ಕೊರಟಗೆರೆ, ಜೂನ್ 9: ಪಾವಗಡ ಮತ್ತು ಮಧುಗಿರಿ ಮಾರ್ಗವಾಗಿ ಬೆಂಗಳೂರಿಗೆ ಸಂಚರಿಸುವ ಕೆಎಸ್ಆರ್ಟಿಸಿ ಬಸ್ಗಳು ಕೊರಟಗೆರೆ ಪಟ್ಟಣಕ್ಕೆ ನಿಲ್ಲದೆ ಹೋಗುತ್ತಿರುವುದು ಹಾಗೂ ಬೈಪಾಸ್ ಮಾರ್ಗದಿಂದ ಮಾತ್ರ ಸಂಚರಿಸುತ್ತಿರುವುದು ಸಾರ್ವಜನಿಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಈ ಹಿನ್ನೆಲೆ ಪ್ರಯಾಣಿಕರು ಬೆಳಗ್ಗೆ 5ರಿಂದಲೇ ಕೊರಟಗೆರೆಯಲ್ಲಿ ಬಸ್ಸುಗಳನ್ನು ತಡೆದು ನಿಲ್ಲಿಸಿ ಪ್ರತಿಭಟಿಸಿದರು.
ಪ್ರತಿದಿನ ಸಾರ್ವಜನಿಕರು, ವಿದ್ಯಾರ್ಥಿಗಳು, ಮಹಿಳೆಯರು, ಕೂಲಿ ಕಾರ್ಮಿಕರು ಈ ಸಮಸ್ಯೆ ಎದುರಿಸುತ್ತಿದ್ದು, ತಾಲ್ಲೂಕು ಕೇಂದ್ರದಂತೂ ಬಸ್ ನಿಲ್ಲದಿರುವುದು ತೀವ್ರ ಅಸೌಕರ್ಯ ಉಂಟುಮಾಡಿದೆ ಎಂದು ಸಾರ್ವಜನಿಕರು ತಿಳಿಸಿದರು.

ಪ್ರತಿಭಟನೆಯ ಸಂದರ್ಭದಲ್ಲೇ ಪೊಲೀಸ್ ಸಿಬ್ಬಂದಿ ಹಾಗೂ ಪ್ರಯಾಣಿಕರ ನಡುವೆ ಮಾತಿನ ಚಕಮಕಿ ಕೂಡ ನಡೆಯಿತು. ಬಸ್ ಚಾಲಕರ ದುರ್ವ್ಯವಹಾರ, ಸಮಯ ಮೀರಿ ಚಲನೆಯು, ನಿಲ್ಲದಿರುವುದು, ಹಾಗು ಸಾರಿಗೆ ನೌಕರರಿಂದ ದೌರ್ಜನ್ಯ ಸೇರಿದಂತೆ ಹಲವಾರು ಆರೋಪಗಳು ಕೇಳಿ ಬಂದವು.
🚍 ಸಾರ್ವಜನಿಕರ ಬೇಡಿಕೆ:
- ಪಾವಗಡ-ಮಧುಗಿರಿ ಮಾರ್ಗದ ಎಲ್ಲಾ ಬಸ್ಗಳು ತಾಲ್ಲೂಕು ಕಛೇರಿ ಬಸ್ ನಿಲ್ದಾಣದಲ್ಲಿ ನಿಲ್ಲಲಿ
- ಬೆಂಗಳೂರಿಗೆ ಹೋಗುವ ಪ್ರಯಾಣಿಕರಿಗೆ ಬೆಳಿಗ್ಗೆ 4ರಿಂದ 8ರ ವರೆಗೆ ಸರಿಯಾದ ಸೇವೆ ಒದಗಲಿ
- ಕಂಡಕ್ಟರ್ಗಳಿಂದ ದೌರ್ಜನ್ಯ ತಪ್ಪಿಸಬೇಕು, ವಿದ್ಯಾರ್ಥಿನಿಯರಿಗೆ ವಿಶೇಷ ಸೌಕರ್ಯ ಕಲ್ಪಿಸಬೇಕು
- ಬೈಪಾಸ್ ಮಾರ್ಗದಲ್ಲಿ ಮಾತ್ರ ಸಂಚರಿಸುವ ಬಸ್ಗಳಿಗೆ ತಡೆ ವಿಧಿಸಿ, ಪಟ್ಟಣದೊಳಗೆ ನಿಲ್ಲಿಸುವಂತೆ ಕ್ರಮ ವಹಿಸಬೇಕು

ಸ್ಥಳೀಯರ ಅಭಿಪ್ರಾಯ:
🟦 ಹೇಮಲತಾ ಡಿ, ತಾಲ್ಲೂಕು ಕರವೇ ಮಹಿಳಾ ಘಟಕ ಅಧ್ಯಕ್ಷೆ:
“ಪ್ರತಿದಿನ ನಮ್ಮ ಹೆಣ್ಣುಮಕ್ಕಳು ಬೆಂಗಳೂರಿಗೆ ವಿದ್ಯಾಭ್ಯಾಸಕ್ಕೆ ಹೋಗುತ್ತಿದ್ದಾರೆ. ತಾಲ್ಲೂಕು ಕಚೇರಿ ಬಳಿ ನಿಲ್ಲದ ಬಸ್ಗಳಿಂದ ನಮ್ಮ ಮಕ್ಕಳು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಗೃಹಸಚಿವರ ಕ್ಷೇತ್ರದಲ್ಲಿ ಈ ರೀತಿಯ ಅನ್ಯಾಯ ನಡೆಯಬಾರದು. ಜನಪ್ರಿಯ ಶಾಸಕರು ಹೆಚ್ಚಿನ ಬಸ್ಗಳನ್ನು ಒದಗಿಸಬೇಕು.”
🟦 ತೀರ್ಥೇಶ್, ಪಿಎಸ್ಐ, ಕೊರಟಗೆರೆ:
“ಈ ಬಗ್ಗೆ ಈಗಲೇ ತಿಳಿಯಿತು. ಈ ಸಮಸ್ಯೆ ಮರುಕಳಿಸದಂತೆ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ.”
🟦 ಶಾಂತರಾಜು, ಪ್ರಯಾಣಿಕ:
“ರಾಜ್ಯದ ಪ್ರತಿಷ್ಠಿತ ಕ್ಷೇತ್ರವೆಂದು ಹೆಸರಾದರೂ, ಜನಪ್ರತಿನಿಧಿಗಳು ಜನಸಮಸ್ಯೆಗಳನ್ನು ಲಘುವಾಗಿ ತೆಗೆದುಕೊಳ್ಳುತ್ತಿದ್ದಾರೆ. ಸಮಸ್ಯೆಗಳ ಕುರಿತು ತಲೆಕೆಡಿಸಿಕೊಳ್ಳದ ಸ್ಥಿತಿಯಿದೆ.”
ಸಾರ್ವಜನಿಕರು ಸರಕಾರದಿಂದ ಶೀಘ್ರ ಕ್ರಮ ನಿರೀಕ್ಷಿಸುತ್ತಿದ್ದು, ಬಸ್ ನಿಲ್ದಾಣ ವ್ಯವಸ್ಥೆ ಸುಧಾರಣೆಯಾಗಿ, ಅತ್ಯಾವಶ್ಯಕ ಸಾರಿಗೆ ಸೌಲಭ್ಯಗಳನ್ನು ಸಮರ್ಪಕವಾಗಿ ಕಲ್ಪಿಸಬೇಕು ಎಂಬ ಒತ್ತಾಯಿಸಿದ್ದಾರೆ.
– ಶ್ರೀನಿವಾಸ್, ಕೊರಟಗೆರೆ.