ಕೊರಟಗೆರೆ-ರಾಜ್ಯದ ಅಭಿವೃದ್ಧಿಗೆ ಪರಮೇಶ್ವರ್ ಮುಖ್ಯ ಮಂತ್ರಿಯಾಗಬೇಕು- ಸ್ವಾಮೀಜಿ-ಎಲೆರಾಂಪುರ ಶ್ರೀಗಳ ಜನ್ಮ ವರ್ಧಂತಿ ಕಾರ್ಯಕ್ರಮದಲ್ಲಿ ಶ್ರೀಗಳ ಆಶೀರ್ವಾದ

ಕೊರಟಗೆರೆ:- ರಾಜ್ಯದ ಸರ್ವೋತೋಮುಖ ಅಭಿವೃದ್ಧಿಗೆ ಪರಮೇಶ್ವರ್‌ರಂತಹ ಸಜ್ಜನ ರಾಜಕಾರಣಿ ಅವಶ್ಯಕತೆಯಿದೆ. ಮುಂಬರುವ ದಿನಗಳಲ್ಲಿ ತುಮಕೂರು ಜಿಲ್ಲೆಯಿಂದ ಗೃಹಮಂತ್ರಿ ಡಾ.ಜಿ ಪರಮೇಶ್ವರ್‌ರವರು ರಾಜ್ಯದ ಮುಖ್ಯಮಂತ್ರಿಯಾಗಲಿ ಎಂಬುದು ನನ್ನ ಬಯಕೆ ಎಂದು ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ಹನುಮಂತನಾಥ ಸ್ವಾಮೀಜಿ ಕುತೂಹಲ ಹೇಳಿಕೆ ನೀಡಿದರು.

          ಕೊರಟಗೆರೆ ತಾಲ್ಲೂಕಿನ ಎಲೆರಾಂಪುರ ಶ್ರೀಮಠದಲ್ಲಿ ಆಯೋಜಿಸಿದ ಪರಮಪೂಜ್ಯ ಡಾ.ಶ್ರೀಹನುಮಂತನಾಥ ಸ್ವಾಮೀಜಿ ಅವರ 43ನೇ ಜನ್ಮ ವರ್ಧಂತಿಯ ಕಾರ್ಯಕ್ರಮದಲ್ಲಿ ಗೃಹ ಸಚಿವರಿಂದ ಗೌರವ ಸ್ವೀಕರಿಸಿ ಮಾತನಾಡಿ, ಶ್ರೀಮಠ ಸ್ಥಾಪನೆಯಾಗಿ 14 ವರ್ಷಗಳು ಕಳೆದಿದೆ. ಅಂದಿನಿಂದಲೂ ಸಂಸ್ಕಾರ ಶಿಬಿರ, ಆರೋಗ್ಯ ಶಿಬಿರ, ರಕ್ತದಾನ ಶಿಬಿರ ಈಗೇ ಹಲವು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ ಎಂದು ಹೇಳಿದರು.

              ಜಾತಿ ಮತವೆನ್ನದೆ ಬಡಕುಟುಂಬದ ಎಲ್ಲಾ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶ್ರೀಮಠ ಸಿದ್ದವಾಗಿದೆ. ಸಂಪೂರ್ಣವಾಗಿ ಮುಂದಿನ ದಿನಗಳಲ್ಲಿ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕಾರ್ಯಕ್ರಮಗಳ ಪೂರೈಕೆಗೆ ಚಿಂತನೆಯನ್ನು ನಡೆಸಿದ್ದು, ರಾಜ್ಯದಲ್ಲಿ ಮಠ ಮಾನ್ಯಗಳು ಮನಸ್ಸುಗಳನ್ನು ಕಟ್ಟುವಂತಹ ಕೆಲಸ ಮಾಡುತ್ತಿದೆ.  ಸಿದ್ದರಬೆಟ್ಟ ಶ್ರೀಗಳು ಮತ್ತು ಗೃಹ ಸಚಿವರು, ಭಕ್ತ ಸಮೂಹ ಜನ್ಮ ವರ್ಧಂತಿಯಂದು ಶುಭ ಹಾರೈಸಿ ಮುಂದಿನ ಧಾರ್ಮಿಕ ಕಾರ್ಯಕ್ರಮಗಳಿಗೆ ಶಕ್ತಿಯನ್ನು ತುಂಬಿದ್ದಾರೆ ಎಂದರು.

            ಗೃಹ ಸಚಿವ ಡಾ.ಜಿ ಪರಮೇಶ್ವರ ಮಾತನಾಡಿ, ಧರ್ಮ ಜಾಗೃತಿ ಜಗತ್ತಿಗೆ ಅವಶ್ಯಕವಾಗಿ ಬೇಕಿದೆ. ಮನುಕುಲ ಧರ್ಮದ ದಾರಿಯಿಂದ ಹಿಂದೆ ಸರಿದಿದೆ, ಮನುಷ್ಯ ತನ್ನನ್ನೇ ತಾನು ನಾಶ ಮಾಡಿಕೊಳ್ಳುವಂತಹ ಹಂತಕ್ಕೆ ತಲುಪಿರುವುದು ವಿಷಾಧನೀಯ ಎಂದು ಹೇಳಿದರು.

ಮಠ ಮಾನ್ಯಗಳಿಂದ ಮಾತ್ರ ಧರ್ಮ ಜೀವಂತವಾಗಿದೆ. ಬೇಸಿಗೆಯಲ್ಲಿ ಶ್ರೀಮಠದಲ್ಲಿ ನಡೆದ 10 ದಿನದ ಸಂಸ್ಕಾರ ಶಿಬಿರ ಕಾರ್ಯಕ್ರಮ ನಡೆದಿದ್ದು, ಶಿಬಿರದಲ್ಲಿ ಪಾಲ್ಗೊಂಡ ಮಕ್ಕಳು ಸಮಾಜದಲ್ಲಿ ಸಂಸ್ಕಾರವಂತರಾಗಿ ಹೊರಹೊಮ್ಮಬೇಕು. ಶ್ರೀಮಠದ ಜೊತೆ ಭಕ್ತನಾಗಿ ಸದಾ ಜೊತೆಗಿದ್ದು ಪ್ರಮಾಣಿಕ ಸೇವೆ ಸಲ್ಲಿಸುತ್ತೇನೆ. ದಿನನಿತ್ಯದ ವಿದ್ಯಾಮಾನಗಳನ್ನು ಪ್ರತಿನಿತ್ಯ ಗಮನಿಸುತ್ತಿದ್ದೇನೆ, ಧರ್ಮ ಬಿಟ್ಟು ಹೋದವರಿಗೆ ಕಾಲವೇ ಉತ್ತರಿಸುತ್ತದೆ ಎಂದು ಹೇಳಿದರು.

ಸಿದ್ದರಬೆಟ್ಟದ ಶ್ರೀವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಹಿಂದೆ ಅನಕ್ಷರಸ್ಥರಿದ್ದರು ಆದರೆ ಧರ್ಮ ಜಾಗೃತವಾಗಿತ್ತು, ಇಂದು ಅಕ್ಷರ ಸಂಖೈ ಹೆಚ್ಚಿದೆ ಆದರೆ ಅಧರ್ಮದಲ್ಲಿ ನಡೆಯುವವರ ಸಂಖೈ ಹೆಚ್ಚಾಗಿದೆ ಇದೊಂದು ವಿಷಾಧದ ಸಂಗತಿ. ಮಠ ಮತ್ತು ಮಠಾಧೀಶರಿಂದ ಧರ್ಮ ಉಳಿಯಬೇಕಿದೆ. ಹಿಂದಿಗಿಂತ ಈಗ ಮಠಾಧೀಶರ ಮೇಲೆ ಜವಾಬ್ದಾರಿ ಹೆಚ್ಚಿದೆ ಎಂದು ಹೇಳಿದರು.

ನನಗೆ ಮಠ ಇತ್ತು ಆದರೆ ಹನುಮಂತನಾಥ ಶ್ರೀಗಳಿಗೆ ಯಾವುದೇ ವ್ಯವಸ್ಥೆ ಇರಲಿಲ್ಲ ಆದರೆ ಯಾವುದೇ ಇತಿಹಾಸವಿಲ್ಲದ ಜಾಗದಲ್ಲಿ ಪವಾಡ ರೀತಿಯಲ್ಲಿ ಮಠ ನಿರ್ಮಾಣ ಮಾಡಿ ಧಾರ್ಮಿಕ ಕ್ಷೇತ್ರವನ್ನಾಗಿ ಮಾಡಿರುವುದು ಅವಿಸ್ಮರಣೀಯ ಎಂದು ಹೇಳಿದರು.

         ಈ ಸಂದರ್ಭದಲ್ಲಿ ಜಿ.ಪಂ ಸಿಇಓ ಜಿ.ಪ್ರಭು, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೆ.ವಿ ಆಶೋಕ್, ಶ್ರೀಮಠದ ದಾನಿ ನರಸಿಂಹಮೂರ್ತಿ, ಗೃಹ ಸಚಿವರ ವಿಶೇಷ ಅಧಿಕಾರಿ ಡಾ.ಕೆ ನಾಗಣ್ಣ, ಕೌಶಲ್ಯಾಭಿವೃದ್ಧಿ ನಿಗಮ ಮಂಡಳಿ ಮಾಜಿ ಅಧ್ಯಕ್ಷ ಮುರುಳಿಧರ ಹಾಲಪ್ಪ, ಕೋಳಾಲ ಮಾಜಿ ಜಿಪಂ ಸದಸ್ಯ ಶಿವರಾಮಯ್ಯ, ಗ್ಯಾರಂಟಿ ಸಮಿತಿ ಅಧ್ಯಕ್ಷ ವೆಂಕಟೇಶ್, ಗೃಹ ಮಧುಗಿರಿ ಎಸಿ ಗೋಟೂರು ಶಿವಪ್ಪ, ತಹಶೀಲ್ದಾರ್ ಮಂಜುನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶ್ವತ್ಥ್ ನಾರಾಯಣ್, ಅರಕೆರೆ ಶಂಕರ್, ಮೈಲಾರಪ್ಪ ಸೇರಿದಂತೆ ಇತರರು ಇದ್ದರು. 

ಸ್ವಾಗತ ಕಮಾನು ಶಂಕುಸ್ಥಾಪನೆ ಮತ್ತು ರಸ್ತೆ ಉದ್ಘಾಟನೆ:-

ಲೋಕೋಪಯೋಗಿ ಇಲಾಖೆಯಿಂದ ಆಯೋಜಿಸಿದ್ದ 25 ಲಕ್ಷ ವೆಚ್ಚದ ರಸ್ತೆ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ, 3 ಕೋಟಿ ವೆಚ್ಚದಲ್ಲಿ ಎಲೆರಾಂಪುರದಿಂದ ತಿಮ್ಮಸಂದ್ರರವೆರೆಗೆ ನಿರ್ಮಾಣಗೊಂಡ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಉದ್ಘಾಟಿಸಿದ್ದು ಒಟ್ಟು 3.25 ಕೋಟಿ ವೆಚ್ಚದ ವಿವಿಧ ಕಾಮಗಾರಿಗೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಮಂಗಳವಾರ ಚಾಲನೆ ನೀಡಿದರು.

– ಶ್ರೀನಿವಾಸ್‌ ಆರ್.

Leave a Reply

Your email address will not be published. Required fields are marked *