ಮೈಸೂರು – ಮಹಾನಗರ ಪಾಲಿಕೆ ವಲಯ-2 ರ ಆವರಣದಲ್ಲಿಂದು ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಜನ್ಮದಿನವನ್ನು ಆಚರಿಸಲಾಯಿತು.
ವಲಯ-2 ಆಯುಕ್ತರಾದ ನಾಗರಾಜು ಹೆಚ್ ರವರು ನಾಲ್ವಡಿ ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ ಶಿಕ್ಷಣ, ವಿದ್ಯುತ್, ನೀರು ಕೊಟ್ಟ ಮಹಾನ್ ಚೇತನ ನಾಲ್ವಡಿ ಮಹಾರಾಜರು. ಏಷ್ಯಾದಲ್ಲಿಯೇ ಮೊಟ್ಟ ಮೊದಲ ಬಾರಿಗೆ ವಿದ್ಯುತ್ ಘಟಕವನ್ನು ಸ್ಥಾಪಿಸಿದ ಹಾಗೂ ಕನ್ನಂಬಾಡಿ ಕಟ್ಟೆಯನ್ನು ಕಟ್ಟಿಸಿದ ಕೀರ್ತಿ ರಾಜಶ್ರೀ ರವರಿಗೆ ಸಲ್ಲಬೇಕೆಂದು ತಿಳಿಸಿದರು.

ಅಷ್ಟೇ ಅಲ್ಲದೇ ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯ ಕನ್ನಡಿಗರಿಗಾಗಿ ಕನ್ನಡ ಸಾಹಿತ್ಯ ಪರಿಷತ್, ಪ್ರಜಾಪ್ರತಿನಿಧಿ ಸಭೆ ಹೀಗೆ ನೂರಾರು ಸಂಸ್ಥೆಗಳನ್ನು ಸ್ಥಾಪಿಸಿದ ಮೊದಲಿಗರು, ನೊಂದವರ ಆಶಾಕಿರಣ ನಾಲ್ವಡಿ ಕೃಷ್ಣರಾಜ ಒಡೆಯರ್ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ನಿವೃತ್ತ ವರ್ಕ್ಇನ್ಸ್ಸ್ಪೆಕ್ಟರ್ ಶಿವಸ್ವಾಮಿ ರವರು ಒಬ್ಬ ರಾಜನಾಗಿ ತನ್ನ ಆಡಳಿತದಲ್ಲಿ ನೊಂದವರ, ಅಸ್ಪೃಶ್ಯರ, ಮಹಿಳೆಯರಿಗಾಗಿ ಎಷ್ಟೊಂದು ಕಾನೂನುಗಳನ್ನು ಜಾರಿಗೆ ತಂದಿದ್ದರು ಎಂದರೆ ನಿಜಕ್ಕೂ ಮೆಚ್ಚತಕ್ಕ ವಿಷಯ.
ಅನಾದಿ ಕಾಲದಿಂದಲೂ ಹೆಣ್ಣಿನ ಮೇಲೆ ದೇವದಾಸಿ ಪದ್ಧತಿ ಹೇರಿ ಅವರನ್ನು ಶೋಷಿಸುತ್ತಾ ಬಂದಿತ್ತು. ಇಂತಹ ಅನಿಷ್ಠ ಪದ್ಧತಿಯನ್ನು ನಾಲ್ವಡಿ ರವರು ಸರ್ಕಾರದ ಆಜ್ಞೆ ಹೊರಡಿಸಿ ದುಷ್ಟ ಪದ್ಧತಿ ಎಂದು ಘೋಷಿಸಿ ನಿಷೇಧಿಸಿದರು.

ಕಾರ್ಯಕ್ರಮದಲ್ಲಿ ಪಾಲಿಕೆ ಇಂಜಿನಿಯರ್ಗಳಾದ ದಯಾನಂದ್, ಮಾರ್ಟಿನ್, ಪಾಲಿಕೆ ಸಿಬ್ಬಂದಿ ಪ್ರಸಾದ್, ಶಿವಮೂರ್ತಿ, ದೀಪಕ್, ಮುಖಂಡರಾದ ಈಶ್ವರ್.ಸಿ, ಮೋಹನ್, ಜಿತೇಂದ್ರ, ಬೆಟ್ಟಸ್ವಾಮಿ, ರಾಜು, ಲೋಕೇಶ್, ಉಪನ್ಯಾಸಕರಾದ ಡಾ.ಡಿ.ಸಿ.ಉಮೇಶ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.