ಕೊಟ್ಟಿಗೆಹಾರ: ಸಮೀಪದ ಬಾಳೂರಿನ ಚರ್ಚಿನಲ್ಲಿ ಶುಕ್ರವಾರ ಸಂಜೆ ಸಂತ ಅಂತೋಣಿ ಹಬ್ಬವನ್ನು ಭಕ್ತಿಭಾವದಿಂದ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ಬಣಕಲ್ ಚರ್ಚಿನ ಧರ್ಮಗುರು ಫಾ. ಪ್ರೇಮ್ ಲಾರೆನ್ಸ್ ಡಿಸೋಜ ಪವಿತ್ರ ಪೂಜೆ ನೆರವೇರಿಸಿ ಭಕ್ತರಿಗೆ ಸಾರ್ಥಕ ಸಂದೇಶ ನೀಡಿದರು.
ಅವರು ಮಾತನಾಡುತ್ತಾ, “ಸಂತ ಅಂತೋಣಿಯವರು ನಂಬಿಕೆಯ ಶಕ್ತಿಯಾಗಿ, ಪ್ರಾರ್ಥನೆಯ ಮೂಲಕ ಜನರಿಗೆ ಶಾಶ್ವತ ಭರವಸೆ ನೀಡುವ ಪವಾಡ ಪುರುಷರಾಗಿದ್ದಾರೆ. ಅವರಲ್ಲಿ ನಂಬಿಕೆ ಇಟ್ಟು ಪ್ರಾರ್ಥಿಸಿದರೆ ಅದು ಫಲಿತವಾಗುತ್ತದೆ. ನಾವು ಸನ್ಮಾರ್ಗದ ದಾರಿಯಲ್ಲಿ ನಡೆದು ಶಾಶ್ವತ ಆನಂದದ ಕಡೆಗೆ ಸಾಗಬೇಕು” ಎಂದು ಭಕ್ತರಲ್ಲಿ ವಿಶ್ವಾಸ ಬಿತ್ತಿದರು.
ಪೂಜಾ ಕಾರ್ಯಕ್ರಮದಲ್ಲಿ ನಿಡಿಗಲ್ ಚರ್ಚಿನ ಫಾ. ಚಾರ್ಲ್ಸ್ ಸಲ್ಡಾನ, ವಿಮುಕ್ತಿಯ ಫಾ. ಎಡ್ವಿನ್ ರಾಕೇಶ್ ಡಿಸೋಜ, ಸಿಸ್ಟರ್ ಹಿಲ್ಡಾ ಲೋಬೊ ಭಾಗವಹಿಸಿದರು. ರೊನಾಲ್ಡ್ ರಿಜ್ವಾನ್ ಡಿಸೋಜ ಅವರ ನೇತೃತ್ವದಲ್ಲಿ ಮನೆ ಮುಂದೆ ನಿರ್ಮಿಸಲಾದ ಸಂತ ಅಂತೋಣಿ ಗವಿಯಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು.

ಈ ಸಂದರ್ಭದಲ್ಲಿ ರೊನಾಲ್ಡ್ ಡಿಸೋಜ, ರಿಜ್ವಾನ್ ರೇಗೊ, ರಿಯಾನ್ನ, ಪ್ಲೇವಿಯಾ, ರೊಲ್ಪಿ, ಸಿಂತಿಯಾ ಪಾಯ್ಸ್, ಲೂಸಿ ಡಿಸೋಜ, ಲ್ಯಾನ್ಸಿ ಕಾರ್ಲೊ, ರೀನಾ ರೇಗೊ ಸೇರಿದಂತೆ ಹಲವರು ಭಾಗವಹಿಸಿದ್ದರು. ಬಾಳೂರು ದರ್ಬಾರ್ ಪೇಟೆಯಲ್ಲಿನ ಅವರ ನಿವಾಸದ ಮುಂದೆ ಗವಿಯನ್ನು ಹೊಗಳಿಂದ ಆಕರ್ಷಕವಾಗಿ ಅಲಂಕರಿಸಲಾಗಿತ್ತು.
ಕೊಟ್ಟಿಗೆಹಾರ, ಜಾವಳಿ, ಬಣಕಲ್, ಹಿರೇಬೈಲ್ ಮತ್ತು ಇತರ ಗ್ರಾಮಗಳ ಭಕ್ತಾಧಿಗಳು ಹಾಗೂ ವಿವಿಧ ಧರ್ಮಗಳ ಪ್ರತಿನಿಧಿಗಳೂ ಈ ಪವಿತ್ರ ಆಚರಣೆಗೆ ಸಾಕ್ಷಿಯಾದರು.