ಕೆ.ಆರ್.ಪೇಟೆ,ಜೂ.08: ಐ.ಪಿ.ಎಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ 18ವರ್ಷಗಳ ಬಳಿಕ ಭರ್ಜರಿ ಜಯಗಳಿಸಿದ ಆರ್.ಸಿ.ಬಿ ತಂಡದ ವಿಜಯೋತ್ಸವವನ್ನು ನೇರವಾಗಿ ವೀಕ್ಷಣೆ ಮಾಡಲು ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಹೋಗಿದ್ದ ಸಂದರ್ಭದಲ್ಲಿ ನಡೆದ ಕಾಲ್ತುಳಿತಕ್ಕೆ ಸಿಲುಕಿ ಮೃತಪಟ್ಟ ಕೆ.ಆರ್.ಪೇಟೆ ತಾಲ್ಲೂಕಿನ ರಾಯಸಮುದ್ರ ಗ್ರಾಮದ ಪೂರ್ಣಚಂದ್ರ ತಾಯಿ ಕಾಂತಾಮಣಿ ಅವರಿಗೆ ಸರ್ಕಾರಿದಂದ ಬಿಡುಗಡೆಯಾಗಿದ್ದ 25ಲಕ್ಷ ರೂಪಾಯಿಗಳ ಚೆಕ್ ಅನ್ನು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕೃಷಿ ಸಚಿವರಾದ ಎನ್.ಚೆಲುವರಾಯಸ್ವಾಮಿ ವಿತರಣೆ ಮಾಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.

ಈ ವೇಳೆ ಮಾತನಾಡಿದ ಕೃಷಿ ಸಚಿವರಾದ ಎನ್.ಚೆಲುವರಾಯಸ್ವಾಮಿ ಅವರು ಆರ್.ಸಿ.ಬಿ. ವಿಜಯೋತ್ಸವದ ಸಂದರ್ಭದಲ್ಲಿ ಕಾಲ್ತುಳಿತ ಉಂಟಾಗಿ ರಾಯಸಮುದ್ರ ಗ್ರಾಮದ ಶಿಕ್ಷಕ ಆರ್.ಬಿ.ಚಂದ್ರು ಮತ್ತು ಕಾಂತಾಮಣಿ ದಂಪತಿಗಳ ಪುತ್ರ ಪೂರ್ಣಚಂದ್ರ ಸೇರಿದಂತೆ 11ಜನ ಕ್ರೀಡಾ ಪ್ರೇಮಿಗಳು ಮೃತಪಟ್ಟಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಇಂತಹ ದುರಂತ ನಡೆಯಬಾರದಿತ್ತು. ಕಾಲ್ತುಳಿತದಲ್ಲಿ ಮೃತಪಟ್ಟ ಎಲ್ಲಾ 11 ಮಂದಿಯ ಕುಟುಂಬಕ್ಕೂ ರಾಜ್ಯ ಸರ್ಕಾರವೂ ತಲಾ 25ಲಕ್ಷ ರೂಪಾಯಿಗಳನ್ನು ಪರಿಹಾರವಾಗಿ ನೀಡಿರುತ್ತದೆ. ಸರ್ಕಾರವು ಎಷ್ಟೇ ಪರಿಹಾರ ನೀಡಬಹುದು. ಕಳೆದು ಹೋದ ಜೀವವನ್ನು ವಾಪಸ್ ತರಲು ಸಾಧ್ಯವಾಗುವುದಿಲ್ಲ. ಪುತ್ರನನ್ನು ಕಳೆದುಕೊಂಡ ಪೋಷಕರು ಮತ್ತು ಕುಟುಂಬದವರ ಮನಸ್ಸಿಗೆ ಆಗಿರುವ ನೋವನ್ನು ಸಹಿಸುವ ಶಕ್ತಿಯನ್ನು ಈ ದೇವರು ನೀಡಲಿ ಎಂದು ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ್, ಶಾಸಕ ಹೆಚ್.ಟಿ.ಮಂಜು, ಈ ಸಂದರ್ಭದಲ್ಲಿ ಕ್ಷೇತ್ರದ ಶಾಸಕ ಹೆಚ್.ಟಿ.ಮಂಜು, ತಹಶಿಲ್ದಾರ್ ಎಸ್.ಯು.ಅಶೋಕ್, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಜಿ.ಪಂ.ಮಾಜಿ ಉಪಾಧ್ಯಕ್ಷ ಎಸ್.ಅಂಬರೀಶ್, ನಿವೃತ್ತ ಪ್ರಾಂಶುಪಾಲ ಆರ್.ಟಿ.ಶಿವಕುಮಾರ್, ಗ್ಯಾಸ್ ರಾಜಶೇಖರ್, ಮಡುವಿನಕೋಡಿ ಕಾಂತರಾಜು, ರಾಜಯ್ಯ, ಹೆತ್ತಗೋನಹಳ್ಳಿ ನಾರಾಯಣಗೌಡ, ಗ್ರಾ.ಪಂ.ಉಪಾಧ್ಯಕ್ಷ ಯೋಗೇಶ್, ಸಚಿವರ ಆಪ್ತ ಸಹಾಯಕ ಚೇತನಾಮಹೇಶ್, ಶಾಸಕರ ಆಪ್ತ ಸಹಾಯಕ ಅರಳಕುಪ್ಪೆ ಪ್ರತಾಪ್, ಸರ್ಕಲ್ ಇನ್ಸ್ಪೆಕ್ಟರ್ ಸುಮಾರಾಣಿ, ಎಸ್.ಐ ನವೀನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.