ಕೆ.ಆರ್.ಪೇಟೆ-ಬೂಕನಕೆರೆ-ಗ್ರಾಮದಲ್ಲಿ-ಎನ್.ಎಸ್.ಎಸ್.ವಾರ್ಷಿಕ- ವಿಶೇಷ-ಶಿಬಿರಕ್ಕೆ-ಶಾಸಕ-ಹೆಚ್.ಟಿ.ಮಂಜು-ಚಾಲನೆ


ಕೆ.ಆರ್.ಪೇಟೆ: ರಾಷ್ಟ್ರ ಕಟ್ಟುವ ಕೆಲಸದಲ್ಲಿ ಯುವಜನರು ಸಕ್ರಿಯವಾಗಿ ಪಾಲ್ಗೊಳ್ಳಬೇಕು. ದೇಶ ನನಗೇನು ಮಾಡಿದೆ, ಸಮಾಜ ನನಗೇನು ಮಾಡಿದೆ ಎನ್ನುವ ಧೋರಣೆ ದೂರ ಮಾಡಿ, ದೇಶಕ್ಕಾಗಿ ಏನಾದರೊಂದು ಸೇವೆ ಮಾಡಲು ಮುಂದಾಗಬೇಕು ಎಂದು ಶಾಸಕ ಹೆಚ್.ಟಿ.ಮಂಜು ಹೇಳಿದರು.

ಅವರು ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆ ಗ್ರಾಮದಲ್ಲಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನವರು ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.

ರಾಷ್ಟ್ರೀಯ ಸೇವಾ ಯೋಜನೆ ಕಲ್ಪನೆ ಬದಲಾಗಬೇಕು. ಸ್ವಚ್ಛತೆ ಹಾಗೂ ಅರಿವನ್ನು ಮೂಡಿಸುವ ಜೊತೆಗೆ ಬಡಜನರ ದೈನಂದಿನ ಬದುಕನ್ನು ಅಭ್ಯಾಸ ಮಾಡಬೇಕು. ಸಮಾಜದಲ್ಲಿ ಉಳ್ಳವರು ಮತ್ತು ಬಡವರ ಅಂತರ ದಿನೇ ದಿನೇ ಜಾಸ್ತಿಯಾಗುತ್ತಿದೆ. ಇದಕ್ಕೆ ಕಾರಣವನ್ನು ವಿದ್ಯಾರ್ಥಿಗಳು ಇಂತಹ ಶಿಬಿರಗಳಲ್ಲಿ ಅಧ್ಯಯನ ಮಾಡುವ ಮೂಲಕ ಅನಾವರಣ ಮಾಡಬೇಕು. ಕೆ.ಆರ್.ಪೇಟೆ ತಾಲ್ಲೂಕು ಇಂದು ಶಿಕ್ಷಣದ ಕಾಶಿಯಂತೆ ಹೆಮ್ಮರವಾಗಿ ಬೆಳೆದಿದೆ. ತಾಲೂಕಿನ ಒಬ್ಬ ಜವಾಬ್ದಾರಿ ಶಾಸಕರು ಕೂಡ ಈ ವಿದ್ಯಾಸಂಸ್ಥೆಯಲ್ಲಿ ಓದಿದ್ದರು ಎಂಬುದನ್ನು ವಿದ್ಯಾರ್ಥಿಗಳು ಮನಗಾಣಬೇಕು. ನಾನು ಕೂಡ ಒಂದು ಕಾಲದಲ್ಲಿ ಎನ್‌ಎಸ್‌ಎಸ್ ವಿದ್ಯಾರ್ಥಿಯಾಗಿದ್ದೆ. ಈ ಕಾಲೇಜು ನನ್ನ ಅಂತರಾಳದ ಶಕ್ತಿಯನ್ನು ಹೊರಹೊಮ್ಮಿಸಿ ಶಾಸಕನನ್ನಾಗಿ ರೂಪಿಸಿದೆ. ಆದ್ದರಿಂದ ನೀವು ಕೂಡ ಭವಿಷ್ಯದಲ್ಲಿ ನಾಯಕತ್ವವನ್ನು ಪಡೆಯಬಹುದಾಗಿದೆ. ಬೂಕನಕೆರೆ ಗ್ರಾಮದ ಎಲ್ಲರ ಪ್ರೀತಿಯನ್ನು ಸಂಪಾದಿಸಿ ತಾಲೂಕಿಗೆ ಕೀರ್ತಿ ತನ್ನಿ ಎಂದು ಶಾಸಕ ಎಚ್.ಟಿ.ಮಂಜು ಆಶಿಸಿದರು.

ಕಾಲೇಜಿನ ಪ್ರಾಂಶುಪಾಲ ಡಾ.ವಿ.ಜಗದೀಶ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಭವಿಷ್ಯದ ಬದುಕನ್ನು ನಾಯಕತ್ವದ ಅಡಿಯಲ್ಲಿ ರೂಪಿಸಿಕೊಳ್ಳಲು ಸಹಕಾರಿಯಾಗುವಂತೆ ವಿದ್ಯಾರ್ಥಿಗಳನ್ನು ಅಣಿಗೊಳಿಸಲಾಗಿದೆ. ಬೂಕನಕೆರೆ ಗ್ರಾಮದ ಸಂಪೂರ್ಣ ಸ್ವಚ್ಛತೆಯನ್ನು ನಮ್ಮ ವಿದ್ಯಾರ್ಥಿಗಳು ಮಾಡಲಿದ್ದಾರೆ. ನಿಮ್ಮ ಮನೆ ಬಾಗಿಲಿಗೆ ಬಂದು ನಿಮ್ಮ ಆರ್ಥಿಕ ಸೌಲಭ್ಯಗಳು ಸರಕಾರದಿಂದ ಸಕಾಲಕ್ಕೆ ದೊರಕುತ್ತಿವೆಯಾ? ಎಂಬುದರ ಬಗ್ಗೆ ಅಧ್ಯಯನ ನಡೆಸಲಿದ್ದಾರೆ. ಎಲ್ಲರೂ ಕೂಡ ಗ್ರಾಮಾಂತರ ಪ್ರದೇಶದ ಮಕ್ಕಳು. ಅವರಿಗೂ ಕೂಡ ಗ್ರಾಮದ ಜೀವನ ಒಗ್ಗಿಹೋಗಿದೆ. ಬೂಕನಕೆರೆ ಗ್ರಾಮದ ಜನರು ನಮ್ಮ ವಿದ್ಯಾರ್ಥಿಗಳಿಂದ ಸಂಪೂರ್ಣ ಕೆಲಸವನ್ನು ಮಾಡಿಸುವ ಜೊತೆಗೆ ನಿಮ್ಮ ಮಕ್ಕಳಂತೆ ಅವರನ್ನು ಪ್ರೀತಿಸಬೇಕು ಎಂದು ಮನವಿ ಮಾಡಿದರು.



ಕಾಲೇಜಿನ ಪತ್ರಾಂಕಿತ ವ್ಯವಸ್ಥಾಪಕ ಬಿ.ಎ. ಮಂಜುನಾಥ್ ಪ್ರಾಸ್ತಾವಿಕ ನುಡಿಗಳನ್ನು ಮಾತನಾಡಿ, ಬೂಕನಕೆರೆ ಗ್ರಾಮವು ವಿಶ್ವದ ಭೂಪಟದಲ್ಲಿ ಕಂಗೊಳಿಸುತ್ತಿದೆ. ಈ ಗ್ರಾಮದಲ್ಲಿ ಹುಟ್ಟಿ ಕರ್ನಾಟಕದ ಮುಖ್ಯಮಂತ್ರಿ ಆಗಿ ಸೇವೆ ಸಲ್ಲಿಸಿರುವ ಯಡಿಯೂರಪ್ಪನವರ ಆಶಯಗಳ ಈಡೇರಿಕೆಗೆ ನಮ್ಮ ವಿದ್ಯಾರ್ಥಿಗಳು ಕಟಿಬದ್ಧರಾಗಿದ್ದಾರೆ. ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಬೇಕಾದ ಎಲ್ಲಾ ಕೆಲಸಗಳನ್ನು ನಮ್ಮ ವಿದ್ಯಾರ್ಥಿಗಳಿಂದ ಮಾಡಿಸುವ ಜವಾಬ್ದಾರಿ ನಮಗಿರುವ ಜೊತೆಗೆ ಸ್ಥಳೀಯರಿಗೂ ಇದೆ. ಇದರಲ್ಲಿ ಯಾವುದೆ ವ್ಯತ್ಯಾಸವಾಗದಂತೆ ನಮ್ಮ ವಿದ್ಯಾರ್ಥಿಗಳಿಂದ ಸೇವೆಯನ್ನು ಪಡೆದುಕೊಳ್ಳಬೇಕೆಂದು ಗ್ರಾಮಸ್ಥರಲ್ಲಿ ಮನವಿ ಮಾಡಿದರು.

ವೇದಿಕೆಯಲ್ಲಿ ಬೂಕನಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ಯಾಂಸುಂದರ್, ಬೂಕನಕೆರೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬೆಟ್ಟದ ಹೊಸೂರು ಪ್ರಕಾಶ್, ಸಂಘದ ನಿರ್ದೇಶಕ ಬಿ.ಎಸ್.ಮಹೇಶ್ ಅಡಿಕೆಸ್ವಾಮೀಗೌಡ, ಗಂಜಿಗೆರೆ ಸೊಸೈಟಿ ಅಧ್ಯಕ್ಷ ಕುರುಬಹಳ್ಳಿ ನಾಗೇಶ್, ಬೂಕನಕೆರೆ ಡೇರಿ ಅಧ್ಯಕ್ಷ ನಾಗೇಶ್, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಬಣ್ಣೇನಹಳ್ಳಿ ಧನಂಜಯ, ವಿಎಸ್‌ಎಸ್‌ಎನ್ ನಿರ್ದೇಶಕರುಗಳಾದ ಜ್ಞಾನೇಂದ್ರ, ಮನು, ಕಾಲೇಜಿನ ಹಿರಿಯ ಸಹಪ್ರಾಧ್ಯಾಪಕ ಡಾ. ಸಿ ರಮೇಶ್, ಡಾ ಜಯಕೀರ್ತಿ, ಎನ್ ಎಸ್ ಎಸ್ ಅಧಿಕಾರಿಗಳಾದ ಬೂವನಹಳ್ಳಿ ಪ್ರಕಾಶ್, ಪುಷ್ಪಲತಾ, ಸಹ ಶಿಬಿರ ಅಧಿಕಾರಿಗಳಾದ ಕಿರಣ್, ಆನಂದ್, ಐಕ್ಯುಎಸಿ ಸಂಚಾಲಕ ಉಮೇಶ್, ಗ್ರಂಥಪಾಲಕ ಅರುಣ್‌ಕುಮಾರ್, ಪ್ರಾಧ್ಯಾಪಕರುಗಳಾದ ಮುನಿಕೃಷ್ಣ,ಸುರೇಶ್,ರಘು, ಉಪನ್ಯಾಸಕರಾದ ವೀಣಾ, ಅನಿತಾ, ಶೃತಿ ಮತ್ತಿತರರು ಉಪಸ್ಥಿತರಿದ್ದರು.

– ಶ್ರೀನಿವಾಸ್‌ ಆರ್.

Leave a Reply

Your email address will not be published. Required fields are marked *

× How can I help you?