ಕೊರಟಗೆರೆ– ದಕ್ಷಿಣಕಾಶಿ, ಇತಿಹಾಸ ಪ್ರಸಿದ್ದ ಕೊರಟಗೆರೆ ಗ್ರಾಮದೇವತೆ ಕೋಟೆ ಮಾರಮ್ಮ ದೇವಿ ಮತ್ತು ಕೋಲ್ಲಾಪುರದಮ್ಮ ನವರ ನೂತನ ದೇವಾಲಯ ಮತ್ತು ಮೂಲ ದೇವರುಗಳ ಪುನರ್ ಪ್ರತಿಷ್ಠಾಪನಾ ಮಹೋತ್ಸವವು ಪಟ್ಟಣದಲ್ಲಿ ಏ.29 ರಿಂದ ಮೇ.1 ರವರೆಗೆ ವಿಜೃಂಭಣೆಯಿಂದ ನಡೆಯಲಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಎ.ಡಿ.ಬಲರಾಮಯ್ಯ ತಿಳಿಸಿದರು.
ಶನಿವಾರ ದೇವಾಲಯದ ಆವರಣದಲ್ಲಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ, ಈ ದೇವಾಲಯ ನಿರ್ಮಾಣಕ್ಕೆ ಸುಮಾರು 2.ಕೋಟಿ ಹಣವನ್ನು ವೆಚ್ಚಮಾಡಲಾಗಿದ್ದು, ಈ ದೇವಾಲಯಗಳ ನಿರ್ಮಾಣಕ್ಕೆ ಭಕ್ತಾದಿಗಳು, ಸ್ಥಳೀಯ ಸಂಘ ಸಂಸ್ಥೆಯವರು, ಜನಪ್ರತಿನಿಧಿಗಳು ಉದಾರವಾಗಿ ದೇಣಿಗೆಯನ್ನು ನೀಡಿದ್ದಾರೆ. ಈ ಮೂರು ದಿನಗಳ ಕಾಲ ಕೊರಟಗೆರೆ ಪಟ್ಟಣದಲ್ಲಿ ಮಾಂಸ ಮಾರಾಟವನ್ನು ಮಾಡದೆ ಸ್ವಯಂಪ್ರೇರಿತರಾಗಿ ಅಂಗಡಿಗಳನ್ನು ಮುಚ್ಚಬೇಕು ಹಾಗೂ 2650 ಮಂದಿ ಮುತೈದೆಯರಿಗೆ ಮಡ್ಲಕ್ಕಿ ಮತ್ತು ಸೀರೆಯನ್ನು ನೀಡಲಾಗುವುದು. ಈ ಮೂರು ದಿನಗಳ ಕಾಲ ಬರುವ ಸಾವಿರಾರು ಭಕ್ತಾದಿಗಳಿಗೆ ನಿರಂತರ ಅನ್ನ ಸಂತರ್ಪಣೆ ನಡೆಯಲಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಸಿದ್ದರಬೆಟ್ಟ ಶ್ರೀಮಠದ ಶ್ರೀವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಎಲೆರಾಂಪುರದ ಶ್ರೀಮಠದ ಡಾ.ಹನುಮಂತನಾಥ ಸ್ವಾಮೀಜಿ, ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್, ಕೇಂದ್ರ ಸಚಿವರಾದ ವಿ.ಸೋಮಣ್ಣ, ಸಹಕಾರ ಸಚಿವರಾದ ಕೆ.ಎನ್,ರಾಜಣ್ಣ, ಮಾಜಿ ಸಚಿವರು ಹಾಗೂ ಶಾಸಕರಾದ ಟಿ,ಬಿ.ಜಯಚಂದ್ರ, ಮಾಜಿ ಸಚಿವ ಸಿ.ವೀರಣ್ಣ, ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ, ಮಾಜಿ ಸಂಸದ ಮುದ್ದಹನುಮೇಗೌಡ, ಗೊರವನಹಳ್ಳಿ ಮಹಾಲಕ್ಷ್ಮಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಾಸುದೇವ್, ಮಾಜಿ ಶಾಸಕ ಪಿ..ಅರ್,ಸುಧಾಕರ್ ಲಾಲ್, ನಿವೃತ್ತ ಐ.ಎ.ಎಸ್ ಅನಿಲ್ಕುಮಾರ್, ಹಲವು ಗಣ್ಯರು ಆಗಮಿಸುವರು ಎಂದರು.

ಮಾರಮ್ಮ ದೇವಿಯ ಪ್ರಧಾನ ಅರ್ಚಕ ಶ್ರೀಧರಾಚಾರ್ ಮಾತನಾಡಿ, ಕೋಟೆ ಮಾರಮ್ಮ ದೇವಿಯು ಮೈಸೂರು ಅರಸರ ರಕ್ಷಣೆಯ ದೇವಿಯಾಗಿದ್ದು, ಮೈಸೂರು ಅರಸರು ಇಲ್ಲಿಗೆ ಬಂದು ಪೂಜೆ ಸಲ್ಲಿಸಿ ಹೋಗುತ್ತಿದ್ದರು, ಇದರ ಪ್ರತಿರೂಪವಾಗಿ ಮೈಸೂರಿನ ಅರಮನೆ ಆರವರಣದಲ್ಲಿ ಕೋಟೆಮಾರಮ್ಮ ದೇವಿಯನ್ನು ಪ್ರತಿಷ್ಠಾಪಿಸಲಾಗಿದೆ. ಕೊರಟಗೆರೆ ಪಟ್ಟಣವು ಪವಿತ್ರವಾದ ದೈವ ಭೂಮಿಯಾಗಿದ್ದು ಇಲ್ಲಿ ಗಂಗಾಧರೇಶ್ವರ, ಕೋಟೆ ಮಾರಮ್ಮ ಮತ್ತು ಕಟ್ಟೆಗಣಪತಿ ನೆಲೆ ಊರಿರುವ ಉದ್ಬವ ದೇವರುಗಳಾಗಿದ್ದಾರೆ, ಕೋಟೆ ಮಾರಮ್ಮ ದೇವತೆಗೆ ಕೊರಟಗೆರೆ ಪಟ್ಟಣ ಸೇರಿದಂತೆ ಸುತ್ತಮುತ್ತ 16 ಗ್ರಾಮಗಳ ಜನರು ಸಂಪ್ರದಾಯದಂತೆ ದೇವಿಯ ಆಚಾರದಲ್ಲಿ ನಡೆದುಕೊಳ್ಳುವರು ಎಂದು ತಿಳಿಸಿದರು.
ಅರ್ಚಕ ದೀಪಕ್ಶರ್ಮ ಮಾತನಾಡಿ, ಪಟ್ಟಣದಲ್ಲಿ ಮೂರು ದಿನಗಳ ಕಾಲ ನಡೆಯುವ ಈ ಮಹೋತ್ಸವದಲ್ಲಿ ಏ.29 ಮಂಗಳವಾರ ಸಂಜೆ 6 ಗಂಟೆಗೆ ಸಾವಿರಾರು ಮಹಿಳೆಯರಿಂದ ಕುಂಭಕಳಸ. ಗಂಗಾ ಪೂಜೆಯೊಂದಿಗೆ ದೇವಿಗಳಿಗೆ ಜಲದಿ ವಾಸ ನಡೆಯಲಿದೆ. ಏ.30 ರ ಬುಧವಾರದಂದು ಗಣಪತಿ ಪೂಜೆ, ಶುದ್ದೀಕರಣಗಳು, ಕಳಸ ಪೂಜೆ, ನವಗ್ರಹ ಆರಾದನೆ, ವಿವಿಧ ಹೋಮಗಳು ಸೇರಿದಂತೆ ಹಲವು ವಿವಿಧ ಪೂಜೆಗಳು ನಡೆಯಲಿವೆ. ಮೇ.1 ರ ಗುರುವಾರ ದೇವಿಯ ಸ್ಥಿರಬಿಂಬದ ಅಷ್ಟಬಂದ ಪ್ರತಿಷ್ಠಾಪನೆ, 10 ಬಗೆಯ ವಿವಿಧ ಹೋಮಗಳು ಪೂರ್ಣಾಹುತಿ ಸೇರಿದಂತೆ ಹಲವು ಧಾರ್ಮಿಕ ವಿಧಿ ವಿದಾನಗಳೊಂದಿಗೆ ಮಹಾಮಂಗಳಾತಿ ನೆರವೇರಲಿದೆ ಎಂದರು.

ಈ ವೇಳೆ ಗೋಷ್ಠಿಯಲ್ಲಿ ಕಾರ್ಯದರ್ಶಿ ಕೆ.ವಿ ಮಂಜುನಾಥ್, ಖಜಾಂಚಿ ಕೆ.ಎನ್ ಲಕ್ಷ್ಮಿನಾರಾಯಣ್, ಮುರಳೀಗೌಡ, ಎಸ್ಪಿಎಲ್ಎನ್ ರಾವ್, ರಾಜಣ್ಣ, ಕೆ.ಆರ್ ಓಬಳರಾಜು, ಕೆ.ವಿ ಪುರುಷೋತ್ತಮ್, ಕೆ.ಬಿ ಲೋಕೇಶ್, ಕೃಷ್ಣಪ್ಪ, ರಾಘವೇಂದ್ರ, ರಂಜಿತ್, ಸಂಜಯ್, ಪುನೀತ್ ಸೇರಿದಂತೆ ಇನ್ನಿತರರು ಹಾಜರಿದ್ದರು.
-ಶ್ರೀನಿವಾಸ್ , ಕೊರಟಗೆರೆ