ಕೊರಟಗೆರೆ:- ಸಿದ್ದರಬೆಟ್ಟ ರೋಟರಿ ಸಂಸ್ಥೆ ಸಾಮಾಜಿಕ ಚಿಂತನೆಯನ್ನು ಒಳಗೊಂಡು ಕಾಮಧೇನು ಯೋಜನೆ ಪ್ರಾರಂಭಿಸಿ, 220ಕ್ಕೂ ಹೆಚ್ಚಿನ ರೈತಾಪಿ ಕುಟುಂಬದ ಆರ್ಥಿಕತೆಯ ಜೀವನಕ್ಕೆ ಬೆಳಕನ್ನು ಚೆಲ್ಲಿದೆ ಎಂದು ಸಿದ್ದರಬೆಟ್ಟ ಶ್ರೀಮಠದ ಶ್ರೀವೀರಭದ್ರ ಶಿವಾಚಾರ್ಯ ಸ್ವಾಮೀಜಿ ಪ್ರಶಂಸಿದರು.
ರೋಟರಿ ಸಂಸ್ಥೆ ರಾಜ್ಯಪಾಲ ಆರ್.ಟಿ.ಎನ್ ಮಹಾದೇವ್ಪ್ರಸಾದ್ ಕೊರಟಗೆರೆ ತಾಲ್ಲೂಕಿನ ಸಿಎನ್ ದುರ್ಗಾ ಹೋಬಳಿ ಸಿದ್ದರಬೆಟ್ಟ ರೋಟರಿ ಸಂಸ್ಥೆ ಕಚೇರಿಗೆ ಅಧಿಕೃತ ಭೇಟಿ ಸಂದರ್ಭದಲ್ಲಿ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ದಿವ್ಯಸಾನಿಧ್ಯ ವಹಿಸಿ ಮಾತನಾಡಿ, ಸಂಸ್ಥೆ ರಾಜ್ಯಪಾಲರಾದ ಮಹಾದೇವ್ ಪ್ರಸಾದ್ ಅವರ ದೂರದೃಷ್ಟಿಯ ನಾಯಕತ್ವದ ಸಿದ್ದರಬೆಟ್ಟ ರೋಟರಿ ಸಂಸ್ಥೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ಗ್ರಾಮೀಣ ಭಾಗದ ಜನಕ್ಕೆ ಮಳೆ ಕೈಕೊಟ್ಟು ಬರಗಾಲ ಎದುರಾದ ಸಂದರ್ಭದಲ್ಲಿ ರೋಟರಿ ಸಂಸ್ಥೆಯಿಂದ ನೀಡಿರುವ ಹಸುಗಳು ಕುಟುಂಬಗಳಿಗೆ ಶ್ರೀರಕ್ಷೆಯಾಗಿದೆ. ಜಿಲ್ಲೆಯಲ್ಲಿ ನೀರಿನ ಅಂತರ್ಜಲ ಮಟ್ಟ ವೃದ್ಧಿಗೆ ಬೋರ್ವೆಲ್ ರಿಚಾರ್ಜ್ ಯೋಜನೆ ಸಹಕಾರಿಯಾಗಿದೆ. ಪ್ರತಿವರ್ಷ ಪ್ರತಿ ಬೋರ್ವೆಲ್ಗೆ 10ಸಾವಿರ ನೀಡುತ್ತಿದ್ದು, ರೋಟರಿ ಅಧ್ಯಕ್ಷ ರಘು ಡಯಾಲಿಸಿಸ್ ಕೇಂದ್ರವನ್ನು ಸ್ಥಾಪಿಸುವ ಉದ್ದೇಶ ಹೊಂದಿದ್ದಾರೆ ಎಂದು ಹೇಳಿದರು.

ರೋಟರಿ ಸಂಸ್ಥೆ ರಾಜ್ಯಪಾಲ ಆರ್.ಟಿ.ಎನ್ ಮಹಾದೇವ್ಪ್ರಸಾದ್ ಮಾತನಾಡಿ, ಸಿದ್ದರಬೆಟ್ಟ ಪ್ರದೇಶದಲ್ಲಿ ಅಂತರ್ಜಲ ಮಟ್ಟವನ್ನು ಗಮನಾರ್ಹವಾಗಿ ಸುಧಾರಿಸಿದ ಸರೋವರ ಪುನರುಜ್ಜೀವನ ಯೋಜನೆ ಮತ್ತು ಹಸಿರು ಹೊದಿಕೆಯನ್ನು ಗಮನಿಸಲಾಯಿತು. ಪರಿಸರ ಸುಸ್ಥಿರತೆಯನ್ನು ಕಾಪಾಡಲು ಸ್ಥಳೀಯರಿಗೆ ಸಸಿ ವಿತರಣೆಯ ಮಾಡಿದ್ದು, ಸ್ಥಳೀಯ ರೋಟರಿ ಸಂಸ್ಥೆ ಕಾರ್ಯವೈಖರಿ ಅತ್ಯುತ್ತಮಾವಾಗಿದೆ ಎಂದರು.
ರೋಟರಿ ಅಧ್ಯಕ್ಷ ಕೆ.ಎನ್ ರಘು ಮಾತನಾಡಿ, ನಮ್ಮ ಸಂಸ್ಥೆಯಿಂದ ಯುವತಿಯರಿಗೆ ಮುಟ್ಟಿನ ನೈರ್ಮಲ್ಯ ಮತ್ತು ಘನತೆಯನ್ನು ಸುಧಾರಿಸುವ ಗುರಿಯನ್ನು ಹೊಂದಿದ್ದು, ಕೊರಟಗೆರೆಯ ಸರ್ಕಾರಿ ಕಾಲೇಜಿನಲ್ಲಿ ಇತ್ತೀಚೆಗೆ ಸ್ಯಾನಿಟರಿ ನ್ಯಾಪ್ಕಿನ್ ವಿತರಕಗಳು ಮತ್ತು ದಹನಕಾರಕಗಳನ್ನು ಸ್ಥಾಪಿಸಲಾಗಿದೆ. ಗ್ರಾಮೀಣ ಭಾಗದ ಮಹಿಳೆಯರನ್ನು ಸಬಲೀಕರಣಗೊಳಿಸಲು ಟೈಲರಿಂಗ್ ಮತ್ತು ಬ್ಯೂಟಿಪಾರ್ಲರ್, ಬೋರ್ವೆಲ್ಗಳನ್ನು ರಿಚಾರ್ಜ್ ಮಾಡುವ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಗಂಭೀರ ಆರೈಕೆಯ ಅಗತ್ಯವಿರುವ ಸ್ಥಳೀಯ ಮೂತ್ರಪಿಂಡ ರೋಗಿಗಳಿಗೆ ಬೆಂಬಲ ನೀಡಲು ಡಯಾಲಿಸಿಸ್ ಯಂತ್ರಗಳನ್ನು ಸ್ಥಾಪಿಸಲು ಸಹ ಸಜ್ಜಾಗಿದೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಅಧಿಕಾರಿಗಳಾದ ಆರ್.ಟಿ.ಎನ್. ಪ್ರಕಾಶ್, ನಾಗರಾಜ್, ಮಂಜುನಾಥ್ ಮತ್ತು ಆರ್.ಟಿ. ನಿರಂಜನ್, ಕಾರ್ಯದರ್ಶಿ ಶಿವಕುಮಾರ್, ಖಜಾಂಚಿ ದೊಡ್ಡೇಗೌಡ, ಚಾರ್ಟರ್ ಅಧ್ಯಕ್ಷ ಆರ್.ಟಿ. ಗಂಗಾಧರಶಾಸ್ತ್ರಿ. ಮತ್ತು ಸಿದ್ದರಬೆಟ್ಟ ರೋಟರಿ ಕ್ಲಬ್ ಸದಸ್ಯರು ಉಪಸ್ಥಿತರಿದ್ದರು.

ರಾಜ್ಯಪಾಲರಿಂದ ಸಿದ್ದರಬೆಟ್ಟ ರೋಟರಿ ಸಂಸ್ಥೆ ಬಗ್ಗೆ ಪ್ರಶಂಸೆ:
ರೋಟರಿ ಇಂಟರ್ನ್ಯಾಷನಲ್ ಸಂಸ್ಥೆ ಸಹಯೋಗದೊಂದಿಗೆ, ಆಯುರ್ವೇದ ಮತ್ತು ಆಧ್ಯಾತ್ಮಿಕ ಯೋಗಕ್ಷೇಮದ ಬಗ್ಗೆ ಜಾಗೃತಿ ಮೂಡಿಸಲು ಗ್ರಂಥಾಲಯದೊಂದಿಗೆ ರೋಟರಿ ಅನುಭವ ಮಂಟಪ ಪ್ರಾರಂಭ, ಮೂತ್ರಪಿಂಡ ರೋಗಿಗಳಿಗೆ ಬೆಂಬಲ ನೀಡಲು ಡಯಾಲಿಸಿಸ್ ಯಂತ್ರಗಳನ್ನು ಸ್ಥಾಪನೆ ಉದ್ದೇಶ. 24ಮಂದಿ ಮಹಿಳಾ ಫಲಾನುಭವಿಗಳಿಗೆ ಟೈಲರಿಂಗ್ ಯಂತ್ರಗಳನ್ನು ನೀಡಿ ಸ್ವತಂತ್ರ ಜೀವನವನ್ನು ನಡೆಸಲು ಅನುವು ಮಾಡಿಕೊಟ್ಟಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
– ಶ್ರೀನಿವಾಸ್ , ಕೊರಟಗೆರೆ.