ಕೊರಟಗೆರೆ– ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ರವರು ತುಮಕೂರು ಜಿಲ್ಲೆಯ ಮಧುಗಿರಿ, ಶಿರಾ, ಪಾವಗಡ ಮತ್ತು ಕೊರಟಗೆರೆ ತಾಲ್ಲೂಕುಗಳನ್ನು ಒಳಗೊಂಡ ಸಂಘಟನಾ ಜಿಲ್ಲೆಗೆ ಎಂ.ಎಲ್.ಸಿ. ಚಿದಾನಂದ್ ಅವರನ್ನು ನೂತನ ಜಿಲ್ಲಾ ಅಧ್ಯಕ್ಷರಾಗಿ ಘೋಷಿಸಿದ್ದು, ಅವರು ಅಧಿಕಾರ ಸ್ವೀಕರಿಸಿದ ನಂತರ ಮೊದಲ ಬಾರಿಗೆ ಕೊರಟಗೆರೆ ತಾಲ್ಲೂಕಿಗೆ ಭಾವಪೂರ್ಣ ಭೇಟಿ ನೀಡಿದರು.
ಅವರು ಮೊದಲವಾಗಿ ಕೊರಟಗೆರೆಯ ಪ್ರಸಿದ್ಧ ಶ್ರೀ ಸಸ್ಯಕಾಶಿ ಸಿದ್ಧರ ಬೆಟ್ಟಕ್ಕೆ ಭೇಟಿ ನೀಡಿ ಪೀಠಾಧ್ಯಕ್ಷರಾದ ಶ್ರೀ ಶಿವಾನಂದ ಶಿವಾಚಾರ್ಯರಿಂದ ಆಶೀರ್ವಾದ ಪಡೆದರು. ಬಳಿಕ ಎಲೆರಾಂಪುರದ ಕುಂಚಿಟಿಗ ಮಹಾಸಂಸ್ಥಾನ ಮಠಕ್ಕೆ ಭೇಟಿ ನೀಡಿ ಶ್ರೀ ಡಾ. ಹನುಮಂತನಾಥ ಸ್ವಾಮೀಜಿ ಅವರ ಜೊತೆ ಮತಕ್ಷೇತ್ರದ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಿದರು.

ಇದಾದ ಬಳಿಕ ಕೋಳಾಲ ಹೋಬಳಿಯ ಬಿಜೆಪಿ ಕಾರ್ಯಕರ್ತರು ಎಲೆರಾಂಪುರ ಮಠದ ಆವರಣದಲ್ಲಿ ಭಾರೀ ಹೂವಿನ ಹಾರ ಹಾಕಿ ಬೃಹತ್ ಸ್ವಾಗತ ನೀಡಿದರು. ಕಾರ್ಯಕ್ರಮದಲ್ಲಿ ಹಿರಿಯ ಮುಖಂಡರಾದ ಹನುಮಂತೇಗೌಡ, ಪವನ್ ಕುಮಾರ್, ಟಿ.ಎನ್. ರುದ್ರೇಶ್, ಶಿವಕುಮಾರ್, ಉಮೇಶ್, ನಂಜುಂಡಪ್ಪ, ಗುರುದತ್, ನಾಗಭೂಷಣ್ ಮತ್ತಿತರರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಚಿದಾನಂದ್ ಅವರು, “ಇಂದಿನ ಲೋಕಸಭಾ ಚುನಾವಣೆಯಲ್ಲಿ ಕೊರಟಗೆರೆ ವಿಧಾನಸಭಾ ವ್ಯಾಪ್ತಿಯಿಂದ ಎನ್.ಡಿ.ಎ ಅಭ್ಯರ್ಥಿ ವಿ. ಸೋಮಣ್ಣ ಅವರಿಗೆ ಅತ್ಯಧಿಕ ಮತಗಳು ಲಭಿಸಿದ್ದು, ಬಿಜೆಪಿಯ ಬಲಿಷ್ಠ ಸಂಘಟನೆಗೆ ಸಾಕ್ಷಿ. ಮುಂದಿನ ಚುನಾವಣೆಯಲ್ಲಿ ಕೊರಟಗೆರೆ ಕ್ಷೇತ್ರದಲ್ಲಿ ಬಿಜೆಪಿ ವಿಜಯಶಾಲಿಯಾಗುವುದು ಖಚಿತ” ಎಂದು ನಂಬಿಕೆ ವ್ಯಕ್ತಪಡಿಸಿದರು.
ವರದಿ ನರಸಿಂಹಯ್ಯ ಹೊಸಕೋಟೆ