ಮಂಡ್ಯ: ಗ್ರಾಹಕರು ಬ್ಯಾಂಕಿನಿಂದ ದೊರೆಯುವ ಸೌಲಭ್ಯವನ್ನು ಪಡೆದು ಸಕಾಲದಲ್ಲಿ ಸಾಲ ಮರುಪಾವತಿ ಮಾಡಿ ಬ್ಯಾಂಕಿನ ಅಭಿವೃದ್ಧಿಗಾಗಿ ಸಹಕರಿಸಿ ಎಂದು ಭಾರತೀಯ ಸ್ಟೇಟ್ ಬ್ಯಾಂಕ್ ಡಿಜಿಎಂ ವಿಕಾಸ್ ವಶಿಷ್ಠ ಮನವಿ ಮಾಡಿದರು.
ತಾಲ್ಲೂಕಿನ ಕೆ.ಗೌಡಗೆರೆ ಶ್ರೀ ರಾಮ ಮಂದಿರ ಆವರಣದಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್, ಕೃಷಿ ವಾಣಿಜ್ಯ ಶಾಖೆ ಬಂದಿಗೌಡ ಬಡಾವಣೆ, ಶ್ರೀ ಹರ್ಷ ಸಮಾಜ ಸೇವಾ ಫೌಂಡೇಶನ್ ,ಸಾವಯವ ರೈತ ಕೂಟ ಕೆ ಗೌಡಗೆರೆ ಇವರ ವತಿಯಿಂದ ಕೃಷಿ ಸಾಲಗಳ ಜಾಗೃತಿ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಗ್ರಾಮದ ಜನರು ಬ್ಯಾಂಕಿನೊಂದಿಗೆ ಹಣ ಕಟ್ಟುವ ಹಾಗೂ ಹಣ ಪಡೆಯುವ ಮೂಲಕ ಬ್ಯಾಂಕಿನೊಂದಿಗೆ ವ್ಯವಹಾರ ಮಾಡಿದ್ದಲ್ಲಿ ಬ್ಯಾಂಕಿನ ಮೂಲಕ ಸಾಲ ಸೌಲಭ್ಯ ಸೇರಿದಂತೆ ಹಲವು ರೀತಿಯ ಯೋಚನೆಯ ಫಲಾನುಭವಿಗಳಾಗಲು ಸಾಧ್ಯವಾಗುತ್ತದೆ ಇದರ ಸದುಪಯೋಗವನ್ನು ಎಲ್ಲರೂ ಪಡೆಯುವಂಥಾಗಬೇಕು ಎಂದು ಮಾಹಿತಿ ನೀಡಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ವಿ.ಎಸ್.ಅಶೋಕ್ ಮಾತನಾಡಿ, ರೈತರ ಬೆಳೆಗಳಿಗೆ ವೆಚ್ಚ ಜಾಸ್ತಿಯಾಗುತ್ತಿದ್ದು ಇಳುವರಿ ಕಮ್ಮಿ ಯಾಗುತ್ತಿದೆ ಇದಕ್ಕೆ ಲಾಭದಾಯಕವಾಗಲು ರೈತರ ಬೆಳೆಗೆ ಬೇಕಾಗುವ ಸಲಕರಣೆಗಳನ್ನು ಸರ್ಕಾರದ ವತಿಯಿಂದ ಸಬ್ಸಿಡಿ ನೀಡುವ ಮೂಲಕ ರೈತರಿಗೆ ಪ್ರೋತ್ಸಾಹ ನೀಡುತ್ತಿದೆ ನಾಟಿ ಮಾಡುವ ಯಂತ್ರ ಕಟಾವು ಮಾಡುವ ಯಂತ್ರಗಳನ್ನು ರೈತ ಗುಂಪುಗಳ ಮೂಲಕ ವಿತರಿಸುತಿದ್ದೇವೆ ಈ ಎಲ್ಲಾ ಸೌಲಭ್ಯಗಳನ್ನೂ ಗ್ರಾಮದ ಜನರು ಬಳಸಿಕೊಂಡು ಅಭಿವೃದ್ಧಿ ಹೊಂದಲು ಸಹಕರಿಯಾಗುತ್ತದೆ ಎಂದು ಸಲಹೆ ನೀಡಿದರು.
ಬ್ಯಾಂಕಿನಿಂದ ಸಾಲ ಪಡೆದು ಸಕಾಲದಲ್ಲಿ ಬ್ಯಾಂಕಿಗೆ ಮರುಪಾವತಿ ಮಾಡಿದ ಗ್ರಾಹಕರನ್ನು ಸನ್ಮಾನಿಸಿ ಗೌರವಿಸಲಾಯಿತು ಹಾಗೂ ರೈತರಿಗೆ ಸಾಲದ ಚೆಕ್ಕನ್ನು ಸ್ಥಳದಲ್ಲಿ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಬಿ.ಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಬೋರಯ್ಯ, ಎಸ್ಬಿಐ ಪ್ರಾದೇಶಿಕ ವ್ಯವಸ್ಥಾಪಕ ಎಸ್.ಸುಮನ್, ಶ್ರೀ ಹರ್ಷ ಸಮಾಜ ಸೇವಾ ಫೌಂಡೇಶನ್ ಅಧ್ಯಕ್ಷ ಕಾರಸವಾಡಿ ಮಹದೇವ್, ಗ್ರಾಮ ಪಂಚಾಯಿತಿ ಸದಸ್ಯೆ ಕೆ.ಸರಸ್ವತಿ ಭಾಗವಹಿಸಿದ್ದರು.