಷ್ಠಿಸುವುದು ವಿಶ್ವ ಪರಿಸರ ದಿನದ ಹಿಂದಿನ ಉದ್ದೇಶವಾಗಿದೆ. ಪ್ಲಾಸ್ಟಿಕ್ ನಿಷೇಧ, ಹೆಚ್ಚು ಮರಗಳು ಮತ್ತು ಸಸ್ಯಗಳನ್ನು ನೆಡುವುದು, ನೀರನ್ನು ಉಳಿಸುವುದು, ಮರುಬಳಕೆ ಮಾಡುವುದು ಮತ್ತು ವನ್ಯ ಜೀವಿಗಳು, ಪ್ರಾಣಿಗಳನ್ನು ಉಳಿಸುವುದು ಉತ್ತಮ ಪರಿಸರ ನಿರ್ಮಾಣಕ್ಕೆ ಕಾರಣವಾಗುವ ಕೆಲವು ಹಂತಗಳಾಗಿವೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ವೇದಾಲಕ್ಷ್ಮೀ, ಕಾಲೇಜಿನ ಎಲ್ಲಾ ಪ್ರಾಧ್ಯಾಪಕರು, ಅತಿಥಿ ಉಪನ್ಯಾಸಕರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
– ಶ್ರೀನಿವಾಸ್ , ಕೊರಟಗೆರೆ.