ತುಮಕೂರು: ನಗರದ ಹಿರೇಮಠದ ಕರ್ತೃ ಮಲ್ಲಿಕಾರ್ಜುನಸ್ವಾಮಿಯ ಪುನಃ ಪ್ರತಿಷ್ಠಾಪನಾ ಮಹೋತ್ಸವ ಶ್ರೀ ಮಠದ ಅಧ್ಯಕ್ಷರಾದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿಗಳ ಸಾನಿಧ್ಯದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಯಶಸ್ವಿಯಾಗಿ ನೆರವೇರಿತು. ವಿವಿಧ ಮಠಗಳ ಮಠಾಧೀಶರು, ಗಣ್ಯರು, ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಲ್ಲಿಕಾರ್ಜುನ ಸ್ವಾಮಿಗೆ ಪೂಜೆ ಸಲ್ಲಿಸಿದರು.

ಇದರ ಅಂಗವಾಗಿ ಮಠದಲ್ಲಿ ಮೂರು ದಿನ ಕಾಲ ನಡೆದ ವಿವಿಧ ಧಾರ್ಮಿಕ, ಪೂಜಾ ಕಾರ್ಯಕ್ರಮಗಳನ್ನು ಆಯೋಜಿಸಿಲಾಗಿತ್ತು.ಮಠದ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ವಿದ್ಯಾರ್ಥಿ ವಸತಿ ನಿಲಯ ಮತ್ತು ದಾಸೋಹ ಭವನದ ಉದ್ಘಾಟನೆ ಮಾಡಲಾಯಿತು.ಧಾರ್ಮಿಕ ಮಹಾಸಭೆ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳು ನೆರವೇರಿದವು.

ಬೆಳಿಗ್ಗೆ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿಗಳ ಅಮೃತಾಸ್ತದಿಂದ ಮಲ್ಲಿಕಾರ್ಜುನಸ್ವಾಮಿ, ನಂದೀಶ್ವರ ಸ್ವಾಮಿ ವಿಗ್ರಹಗಳಿಗೆ ಪ್ರಾಣಪ್ರತಿಷ್ಠಾಪನೆ ನೆರವೇರಿತು.ನೇತ್ರೋನ್ಮೀಲನ ಮತ್ತು ಗೋಪುರ ಕಲಶಾರೋಹಣ, ಕುಂಭಾಭಿಷೇಕ, ನಂತರ ಮಲ್ಲಿಕಾರ್ಜುನ ಸ್ವಾಮಿಗೆ ಮಹಾರುದ್ರಾಭಿಷೇಕ, ಜಯಾದಿ ಹೋಮಗಳು, ನಂತರ ಮಹಾಪೂರ್ಣಾಹುತಿ,ರಾಜೋಪಚಾರಸಹಿತ ಮಹಾಮಂಗಳಾರತಿ ಹಮ್ಮಿಕೊಳ್ಳಲಾಗಿತ್ತು.

ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಬೆಳ್ಳಾವಿ ಕಾರದ ಮಠದಕಾರದ ವೀರಬಸವ ಸ್ವಾಮೀಜಿ, ನಿಂಬಾಳ ಮಠದ ಜಡೆಯ ಶಾಂತಲಿಂಗೇಶ್ವರ ಸ್ವಾಮೀಜಿ ಆಗಮಿಸಿ ಮಲ್ಲಿಕಾರ್ಜುನ ಸ್ವಾಮಿ, ನಂದೀಶ್ವರನಿಗೆಪೂಜೆ ಸಲ್ಲಿಸಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್, ತುಮಕೂರು ವೀರಶೈವ ಸಹಕಾರ ಬ್ಯಾಂಕ್ ಅಧ್ಯಕ್ಷರಾದ ಕೆ.ಜೆ.ರುದ್ರಪ್ಪ, ಸೊಗಡು ಶಿವಣ್ಣ, ವೆಂಕಟೇಶ್ವರಲು, ಸೇರಿದಂತೆ ವಿವಿಧ ಸಮಾಜಗಳ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
– ಕೆ.ಬಿ.ಚಂದ್ರಚೂಡ