ಮಂಡ್ಯ.ಜೂ.16:- ರೋಗಿಗಳ ಆರೈಕೆಗಾಗಿ ಬರುವ ಆರೈಕೆದಾರರು ತಂಗಲು ಸಿ.ಎಸ್.ಆರ್ ಅನುದಾನ ಬಳಸಿ ಮಿಮ್ಸ್ ಆವರಣದಲ್ಲಿ ನಿರ್ಮಿಸಲಾಗಿರುವ ಆರೋಗ್ಯ ಧಾಮವನ್ನು ಸಮರ್ಪಕವಾಗಿ ನಿರ್ವಹಿಸಿ ಎಂದು ಜಿಲ್ಲಾಧಿಕಾರಿ ಡಾ ಕುಮಾರ ಅವರು ಹೇಳಿದರು.
ಇಂದು (ಜೂ.16) ರಂದು ಮಿಮ್ಸ್ ವೈದ್ಯಕೀಯ ಕಾಲೇಜಿನ ನಿರ್ದೇಶಕರ ಕಚೇರಿಯನ್ನು ಆಯೋಜಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು ಆರೋಗ್ಯ ಧಾಮದ ಹೊಣೆಗಾರಿಕೆಯನ್ನು ನಿಭಾಯಿಸಲು ನೋಡೆಲ್ ಅಧಿಕಾರಿಗಳಾಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕರಾದ ಎಂ.ಪಿ. ಕೃಷ್ಣಕುಮಾರ್, ಉಸ್ತುವಾರಿ ಹಾಗೂ ಮೇಲ್ವಿಚರಣೆಗೆ ಮಿಮ್ಸ್ ಆಸ್ಪತ್ರೆಯ ಸ್ಥಾನಿಯ ವೈದ್ಯಾಧಿಕಾರಿ ಡಾ. ದರ್ಶನ್ ಕುಮಾರ್ ಅವರನ್ನು ನೇಮಿಸಲಾಗಿದೆ ಎಂದು ತಿಳಿಸಿದರು.

ಆರೋಗ್ಯ ಧಾಮಕ್ಕೆ ರೂ 30 ಶುಲ್ಕ
ಆರೋಗ್ಯ ಧಾಮದ ಸೌಲಭ್ಯದ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲು ದಾಖಲಾತಿ ವಿಭಾಗಗಳಲ್ಲಿ ಫಲಕಗಳನ್ನು ಅಳವಡಿಸಿ. ಆಸ್ಪತ್ರೆಗೆ ದಾಖಲಾದ ರೋಗಿಗಳ ಪರವಾಗಿ ಬರುವ ಆರೈಕೆದಾರರು “ಆರೋಗ್ಯ ಧಾಮದಲ್ಲಿ ತಂಗಲು ಇಚ್ಚೆಪಟ್ಟಲ್ಲಿ ದಿನಕ್ಕೆ (24 ಗಂಟೆಗಳು) ರೂ.30 ಶುಲ್ಕವನ್ನು ಪಾವತಿಸಿಕೊಂಡು ರಶೀದಿ ನೀಡಬೇಕು ಎಂದು ತಿಳಿಸಿದರು.
ವಿಧಿಸಲಾಗುವ ರೂ.30 ಶುಲ್ಕವನ್ನು ಬಳಕೆದಾರರ ನಿಧಿಗೆ ಜಮೆ ಮಾಡಬೇಕು ಮತ್ತು ಈ ಮೊತ್ತದಿಂದಲೇ ಆರೋಗ್ಯಧಾಮದ ನಿರ್ವಹಣೆ ಆರೋಗ್ಯಧಾಮಕ್ಕೆ ನೇಮಿಸಿಕೊಳ್ಳಲಾಗಿರುವ ಸಿಬ್ಬಂದಿಗಳು ವೇತನ ಪಾವತಿಗೆ ವೆಚ್ಚ ಮಾಡಬೇಕು.ರೋಗಿಯು ಆಸ್ಪತ್ರೆಯಲ್ಲಿ ದಾಖಲಾದ ನಂತರ ನೀಡಲಾಗುವ ದಾಖಲಾತಿ ಸಂಖ್ಯೆಯ ಆಧಾರದ ಮೇಲೆ ಅವರ ಆರೈಕೆದಾರರಿಗೆ ಕಂಪ್ಯೂಟರ್ ಆಧಾರಿತ ಪಾವತಿ ಚೀಟಿಯನ್ನು ನೀಡಬೇಕು ಎಂದು ತಾಕೀತು ಮಾಡಿದರು.

ಆರೈಕೆದಾರರು ರೋಗಿಯ ದಾಖಲಾತಿ ವಿವರ, ಆರೋಗ್ಯಧಾಮಕ್ಕೆ ದಾಖಲಾದ ಆರೈಕೆದಾರರ ದಾಖಲಾತಿ ಚೀಟಿ, ಆರೈಕೆದಾರರ ಗುರುತಿನ ಚೀಟಿಯ ಜೆರಾಕ್ಸ್ ಪ್ರತಿಯನ್ನು ನೀಡಿ ಆರೋಗ್ಯಧಾಮದಲ್ಲಿ ದಾಖಲಾಗಬೇಕು. ಆರೋಗ್ಯಧಾಮದಲ್ಲಿ ಸ್ವಚ್ಛತೆ ಕಾಪಾಡಬೇಕು, ಅಧಿಕಾರಿಗಳು ಆರೈಕೆದಾರರು ಆರೋಗ್ಯಧಾಮದಲ್ಲಿ ಅನುಸರಿಸಬೇಕಾದ ನಿಯಮಗಳ ಫಲಕವನ್ನು ಅಳವಡಿಸಿ, ನಿಯಮ ಉಲ್ಲಂಘಿಸಿದವರು ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ ಎಂದರು.
ಆರೋಗ್ಯಧಾಮದ ವಿವರಗಳು ಮತ್ತು ದಾಖಲಾದವರ ವಿವರಗಳನ್ನು ಪ್ರತ್ಯೇಕವಾಗಿ ನಿರ್ವಹಿಸಬೇಕು. ಆರೋಗ್ಯಧಾಮದಲ್ಲಿ ಸಿಸಿಟಿವಿ ಕಣ್ಗಾವಲನ್ನು ಏರ್ಪಡಿಸಲಾಗಿದೆ. ಪ್ರತಿನಿತ್ಯವೂ ಆರೋಗ್ಯ ಧಾಮವನ್ನು ಸ್ವಚ್ಛಗೊಳಿಸಿ ನೈರ್ಮಲ್ಯ ಕಾಪಾಡುವುದು ಅಧಿಕಾರಿಗಳ ಜವಾಬ್ದಾರಿ, ಸಾಧ್ಯವಾದಷ್ಟು ಶೀಘ್ರವಾಗಿ ಆರೋಗ್ಯ ಧಾಮದ ದಾಖಲಾತಿ ಪ್ರಾರಂಭಿಸಿ ಸಾರ್ವಜನಿಕರಿಗೆ ಅನುವು ಮಾಡಿ ಎಂದು ತಿಳಿಸಿದರು.
ಉಪಲೋಕಾಯುಕ್ತರು ಭೇಟಿ ನೀಡಿದ ಸಂದರ್ಭದಲ್ಲಿ ಕೆಲವು ನ್ಯೂನತೆಗಳನ್ನು ತಿಳಿಸಿದ್ದು, ಅವುಗಳನ್ನು ಸರಿಪಡಿಸಿಕೊಂಡು ವರದಿ ನೀಡುವಂತೆ ಈಗಾಗಲೇ ತಿಳಿಸಲಾಗಿತ್ತು. ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರು ಹಾಗೂ ಸಿಬ್ಬಂದಿಗಳನ್ನು ಪರಿಶೀಲಿಸಲು ಆಗಿಂದಾಗ ಭೇಟಿ ನೀಡಿ ಪರಿಶೀಲಿಸುವಂತೆ ಮಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ: ಶಿವಕುಮಾರ್ ಅವರಿಗೆ ತಿಳಿಸಿದರು.

ಮಿಮ್ಸ್ ನಿರ್ದೇಶಕ ಡಾ: ನರಸಿಂಹಸ್ವಾಮಿ ಅವರು ಮಾತನಾಡಿ ಹೊರ ರೋಗಿ ವಿಭಾಗದಲ್ಲಿ ವಿಕಲಚೇತನರಿಗೆ, ಪುರುಷರಿಗೆ, ಮಹಿಳೆಯರಿಗೆ, ಹಿರಿಯ ನಾಗರೀಕರಿಗೆ ಪ್ರತ್ಯೇಕ ಸಾಲಿನ ವ್ಯವಸ್ಥೆ ಮಾಡಲಾಗಿದೆ. ಸ್ವಚ್ಛತಾ ಕೆಲಸಗಳನ್ನು ನಿಯಮಿತವಾಗಿ ಪರಿಶೀಲಿಸಲಾಗುತ್ತಿದೆ. ಶುದ್ಧ ಕುಡಿಯುವ ನೀರಿನ ಆರ್.ಓ ಅಳವಡಿಕೆಯ ಕೆಲಸ ಪ್ರಗತಿಯಲ್ಲಿದೆ ಎಂದರು.
ಸಭೆಯ ನಂತರ ಜಿಲ್ಲಾಧಿಕಾರಿಗಳು ಓ.ಪಿ.ಡಿ ಹಾಗೂ ಔಷಧಿ ವಿತರಣಾ ಘಟಕಕ್ಕೆ ಭೇಟಿ ನೀಡಿ ನೀಡಿ ಪರಿಶೀಲನೆ ನಡೆಸಿದರು. ನಂತರ ವಾಹನ ನಿಲುಗಡೆ ಸ್ಥಳಕ್ಕೆ ಭೇಟಿ ನೀಡಿ ಶುಲ್ಕ ಪಡೆಯುತ್ತಿರುವ ಬಗ್ಗೆ ವಿಚಾರಣೆ ನಡೆಸಿದರು. ಎಂಟು ಗಂಟೆಯ ಅವಧಿಗೆ ರೂ 7/- ನಿಗದಿಯಾಗಿದ್ದು, ರೂ 10/- ಚೀಟಿಗಳು ಲಭ್ಯವಿದ್ದು, ಕಂಪ್ಯೂಟರ್ ಆಧಾರಿತ ಬಿಲ್ ನೀಡಿ ಸರಿಯಾಗಿ ನಿರ್ವಹಿಸದಿದ್ದಲ್ಲಿ ಟೆಂಡರ್ ರದ್ದು ಪಡಿಸುವುದಾಗಿ ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಕುಷ್ಟರೋಗ ನಿರ್ಮೂಲನಾಧಿಕಾರಿ ಡಾ. ಸೋಮಶೇಖರ್, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಜಯಪ್ರಕಾಶ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.