ಕೊರಟಗೆರೆ-ಹೇಮಾವತಿ ಕೆನಾಲ್ ಕಾಮಗಾರಿ ವಿರೋಧಿಸಿ ಮೆ.31ಕ್ಕೆ ರೈತರಿಂದ ಬೃಹತ್ ಪ್ರತಿಭಟನೆ

ಕೊರಟಗೆರೆ:– ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿಗೆ ಗೃಹ ಮತ್ತು ಸಹಕಾರ ಸಚಿವರ ವಿರೋಧ ಕೂಡ ಇದೆ. ಆದರೆ ರಾಜ್ಯ ಸರ್ಕಾರದ ವಿರುದ್ಧ ಧ್ವನಿ ಎತ್ತದೆ ಮೌನ ವಹಿಸಿದ್ದಾರೆ. ಇದರ ಪರಿಣಾಮ ಮುಂದಿನ ದಿನಗಳಲ್ಲಿ ತುಮಕೂರು ಜಿಲ್ಲೆಯ 7 ತಾಲ್ಲೂಕಿನ ಜನತೆಯ ಕುಡಿಯುವ ನೀರಿಗೆ ಮರಣ ಶಾಸನವಾಗಲಿದೆ ಎಂದು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಆಕ್ರೋಶ ಹೊರಹಾಕಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಮತ್ತು ಹೇಮಾವತಿ ಲಿಂಕ್ ಕೆನಾಲ್ ವಿರೋಧಿ ಹೋರಾಟ ಸಮಿತಿಯಿಂದ ಆಯೋಜಿಸಲಾದ ಸುದ್ದಿಗೋಷ್ಠಿಯನ್ನು ಉದ್ಧೇಶಿಸಿ ಮಾತನಾಡಿ,  ಗುಬ್ಬಿ ತಾಲ್ಲೂಕಿನ ಸುಂಕಪುರದ ಸಮೀಪ ಅರ್ಚಕರ ಜಮೀನಿನ ಮೂಲಕ ಮಾಗಡಿ ತಾಲ್ಲೂಕಿಗೆ ಹೇಮಾವತಿ ನೀರು ಹರಿಸಲು ರೈತರ ವಿರೋಧದ ನಡುವೆ ಕಾಮಗಾರಿಯನ್ನು ರಾಜ್ಯ ಸರ್ಕಾರ ಶಿಪಾರಸ್ಸಿನಂತೆ ಜಿಲ್ಲಾಡಳಿತ ಮುಂದುವರೆಸಿದೆ. ಕಾಮಗಾರಿಗೂ ಮುನ್ನ ಭೂಸ್ವಾಧೀನ ಪ್ರಕ್ರಿಯೆ ಆಗದೆ, ನೋಟಿಸ್ ನೀಡದೇ, ಜಮೀನಿನ ರೈತನಿಗೆ ಪರಿಹಾರ ನೀಡದೇ ನಿಯಮವನ್ನು ಉಲ್ಲಂಘಿಸಿ ಕಾಮಗಾರಿ ಪ್ರಾರಂಭಿಸಿದ್ದಾರೆ ಎಂದು ಆರೋಪ ಮಾಡಿದರು.

ಅವೈಜ್ಞಾನಿಕವಾಗಿ ನಡೆಸುತ್ತಿರುವ ಕಾಮಗಾರಿಯನ್ನು ನಿಲ್ಲಿಸುವಂತೆ ಸರ್ಕಾರದ ವಿರುದ್ದ ಹಲವಾರು ಹೋರಾಟ ಮಾಡಿದ್ದರೂ ಗಂಭೀರವಾಗಿ ಪರಿಗಣಿಸದೆ ಪೋಲಿಸ್ ಅಧಿಕಾರಿಗಳ ದಬ್ಬಾಳಿಕೆ ಮೂಲಕ ಹೋರಾಟ ಹತ್ತಿಕ್ಕಿ ಕಾಮಗಾರಿ ಮುಂದುವರೆಸಿದ್ದಾರೆ. ಹೇಮಾವತಿ ಕೆನಾಲ್ ಕಾಮಗಾರಿ ವಿರೋಧಿಸಿ ಸರ್ಕಾರ ಹಾಗೂ ಆಡಳಿತ ವ್ಯವಸ್ಥೆ ವಿರುದ್ಧ ಮೆ.31ಕ್ಕೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ರೈತ ಸಂಘದ ತಾ.ಅಧ್ಯಕ್ಷ ರಂಗಹನುಮಯ್ಯ ಮಾತನಾಡಿ, ಜಿಲ್ಲೆಯ ಗುಬ್ಬಿ ತಾಲ್ಲೂಕಿನಲ್ಲಿ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿಯನ್ನು ವಿರೋಧಿಸಿ ಹೋರಾಟ ಸಮಿತಿಯಿಂದ ಮೆ.31ರಂದು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ಮಠಾಧೀಶರು, ರೈತ ಮುಖಂಡರು, ಸಂಘ-ಸಂಸ್ಥೆಗಳು, ದಲಿತ ಪರ ಮುಖಂಡರು ಹೋರಾಟದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಜೆಡಿಎಸ್ ತಾ.ಅಧ್ಯಕ್ಷ ಕಾಮರಾಜು ಮಾತನಾಡಿ, ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ರೈತರ ಮತ್ತು ಜಿಲ್ಲೆಯ ಜನತೆಯ ವಿರೋಧದ ನಡುವೆ ರಾಜ್ಯ ಸರ್ಕಾರ ಅವೈಜ್ಞಾನಿಕವಾಗಿ ಕಾಮಗಾರಿ ನಡೆಸಲು ಮುಂದಾಗಿದೆ. ಎನ್‍ಡಿಎ ಪಕ್ಷದ ಮುಖಂಡರು ಹೆಚ್ಚಾಗಿ ಈ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.

ಹೋರಾಟ ಸಮಿತಿ ಮುಖಂಡ ಪವನ್‍ಕುಮಾರ್ ಮಾತನಾಡಿ, ಹೇಮಾವತಿ ಕೆನಾಲ್ ಕಾಮಗಾರಿ ರೈತರ ಕಿಚ್ಚನ್ನು ಹೆಚ್ಚಿಸುವ ಕಾಮಗಾರಿ ಇದಾಗಿದೆ. ಈ ಹಿಂದೆ ಕೂಡ ರೈತರ ಜೊತೆ ಹಲವಾರು ಹೋರಾಟ ಮಾಡಿದ್ದು, ಸಾವಿರಾರು ಸಂಖೈ ಜನರು ಈ ಹೋರಾಟಕ್ಕೆ ಸಾಕ್ಷಿಯಾಗಲಿದ್ದಾರೆ ಎಂದರು.

ಈ ವೇಳೆ ಪ್ರಧಾನ ಕಾರ್ಯದರ್ಶಿ ಶಬ್ಬೀರ್, ಮುದ್ದಬಸವಯ್ಯ, ಮಾರುತಿ, ಮೂಡ್ಲಪ್ಪ, ಸೋಮಶೇಖರ್, ಹನುಮಂತರಾಯಪ್ಪ, ನಾಗಭೂಷಣ್, ಧನಂಜಯ್, ದೇವರಾಜಪ್ಪ, ಬೆಸ್ಕಾಂ ನೌಕರ ಗುತ್ತಿಗೆದಾರ ಸಂಘದ ಅಧ್ಯಕ್ಷ ರವಿಕುಮಾರ್ ಇತರರು ಇದ್ದರು.

  • ಶ್ರೀನಿವಾಸ್‌ ,ಕೊರಟಗೆರೆ.

Leave a Reply

Your email address will not be published. Required fields are marked *