ಕೊಟ್ಟಿಗೆಹಾರ, ಜೂನ್ 17 – ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಸುಂಕಸಾಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಲಿಗೆ ಗ್ರಾಮದಲ್ಲಿ ಭಾರಿ ಮಳೆಯಿಂದಾಗಿ ಭೂಕುಸಿತ ಸಂಭವಿಸಿದೆ. ಪರಿಣಾಮ ಐದು ಕುಟುಂಬಗಳನ್ನು ತುರ್ತುವಾಗಿ ಸ್ಥಳಾಂತರಿಸಿ ಶಾಲೆ, ಅಂಗನವಾಡಿ ಹಾಗೂ ಸಮುದಾಯ ಭವನದಲ್ಲಿ ತಾತ್ಕಾಲಿಕ ಕಾಳಜಿ ಕೇಂದ್ರ ಸ್ಥಾಪಿಸಲಾಗಿದೆ.
ತಾಲೂಕು ಆಡಳಿತವು ಭಾಸ್ಕರ್, ಲಕ್ಷ್ಮಿ, ವೆಂಕಯ್ಯ, ಮುಕುಂದ, ಶೇಖರ್ ಅವರ ಕುಟುಂಬಗಳನ್ನು ಬಲಿಗೆ ಗ್ರಾಮದ ಶಾಲೆಯ ತಾತ್ಕಾಲಿಕ ಆಶ್ರಯ ಕೇಂದ್ರಕ್ಕೆ ಸ್ಥಳಾಂತರಿಸಿದ್ದು, ಅಗತ್ಯ ವಸ್ತುಗಳು ಹಾಗೂ ಆಹಾರದ ವ್ಯವಸ್ಥೆಯನ್ನು ಕೂಡಾ ಸರಕಾರದ ವತಿಯಿಂದ ಕೈಗೊಳ್ಳಲಾಗಿದೆ.

ಈ ಭಾಗದಲ್ಲಿ 2019 ರಲ್ಲಿಯೂ ಭಾರಿ ಭೂಕುಸಿತ ಸಂಭವಿಸಿದ್ದನ್ನು ನೆನಪಿಸಬಹುದು, ಆ ಸಂದರ್ಭದಲ್ಲಿ ಅನೇಕ ಜನರು ಮನೆ ಹಾಗೂ ಆಸ್ತಿಪಾಸ್ತಿಯನ್ನು ಕಳೆದುಕೊಂಡಿದ್ದರು.

ತುರ್ತು ಸೇವಾ ಸಿಬ್ಬಂದಿಗಳು ಹಾಗೂ ಸ್ಥಳೀಯ ಆಡಳಿತವು ಪರಿಸ್ಥಿತಿಯನ್ನು ನಿಕಟದಿಂದ ಗಮನದಲ್ಲಿಟ್ಟುಕೊಂಡಿದ್ದು, ಮುಂದಿನ ಭದ್ರತಾ ಕ್ರಮಗಳನ್ನೂ ಜಾರಿಗೊಳಿಸಲಾಗಿದೆ.