ಕೆ.ಆರ್.ಪೇಟೆ: ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ – ಕುಟುಂಬದಲ್ಲಿ ಶೋಕದ ಛಾಯೆ

ಕೆ.ಆರ್.ಪೇಟೆ- ತಾಲ್ಲೂಕಿನ ಬೂಕನಕೆರೆ ಹೋಬಳಿಯ ಮರಟೀಕೊಪ್ಪಲು ಗ್ರಾಮದ ರೈತ ಮಂಜೇಗೌಡ (46) ಅವರು ಸಾಲದ ಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ಘಟನೆಯಿಂದು ನಡೆದಿದೆ.

ಮಂಜೇಗೌಡ ಅವರು ತಮ್ಮ ಜಮೀನು ಅಭಿವೃದ್ಧಿಗೆ ಹಾಗೂ ಕೃಷಿ ಚಟುವಟಿಕೆಗಳಿಗಾಗಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮೂಲಕ ಚಿನ್ನದ ಮೇಲೆ ಸಾಲ ತೆಗೆದುಕೊಂಡಿದ್ದರು. ಜೊತೆಗೆ ಖಾಸಗಿ ವ್ಯಕ್ತಿಗಳಿಂದಲೂ ಸಾಲ ಪಡೆದಿದ್ದೆಂದು ತಿಳಿದುಬಂದಿದೆ. ಒಟ್ಟೂ ಐದಾರು ಲಕ್ಷ ರೂಪಾಯಿಗಳಷ್ಟು ಸಾಲದ ಒತ್ತಡದಲ್ಲಿ ಅವರು ನರಳುತ್ತಿದ್ದರು.

ತಮ್ಮ ಪತ್ನಿಗೆ “ವಡ್ಡಗುಡಿ ಊರಿಗೆ ಹೋಗಿ ಬರುತ್ತೇನೆ” ಎಂದು ಹೇಳಿ ಮನೆಯ ಹೊರಗೆ ಹೋದ ಮಂಜೇಗೌಡ, ಅದೇ ದಾರಿಯಲ್ಲಿ ಸಿಗುವ ಸಾಧಗೋನಹಳ್ಳಿ ಅರಣ್ಯ ಪ್ರದೇಶದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮೃತರ ಪತ್ನಿ ಶೃತಿ ಅವರು ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮಂಜೇಗೌಡ ಅವರು ಪತ್ನಿ ಶೃತಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಘಟನೆಯ ಕುರಿತು ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸಾವಿನ ಸುದ್ದಿ ಗ್ರಾಮದಲ್ಲಿ ಭಾರೀ ದುಃಖವನ್ನುಂಟುಮಾಡಿದೆ.

– ಶ್ರೀನಿವಾಸ್‌ ಆರ್.

Leave a Reply

Your email address will not be published. Required fields are marked *