ಮಂಡ್ಯ.ಮೇ.29:-ಸಾರ್ವಜನಿಕರಲ್ಲಿ ಕಾನೂನು ಅರಿವಿನ ಕೊರತೆಯಿದ್ದು, ಜಿಲ್ಲೆಯಲ್ಲಿನ ನ್ಯಾಯಾಧೀಶರು ತಿಂಗಳಿಗೆ ಒಂದೆರಡು ಬಾರಿ ಹಳ್ಳಿಗಳಿಗೆ ಭೇಟಿ ನೀಡಿ ಕಾನೂನಿನ ಬಗ್ಗೆ ಅರಿವು ಮೂಡಿಸಿ ಎಂದು ನ್ಯಾಯಮೂರ್ತಿ ಹಾಗೂ ಉಪಲೋಕಾಯುಕ್ತ ಬಿ.ವೀರಪ್ಪ ಅವರು ತಿಳಿಸಿದರು.
ಅವರು ಇಂದು ಜಿಲ್ಲಾ ಪಂಚಾಯತ್ ನ ಕಾವೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲೆಯ ನ್ಯಾಯಾಂಗ ಅಧಿಕಾರಿಗಳು, ವಕೀಲರು ಮತ್ತು ಲೋಕಾಯುಕ್ತ ಪೊಲೀಸ್ ಅಧಿಕಾರಿಗಳ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹಿರಿಯ ನ್ಯಾಯಾಧೀಶರುಗಳು, ವಕೀಲರು ತಮ್ಮ ಕಾನೂನಿನ ಕೆಲಸದ ಜೊತೆಗೆ ಸಮಾಜ ಸೇವೆಯನ್ನು ಸಹ ಮಾಡಬೇಕಾಗಿದೆ. ಜನರ ನೋವಿಗೆ ಹಾಗೂ ಸಮಸ್ಯೆಗಳಿಗೆ ಸ್ಪಂದಿಸುವುದು ನಮ್ಮ ಜವಾಬ್ದಾರಿಯಾಗಿರುತ್ತದೆ ಎಂದರು.

ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗ ಅದರೊಟ್ಟಿಗೆ ಪತ್ರಿಕಾರಂಗಗಳು ನಿಸ್ವಾರ್ಥದಿಂದ ಕೆಲಸ ನಿರ್ವಹಿಸಬೇಕಿದೆ. ವಕೀಲರು ನ್ಯಾಯಾಂಗದ ಒಂದು ಭಾಗವಾಗಿದ್ದು, ನ್ಯಾಯಾಂಗವನ್ನು ಬಲಿಷ್ಠಪಡಿಸುವಲ್ಲಿ ವಕೀಲರ ಪಾತ್ರ ಪ್ರಮುಖವಾಗಿರುತ್ತದೆ. ಆಗಾಗಿ ವಕೀಲರು ಆತ್ಮಸ್ಟೈರ್ಯದಿಂದ ಕೆಲಸನಿರ್ವಹಿಸಿ ಎಂದು ಹೇಳಿದರು.
ಕಾರ್ಯಾಂಗವನ್ನು ಪಾಲಿಸುವುದು ಅಧಿಕಾರಿಗಳ ಕರ್ತವ್ಯವಾಗಿರುತ್ತದೆ. ಅಧಿಕಾರಿಗಳು ತಮಗೆ ನೀಡುವ ಸಂಬಳವನ್ನು ಹೇಗೆ ಪ್ರೀತಿಸುತ್ತಾರೋ ಹಾಗೆಯೇ ತಮಗೆ ನೀಡುವ ಕರ್ತವ್ಯಗಳನ್ನು ಸಹ ಪ್ರೀತಿಸಬೇಕಿದೆ. ಪಡೆಯುವ ಸಂಬಳಕ್ಕಾದರೂ ನ್ಯಾಯ ಒದಗಿಸಿವಂತೆ ಕಾರ್ಯನಿರ್ವಹಿಸಿ ಎಂದರು.

ಶಾಸಕಾಂಗವನ್ನು ಇನ್ನಷ್ಟು ಬಲಿಷ್ಠಾ ಪಡಿಸಬೇಕಾಗಿದ್ದು, ದೇಶದಲ್ಲಿ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಎಸುಗುವ ಆರೋಪಿಗಳಿಗೆ ಗಲ್ಲುಶಿಕ್ಷೆ ವಿಧಿಸುವ ರೀತಿ ಶಾಸನಗಳು ರೂಪುಗೊಳ್ಳಬೇಕಯ ಎಂದು ಅಭಿಪ್ರಾಯಪಟ್ಟರು.
ಪತ್ರಿಕಾರಂಗವು ಶಕ್ತಿಯುತವಾದ ಕ್ಷೇತ್ರವಾಗಿದ್ದು, ಒಂದು ಲೇಖನಿಯಿಂದ ಸಮಾಜದ ತೊಂದರೆಗಳನ್ನು ಸರಿಪಡಿಸಬಹುದು. ಮಾಧ್ಯಮಗಳು ಯಾವುದೇ ಆಮಿಷಕ್ಕೂ ಬಲಿಯಾಗಬಾರದು. ಪ್ರತಿದಿನ ಮಾಧ್ಯಮಗಳಲ್ಲಿ ಯೋಧರರನ್ನು ಕುರಿತು ಕಾರ್ಯಕ್ರಮಗಳನ್ನು ಪ್ರಸಾರ ಮಾಡಿ ಯುವಜನತೆಯಲ್ಲಿ ದೇಶಪ್ರೇಮವನ್ನು ತುಂಬಿ ಎಂದು ಹೇಳಿದರು.

ಯುವ ವಕೀಲರು ನ್ಯಾಯಾಂಗದ ಬೆನ್ನೆಲುಬು ಇದ್ದಂತೆ ಮೊದಲಿಗೆ ನಿಮ್ಮನ್ನು ನೀವು ನಂಬಿದಾಗ ಯಶಸ್ಸು ನಿಮ್ಮದಾಗುತ್ತದೆ. ಕೆಚ್ಚೆದೆಯಿಂದ, ನಿಸ್ವಾರ್ಥವಾಗಿ, ಶ್ರದ್ದೆಯಿಂದ ಹಾಗೂ ನ್ಯಾಯಯುತವಾಗಿ ಜನರ ಸೇವೆ ಸಲ್ಲಿಸಿ. ನಿಮ್ಮಲ್ಲಿ ನ್ಯಾಯ ಬೇಡುವವರಿಗೆ ಅನ್ಯಾಯವಾಗಬಾರದು ಎಂದು ತಿಳುವಳಿಕೆಯ ಮಾತುಗಳನ್ನು ಹೇಳಿದರು.
ಲೋಕಾಯುಕ್ತ ಸಂಸ್ಥೆಯು ರಾಷ್ಟದಲ್ಲಿಯೇ ಬಲಿಷ್ಠಾವಾದ ಸಂಸ್ಥೆ. ಅನ್ಯಾಯ, ಭ್ರಷ್ಟಾಚಾರ ಹಾಗೂ ದೂರದಳಿತ ಕಂಡುಬAದಲ್ಲಿ ಹಿಂಜರಿಯದೆ, ಹೆದರದೆ ಕ್ರಮಕೈಗೊಳ್ಳುತ್ತದೆ. ಜನರ ಸೇವೆ ಮಾಡುವುದು ಪ್ರತಿಯೊಬ್ಬ ಅಧಿಕಾರಿಯ ಕರ್ತವ್ಯವಾಗಿದೆ. ನಿಭಾಯಿಸದೆ ಲೋಕಾಯುಕ್ತ ಸಂಸ್ಥೆಯ ಕೆಂಗಣ್ಣಿಗೆ ಗುರಿಯಾಗ ಬೇಡಿ ಎಂದು ಎಚ್ಚರಿಸಿದರು.

ಜಿಲ್ಲಾ ನ್ಯಾಯದೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರರಾದ ಅಧ್ಯಕ್ಷರಾದ ಬೃಂಗೇಶ್ ಅವರು ಮಾತನಾಡಿ ವಕೀಲರು ಸಾರ್ವಜನಿಕರ ಕಷ್ಟವನ್ನು ಅರಿಯುವ ಗುಣ ಬೆಳೆಸಿಕೊಳ್ಳಬೇಕಾಗಿದ್ದು, ಕಷ್ಟವನ್ನು ಅರಿತಾಗ ನ್ಯಾಯದ ಅರಿವಾಗುತ್ತದೆ. ಆಗಾಗಿ ಸಮಾಜದಲ್ಲಿನ ಕುಂದು ಕೊರತೆಯನ್ನು ಹೋಗಲಾಡಿಸಲು, ಸಮಸ್ಯೆಗಳನ್ನು ಹೋಗಲಾಡಿಸಲು ಕೈಜೋಡಿಸಿ ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಲೋಕಾಯುಕ್ತದ ಉಪ ನಿಬಂಧಕರುಗಳಾದ ಅರವಿಂದ್ , ಮಿಲನ, ಜಿಲ್ಲಾ ಕಾನೂನು ಸೇವೆ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆನಂದ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ರಾಜೇಂದ್ರ, ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಸಿದ್ಧರಾಜು, ಹಾಗೂ ಅಪರ ಜಿಲ್ಲಾಧಿಕಾರಿ ಬಿ. ಸಿ ಶಿವಾನಂದಮೂರ್ತಿ, ಹಿರಿಯ ಸಿವಿಲ್ ನ್ಯಾಯದೀಶರುಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.