ನಾಗಮಂಗಲ- ಸಮಸ್ಯೆಗಳು ಎದುರಾದಾಗ ಮಾತ್ರ ಆಂದೋಲನಗಳು ನಡೆದು ಸಮಸ್ಯೆ ಪರಿಹಾರವಾಗಿದೆ- ಎನ್ ಚಲುವರಾಯಸ್ವಾಮಿ

ನಾಗಮಂಗಲ- ಸಮಾಜದಲ್ಲಿ ಸಮಸ್ಯೆಗಳು ಎದುರಾದಾಗ ಮಾತ್ರ ಆಂದೋಲನಗಳು ನಡೆದು ಸಮಸ್ಯೆ ಪರಿಹಾರವಾಗಿದೆ. ಅದೇ ರೀತಿ ರಾಸಾಯನಿಕ ಗೊಬ್ಬರ ಹಾಗೂ ನೀರಾವರಿಯ ಅತಿಯಾದ ಬಳಕೆಯ ಸಮಸ್ಯೆಗಳ ಬಗ್ಗೆ ಕೃಷಿಯಲ್ಲಿ ಆಂದೋಲನ ನಡೆದು ನೈಸರ್ಗಿಕ, ಸಾವಯವ ಹಾಗೂ ಸಮಗ್ರ ಕೃಷಿಯ ನ್ನು ರೈತರು ಅಳವಡಿಕೊಂಡು ಕೃಷಿಯಲ್ಲಿ ಹೊಸ ಬದಲಾವಣೆ ತರಬೇಕಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಅಭಿಪ್ರಾಯಪಟ್ಟರು.

ಅವರು ಇಂದುನಿರ್ಮಲ ಭೂ ಮಾತಾ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ಪದ್ಮಶ್ರೀ ಸುಭಾಷ್ ಪಳೇಕರ್ ಅವರ 3 ದಿನಗಳ
ಕೃಷಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಕೃಷಿ ಸಚಿವನಾಗಿ ಹಸಿರೆಲೆ ಗೊಬ್ನರವನ್ನು ಪ್ರೋತ್ಸಾಹಿಸಲು ಹೆಚ್ಚಿನ ಅನುದಾನವನ್ನು ನೀಡಲಾಗಿದೆ. ಕೃಷಿಯಲ್ಲಿ ನಾಟಿ ಹಾಗೂ ಕಟಾವು ಪದ್ಧತಿಯಲ್ಲಿ ಯಂತ್ರೋಪಕರಣಗಳ ಬಳಕೆಗೆ ಸಹಾಯಧನ ನೀಡಲಾಗುತ್ತಿದೆ ಎಂದರು.

ರೈತರು ಬೆಳೆದ ಬೆಳೆಯನ್ನು ಸಂಸ್ಕರಣೆ ಮಾಡಿದರೆ ಹೆಚ್ಚು ಲಾಭ ಗಳಿಸಬಹುದು. ಇದನ್ನು ಪ್ರೋತ್ಸಾಹಿಸಲು ಎಫ್.ಪಿ.ಓ ಹಾಗೂ ಸರ್ಕಾರದ ವತಿಯಿಂದ ಸಂಸ್ಕರಣಾ ಘಟಕಗಳನ್ನು ಹೆಚ್ಚಿಸಲಾಗುತ್ತಿದೆ ಎಂದರು.

ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರು ಮಾತನಾಡಿ ಪ್ರಕೃತಿ ಮತ್ತು ಧರ್ಮ ಉಳಿದರೆ ನಾವು ಉಳಿಯುತ್ತವೆ‌ ಪ್ರಕೃತಿಯನ್ನು ಉಳಿಸಲು ನೈಸರ್ಗಿಕ ಕೃಷಿಯನ್ನು ಪ್ರೋತ್ಸಾಹಿಸಿ. ನೈಸರ್ಗಿಕ ಕೃಷಿಯನ್ನು ಪ್ರೋತ್ಸಾಹಿಸುತ್ತಿರುವ ಡಾ: ಸುಭಾಷ್ ಪಾಳೇಕರ್ ಅವರು ಕೃಷಿ ವಿಜ್ಞಾನಿ ಹಾಗೂ ಕೃಷಿಯ ಸಂತ ಎಂದು ಬಣ್ಣಿಸಿದರು.

ಕೃಷಿಗೆ ಹೆಚ್ಚು ಪ್ರಮುಖ್ಯತೆ ನೀಡಿರುವ ಆದಿಚುಂಚನಗಿರಿ ಮಠಕ್ಕೆ ಕೃಷಿ ವಿಜ್ಞಾನ ಕಾಲೇಜು ಪ್ರಾರಂಭಿಸಲು ಕೃಷಿ ಸಚಿವರು ತಮ್ಮ‌ಸಹಕಾರ ನೀಡಿರುತ್ತಾರೆ. ಜಿಲ್ಲೆಯಲ್ಲಿ ಕೃಷಿ ಪದ್ಧತಿಗಳನ್ನು ಸುಧಾರಿಸಲು ಕೃಷಿ ಸಚಿವರು ಹಲವಾರು ಕಾರ್ಯಕ್ರಮಗಳನ್ನು ಕೃಷಿ ಇಲಾಖೆ ಮೂಲಕ ಆಯೋಜಿಸುತ್ತಿದ್ದಾರೆ. ರೈತರು ಸದುಪಯೋಗ ಪಡೆದುಕೊಳ್ಳಿ ಎಂದರು.

ಇಳುವರಿಯನ್ನು ಹೆಚ್ಚಿಸಲು ರಾಸಾಯನಿಕ ವಸ್ತುಗಳನ್ನು ಬಳಸಿ ಮಣ್ಣಿನ ಫಲವತ್ತತ್ತೆಯನ್ನು ಕ್ಷೀಣಗೊಳಿಸಲಾಗುತ್ತಿದೆ. ಇನ್ನು ಹೆಚ್ಚಿನ ರಾಸಾಯನಿಕ ಗೊಬ್ಬರ ಬಳಸಿದರೆ ಇಳುವರಿ ಕಡಿಮೆಯಾಗುತ್ತದೆ.ಕೃಷಿಯಲ್ಲಿ ರಾಸಾಯನಿಕ ಗೊಬ್ಬರ ಬಳಕೆಯ ಖರ್ಚು ಹೆಚ್ಚಾಗುತ್ತದೆ ಇದನ್ನು‌ ರೈತರು ಅರ್ಥ ಮಾಡಿಕೊಳ್ಳಬೇಕು ಎಂದರು.

ಸುಭಾಷ್ ಪಾಳೇಕರ್ ಪದ್ಧತಿಯಲ್ಲಿ ಹೆಚ್ಚಿನ ಹೂಡಿಕೆ ಇಲ್ಲದೆ ಲಾಭದಾಯಕ ಕೃಷಿಯನ್ನು ಮಾಡಿ ಉತ್ತಮ ಆರೋಗ್ಯಯುತ ಆಹಾರವನ್ನು ಜನರಿಗೆ ನೀಡಬಹುದು ಎಂದರೆ ರೈತರು ಸಹ ತಮ್ಮ ಕೃಷಿಯಲ್ಲಿ ಸುಭಾಷ್ ಪಾಳೇಕರ್ ಪದ್ಧತಿಯನ್ನು ಅಳವಡಿಸಿಕೊಳ್ಳುತ್ತಾರೆ ಎಂದರು.

ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಕ ಮಣ್ಣಿನ ಫಲವತ್ತತ್ತೆ ಹೆಚ್ಚಿಸಲು ಸಾಧ್ಯವಿಲ್ಲ. ರೈತರು ನೈಸರ್ಗಿಕ ಹಾಗೂ ಸಾವಯವ ಕೃಷಿ ಅಳವಡಿಸಿಕೊಳ್ಳಬೇಕಿದೆ. ಸುಭಾಷ್ ಪಾಳೇಕರ್ ಕೃಷಿ ಪದ್ಧತಿ ಹೆಚ್ಚು ಪ್ರಚಲಿತವಾದರೆ ಮುಂದಿನ ದಿನಗಳಲ್ಲಿ ಸುಭಾಷ್ ಪಾಳೇಕರ್ ಕೃಷಿ ಪದ್ಧತಿ ಕೃಷಿ ವಿಜ್ಞಾನ ಕಾಲೇಜಿನ ವಿದ್ಯಾಭ್ಯಾಸದಲ್ಲಿ ಒಂದು ವಿಷಯದ ಭಾಗವಾಗುವುದರಲ್ಲಿ ಸಂಶಯವಿಲ್ಲ ಎಂದರು.

ಪದ್ಮಶ್ರೀ ಪುರಸ್ಕೃತ ಡಾ; ಸುಭಾಷ್ ಪಾಳೇಕರ್ ಅವರು ಮಾತನಾಡಿ ನಾವು ಬೆಳೆಯುತ್ತಿರುವ ಬೆಳೆಗಳಲ್ಲಿ ರಾಸಾಯನಿಕ ಗೊಬ್ಬರ, ಕೀಟನಾಶಕಗಳನ್ನು ಬಳಸಿ ಆಹಾರವನ್ನು ರಾಸಾಯನಿಕ ವಸ್ತುಗಳಿಂದ ವಿಷಯುತವಾಗಿ ಮಾಡುತ್ತಿದ್ದೇವೆ. ಸುಭಾಷ್ ಪಾಳೇಕರ್ ಅವರ ಕೃಷಿ ಪದ್ಧತಿಯನ್ನು ಬಳಸಿಕೊಂಡು ವಿಷರಹಿತ, ಆರೋಗ್ಯಯುತ ಬೆಳೆಯನ್ನು ಬೆಳೆಯಲು ರೈತರನ್ನು ಪ್ರೋತ್ಸಾಹಿಸಬೇಕು ಎಂದರು.

ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳ ಬಳಕೆಯಾದ ಆಹಾರ ಸೇವನೆ ಮಾಡುವುದರಿಂದ ದೇಹದಲ್ಲಿ ರಾಸಾಯನಿಕ ವಸ್ತುಗಳು ಸೇರಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕ್ಷೀಣಿಸುತ್ತದೆ. ಇದರಿಂದ ಕ್ಯಾನ್ಸರ್, ಮಧುಮೇಹ ದಂತಹ ಔಷಧಿಗಳಿಂದ ಗುಣಮುಖವಾಗದ ಖಾಯಿಲೆಗಳು ಹೆಚ್ಚಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಮನ್ ಮುಲ್ ಉಪಧ್ಯಕ್ಷರಾದ ಕೃಷ್ಣೇಗೌಡ, ಜಂಟಿ ಕೃಷಿ ನಿರ್ದೇಶಕ ಅಶೋಕ್, ಗಣ್ಯರಾದ ಪ್ರಸನ್ನ ಮೂರ್ತಿ, ತ್ಯಾಗರಾಜು, ಸೇರಿದಂತೆ ಇನ್ನಿತರೆ ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *